ಜನಾರ್ದನ ಪೂಜಾರಿ ಪರ ಬೆಂಗಳೂರಿನಲ್ಲಿ ಬ್ಯಾಟಿಂಗ್
ಮಂಗಳೂರು ಕ್ಷೇತ್ರದ ಟಿಕೆಟ್ ಹಂಚಿಕೆಯ ಕುರಿತು ವಿವಾದವೆದ್ದು ಹಲವು ದಿನಗಳು ಕಳೆದಿವೆ. ಈ ಬಾರಿಯ ಚುನಾವಣೆಯಲ್ಲಿ ಕೇಂದ್ರದಲ್ಲಿ ತಮ್ಮ ಪ್ರಭಾವ ಬಳಸಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ತಮ್ಮ ಪುತ್ರ ಹರ್ಷ ಮೊಯ್ಲಿಗೆ ಟಿಕೆಟ್ ಕೊಡಿಸುತ್ತಾರೆ. ಸಂಸದ ಜನಾರ್ದನ ಪೂಜಾರಿಗೆ ಟಿಕೆಟ್ ನೀಡುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. [ದಕ್ಷಿಣ ಕನ್ನಡ ಹೊಸಮುಖವೊ-ಹಳೆಹುಲಿಯೋ]
ಈ ಕುರಿತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದ್ದ ಮಾತುಕತೆಗಳು ಬೆಂಗಳೂರು ತಲುಪಿದ್ದು, ಜನಾರ್ದನ ಪೂಜಾರಿಗೆ ಟಿಕೆಟ್ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ. ಇದರಿಂದ ಟಿಕೆಟ್ ಹಂಚಿಕೆ ವಿವಾದ ಬೆಂಗಳೂರಿಗೆ ಕಾಲಿಟ್ಟಿದೆ. [ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ]
ಆರೋಗ್ಯ ಸಚಿವ ಯುಟಿ ಖಾದರ್, ಬೆಳ್ತಂಗಡಿ ಶಾಸಕ ವಸಂತ್ ಬಂಗೇರಾ ನೇತೃತ್ವದ ಸುಮಾರು 300 ಸದಸ್ಯರ ನಿಯೋಗ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಜನಾರ್ದನ ಪೂಜಾರಿ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿತು. ದಕ್ಷಿಣ ಕನ್ನಡ ಜಿಲ್ಲಾ ಘಟಕ ಸಹ ಪೂಜಾರಿ ಅವರು ಸ್ಪರ್ಧಿಸಬೇಕೆಂದು ಬಯಸುತ್ತಿದೆ ಎಂದು ಸಿಎಂಗೆ ಮನವಿಕೆ ಮಾಡಿಕೊಟ್ಟಿದ್ದಾರೆ.
ನಿಯೋಗದ ಮನವಿ ಆಲಿಸಿದ ಸಿಎಂ ಸಿದ್ದರಾಮಯ್ಯ, ಟಿಕೆಟ್ ಹಂಚಿಕೆ ಬಗ್ಗೆ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಜನಾರ್ದನ ಪೂಜಾರಿ ಅವರಿಗೆ ಟಿಕೆಟ್ ನೀಡುವಂತೆ ನೀವು ಸಲ್ಲಿಸಿದ ಮನವಿಯನ್ನು ರಾಷ್ಟ್ರೀಯ ನಾಯಕರಿಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ವೀರಪ್ಪ ಮೊಯ್ಲಿ ಪುತ್ರ ಹರ್ಷ ಅವರು, ಸ್ವತಃ ಮಂಗಳೂರಿನ ಮತದಾರರಲ್ಲ. ಸದ್ಯ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಮಾತು ಕೇಳಿಬರುತ್ತಿರುವುದರಿಂದ ಕಾರ್ಯಕರ್ತರಲ್ಲಿ ಅನಗತ್ಯ ಗೊಂದಲ ಉಂಟಾಗುತ್ತಿದೆ ಎಂದು ಸಿಎಂಗೆ ನಿಯೋಗ ಮನವರಿಕೆ ಮಾಡಿಕೊಟ್ಟಿದೆ. ಜನಾರ್ದನ ಪೂಜಾರಿ ಅವರು ಮಹಾನಗರ ಪಾಲಿಕೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷದ ಗೆಲುವಿಗೆ ಸಹಕರಿಸಿದ್ದಾರೆ ಆದ್ದರಿಂದ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಹರ್ಷ ಮೊಯ್ಲಿ ಹೇಳುವುದೇನು : ಈ ನಡುವೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಹರ್ಷ ಮೊಯ್ಲಿ ನಾನು ಮಂಗಳೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಕೆಪಿಸಿಸಿ ಕೇಂದ್ರ ನಾಯಕರಿಗೆ ಕಳುಹಿಸಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರಿಗೆ. ಪ್ರಭಾವ ಬಳಸಿ ಕೊನೆ ಕ್ಷಣದಲ್ಲಿ ಹೆಸರು ಸೇರಿಸಲಾಗಿದೆ ಎಂಬುದು ಸತ್ಯಕ್ಕೆ ದೂರವಾದುದು ಎಂದು ಹೇಳಿದ್ದಾರೆ.