ರೌಡಿಶೀಟರ್ ಪವನ್ ರಾಜ್ ಶೆಟ್ಟಿ ಕೊಲೆ ಆರೋಪಿಗಳು 24 ಗಂಟೆಗಳಲ್ಲಿ ಅಂದರ್
ಮಂಗಳೂರು, ಜುಲೈ 26: ಮಂಗಳೂರಿನ ಹೊರವಲಯದ ವಾಮಂಜೂರಿನಲ್ಲಿ ನಡೆದ ರೌಡಿಶೀಟರ್ ಪವನ್ ರಾಜ್ ಶೆಟ್ಟಿ ಕೊಲೆ ಆರೋಪಿಗಳನ್ನು ಕೊಲೆ ನಡೆದ 24 ಗಂಟೆಗಳೊಳಗೆ ಪೊಲೀಸರು ಭೇದಿಸಿದ್ದಾರೆ.
ವಾಮಂಜೂರು ರೋಹಿಯ ಮಗ ಪವನ್ ರಾಜ್ ಶೆಟ್ಟಿ ಬರ್ಬರ ಕೊಲೆ
ಜುಲೈ 24 ರ ಮಧ್ಯರಾತ್ರಿ ಈ ಕೊಲೆ ನಡೆದಿದ್ದು, ವಾಮಂಜೂರಿನ ಕುಟ್ಟಿಪಲ್ಕೆ ಲೇ ಔಟ್ ಬಳಿ ಆತನ ಶವ ಪತ್ತೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ ಮಂಗಳೂರು ಗ್ರಾಮಾಂತರ ಪೋಲೀಸರು ಇದೀಗ ಹತ್ಯೆಗೆ ಸಂಬಂಧಿಸಿದಂತೆ 3 ಆರೋಪಿಗಳನ್ನು ಬಂಧಿಸಿದ್ದಾರೆ. ವಾಮಂಜೂರಿನ ಬಿಪಿನ್, ಶರಣ್ ಹಾಗೂ ಹರೀಶ್ ಪೋಲೀಸರಿಂದ ಬಂಧಿತರಾದ ಆರೋಪಿಗಳಾಗಿದ್ದಾರೆ.
ಪವನ್ ರಾಜ್ ಕೊಲೆ ಮಾಡಿದ ಬಳಿಕ ಆರೋಪಿಗಳು ಹತ್ಯೆಗೆ ಬಳಸಿದ ಲಾಂಗ್ ಮಚ್ಚುಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು. ಇದು ಪೊಲೀಸರಿಗೆ ಮಹತ್ವದ ಸಾಕ್ಷ್ಯ ನೀಡಿತ್ತು.
ಕೊಲೆಯಾದ ಪವನ್ ರಾಜ್ ಶೆಟ್ಟಿ ರೌಡಿ ಶೀಟರ್ ಆಗಿದ್ದು, ಈತನ ಮೇಲೆ ಹಲವು ಕೊಲೆಯತ್ನ ಪ್ರಕರಣಗಳು ದಾಖಲಾಗಿತ್ತು. ಪವನ್ ರಾಜ್ ಶೆಟ್ಟಿ ಈ ಹಿಂದೆ ಕೊಲೆಯಾಗಿದ್ದ ವಾಮಂಜೂರು ರೋಹಿ ಮಗನಾಗಿದ್ದು, ತನ್ನ ತಂದೆಯ ಕೊಲೆ ನಡೆಸಿದವರನ್ನು ಮುಗಿಸುವುದಾಗಿ ಹೇಳಿಕೊಂಡಿದ್ದನು.
ಪೋಲೀಸರು ವಶಪಡಿಸಿಕೊಂಡ ಆರೋಪಿಗಳೆಲ್ಲರೂ ವಾಮಂಜೂರಿನ ಸ್ಥಳೀಯರೇ ಆಗಿದ್ದು, ಕೊಲೆಗೆ ನಿಖರ ಕಾರಣ ಏನು ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.