ಮಂಗಳೂರು - ಬೆಂಗಳೂರು ರೈಲು ಇಂದಿನಿಂದ ಪುನರಾರಂಭ
ಮಂಗಳೂರು, ಜುಲೈ 25: ಬೆಂಗಳೂರು-ಮಂಗಳೂರು ರೈಲು ಮಾರ್ಗದ ನಡುವಿನ ಸಿರಿವಾಗಿಲು ಎಂಬಲ್ಲಿ ನಡೆಯುತ್ತಿರುವ ಬಂಡೆ ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದು, ರೈಲು ಓಡಾಟ ಇಂದು ಸಂಜೆಯಿಂದ ಪುನರಾರಂಭಗೊಳ್ಳಲಿದೆ.
ಹಾಸನ-ಮಂಗಳೂರು ರೈಲು ಮಾರ್ಗದಲ್ಲಿ 3 ದಿನ ಸಂಚಾರ ಸ್ಥಗಿತ
ಸುಬ್ರಹ್ಮಣ್ಯ ರಸ್ತೆ-ಸಕಲೇಶಪುರ ಮಧ್ಯೆ ಸಿರಿಬಾಗಿಲಿನ ಮಣಿಬಂಡ ಎಂಬಲ್ಲಿ ಟನಲ್ ಪ್ರವೇಶದ್ವಾರ ಬಳಿ ಹಳಿಯ ಮೇಲೆ ಉರುಳಲು ಸಿದ್ಧವಾಗಿದ್ದ ಬಂಡೆಕಲ್ಲನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಲಾಗಿತ್ತು. ಭಾರಿ ಮಳೆ ನಡುವೆ ಕಳೆದ ನಾಲ್ಕು ದಿನಗಳಿಂದ ಸತತವಾಗಿ ನಡೆಯುತ್ತಿದ್ದ ಬೆಟ್ಟದ ಮೇಲಿನ ಬಂಡೆಕಲ್ಲು ತೆರವು ಕಾರ್ಯಾಚರಣೆ ಅಂತ್ಯಗೊಂಡಿದೆ. ಮತ್ತೆ ಭೂಕುಸಿತ ಸಂಭವಿಸದೆ ಇದ್ದಲ್ಲಿ ಸುಬ್ರಹ್ಮಣ್ಯ- ಸಕಲೇಶಪುರ ಮಾರ್ಗದಲ್ಲಿ ರೈಲು ಓಡಾಟ ಇಂದು ಸಂಜೆಯಿಂದ ಪುನರಾರಂಭವಾಗಲಿದೆ.
ನಿನ್ನೆ ರಾತ್ರಿಯಿಂದ ಶಿರಾಡಿ ಘಾಟ್ ಪ್ರದೇಶದಲ್ಲಿ ಮಳೆ ತೀವ್ರತೆ ಕಡಿಮೆಯಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ವೇಗವಾಗಿ ನಡೆದಿದೆ. ಬಂಡೆಯನ್ನು ಪುಡಿಗೈಯಲಾಗಿದ್ದು, ಹಳಿ ಮೇಲೆ ಬಿದ್ದಿರುವ ಬಂಡೆಯ ಚೂರು ಸಹಿತ ಮಣ್ಣನ್ನು ತೆರವುಗೊಳಿಸಲಾಗಿದೆ. ರೈಲ್ವೆ ಇಲಾಖೆಯ ತಾಂತ್ರಿಕ ವಿಭಾಗದ ಅಧಿಕಾರಿಗಳು ಹಳಿ ಪರಿಶೀಲನೆ ನಡೆಸಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಆರಂಭದಲ್ಲಿ ಗೂಡ್ಸ್ ರೈಲು ಪ್ರಾಯೋಗಿಕವಾಗಿ ಓಡಾಟ ನಡೆಸಿದ ಬಳಿಕ ಪ್ರಯಾಣಿಕ ರೈಲನ್ನು ಬಿಡಲಾಗುವುದು ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.