ಪ್ರಾಣಕ್ಕೆ ಸಂಚಕಾರ ತಂದ ದೂದ್ ಪೇಡಾ ಪಾರ್ಸೇಲ್!
ಮಂಗಳೂರು, ಏಪ್ರಿಲ್: 13 ಕೊಲ್ಲಿ ರಾಷ್ಟ್ರಕ್ಕೆ ಹೋಗುವವರು ಗೆಳೆಯರು ಅಥವಾ ನೆರೆಹೊರೆಯವರು ನೀಡುವ ಪಾರ್ಸೇಲ್ ಅನ್ನು ಒಮ್ಮೆ ಪರಿಶೀಲಿಸಿ ಪಡೆಯುವುದು ಉತ್ತಮ. ಯಾಕಂದ್ರೆ ಮಂಗಳೂರಿನಲ್ಲಿ ನಡೆದ ದೂದ್ ಪೇಡ ಘಟನೆ ಎಂಥವರನ್ನು ಬೆಚ್ಚಿ ಬೀಳಿಸುವಂತಿದೆ.
ಪೇಡಾದೊಳಗೆ ಏನಿತ್ತು ಗೊತ್ತಾ?
ಮಂಗಳೂರಿನ ಕನ್ನಂಗಾರು ನಿವಾಸಿ ನೂರ್ ಎಂಬ ಯುವಕ ಕೊಲ್ಲಿ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದು, ಇತ್ತೀಚೆಗಷ್ಟೇ ರಜೆ ಪಡೆದು ಊರಿಗೆ ಬಂದಿದ್ದನು. ರಜೆ ಮುಗಿದ ನಂತರ ನೂರ್ ಮತ್ತೇ ಸೌದಿ ಅರೇಬಿಯಾಕ್ಕೆ ತೆರಳಲು ತಯಾರಿ ನಡೆಸುತ್ತಿದ್ದ. ಆಗ ದುಬೈಲ್ ನಲ್ಲಿರುವ ಈತನ ಮಿತ್ರರಾದ ರಾಹಿಲ್ ಮತ್ತು ರಾಝಿಂ ಎಂಬವರು ನೂರ್ ಗೆ ಕರೆ ಮಾಡಿ ಊರಿನಿಂದ
ಸೌದಿಗೆ ಬರುವಾಗ ಬರುವಾಗ 'ನಮ್ಮ ಪೇಡಾ ಪಾರ್ಸೆಲ್ ಕೂಡ ತೆಗೆದುಕೊಂಡು ಬಾ' ಎಂದು ಸೂಚಿಸಿದ್ದಾರೆ.

ಸ್ನೇಹಿತರು ಹೇಳಿದಂತೆ ಮಂಗಳೂರಿನ ನಿವಾಸಿಯೊಬ್ಬ ನೂರ್ ಗೆ ಪೇಡಾ ತುಂಬಿದ ಪಾರ್ಸೆಲ್ ತಂದುಕೊಟ್ಟ. ಪಾರ್ಸೆಲ್ ಅನ್ನು ಬ್ಯಾಗ್ ನಲ್ಲಿಟ್ಟುಕೊಂಡ ನೂರ್ ಗೆ ದುಬೈಲ್ ನಲ್ಲಿ ಕಂಪೆನಿ ಪ್ರಾರಂಭಿಸಿರುವ ಗೆಳೆಯರು ಊರಿನಿಂದ ಯಾಕೆ ಸಿಹಿ ತಿಂಡಿ ತರಿಸಿಕೊಳ್ಳುತ್ತಾರೆ ಎಂಬ ಅನುಮಾನ ಕಾಡತೊಡಗಿದೆ. ಒಮ್ಮೆ ನೋಡೋಣವೆಂದು ನೂರ್ ಪಾರ್ಸೆಲ್ ತೆರೆದು ನೋಡಿದಾಗ ಪೊಟ್ಟಣ ತುಂಬಾ ದೂದ್ ಪೇಡಾ ತುಂಬಿತ್ತು. ನೂರ್ ಗೆ ಆಸೆಯಾಗಿ ಒಂದು ಪೇಡಾ ತಿನ್ನಲು ಬಾಯಲಿಟ್ಟಾಗ ಆಶ್ಚರ್ಯ ಕಾದಿತ್ತು. ಪೇಡಾದೊಳಗೆ ಒಂದು ನೀಲಿ ಬಣ್ಣದ ಟ್ಯಾಬ್ಲೆಟ್ ಮಾದರಿಯ ವಸ್ತು ಪತ್ತೆಯಾಗಿತ್ತು. ಹೌದು ಆ ಟ್ಯಾಬ್ಲೆಟ್ ಅಂತಿಂಥದ್ದಲ್ಲ. ಅಂದರೆ ನೀವು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಅದೊಂದು ಟ್ಯಾಬ್ಲೆಟ್ ಮಾದರಿಯಲ್ಲಿದ್ದ ಡ್ರಗ್.
ಜಗಳವಾಡಿದ ಸ್ನೇಹಿತರು...
ಮರುದಿನ ವಿಮಾನವೇರಿ ಸೌದಿ ತಲುಪಿದ ನೂರ್ ನನ್ನು ಎಂದಿನಂತೆ ಗೆಳೆಯರು ಬರಮಾಡಿಕೊಂಡರು. ನಂತರ ಅವರ ಕೈಗೆ ಪಾರ್ಸೆಲ್ ಹಸ್ತಾಂತರಿಸಿದ ನೂರ್ ಏನು ಗೊತ್ತಿಲ್ಲದಂತೆ ನಟಿಸಿದನು.
ಗೆಳೆಯರು ಪಾರ್ಸೆಲ್ ತೆಗೆದು ನೋಡಿದಾಗ ದೂದ್ ಪೇಡಾದೊಳಗಿದ್ದ ನೀಲಿ ಬಣ್ಣದ ಟ್ಯಾಬ್ಲೆಟ್ ಅಂದರೆ ಡ್ರಗ್ ನಾಪತ್ತೆಯಾಗಿತ್ತು. ಇದರಿಂದ ಕುಪಿತಗೊಂಡ ಸ್ನೇಹಿತರು ನೂರ್ ಗೆ ರೇಗುತ್ತಾರೆ.
ನೂರ್ ಸಹ ತನ್ನ ಗೆಳೆಯರನ್ನು ಸರಿಯಾಗಿ ತರಾಟೆಗೆ ತೆಗೆದುಕೊಳ್ಳುತ್ತಾನೆ. ಈ ವಿಚಾರ ಮಂಗಳೂರಿನಲ್ಲಿರುವ ನೂರ್ ಸಹೋದರನಿಗೆ ತಿಳಿದು, ಆತ ಮಂಗಳೂರಿನ ನಾರ್ಕೊಟಿಕ್ ಸೆಲ್ ಗೆ ದೂರು ನೀಡುತ್ತಾನೆ.
ಇದರಿಂದ ಹೆದರಿದ ನೂರ್ ಗೆಳೆಯರಾದ ರಾಹಿಲ್ ಮತ್ತು ರಾಝೀಂ ವಿವಾದ ಮಾಡದಂತೆ ಒಪ್ಪಂದಕ್ಕೆ ಬರಲು 10 ಲಕ್ಷ ರೂಪಾಯಿ ಆಫರ್ ನೀಡುತ್ತಾರೆ. ಇದಕ್ಕೆ ನೂರ್ ಒಪ್ಪದಿದ್ದಾಗ ಮಂಗಳೂರಿನಲ್ಲಿ ಡೀಲ್ ಕುದುರಿಸಲು ಆರೋಪಿಗಳಿಬ್ಬರೂ ಮಂಗಳೂರಿಗೆ ಆಗಮಿಸುತ್ತಾರೆ.
ಸ್ಥಳೀಯ ಮಸೀದಿಯಲ್ಲಿ ಪಂಚಾಯತಿ
ಗೆಳೆಯರ ಪ್ರಕರಣ ಇತ್ಯರ್ಥ ಮಾಡಲು ಆರೋಪಿಗಳು ಬಳಸಿದ್ದು ಮಸೀದಿಯನ್ನು. ಮಂಗಳೂರಿನ ಖಾಸಗಿ ಆಸ್ಪತ್ರೆಯ ಮಾಲೀಕ, ಗುತ್ತಿಗೆದಾರ ಹಾಗೂ ನಕಲಿ ವೈದ್ಯನೋರ್ವ ಪ್ರಕರಣ ಇತ್ಯರ್ಥಕ್ಕೆ ಮಧ್ಯ ಪ್ರವೇಶಿಸುತ್ತಾರೆ. ಕನ್ನಂಗಾರಿನ ಮಸೀದಿಯಲ್ಲಿ ನೂರ್ ನ ಸಹೋದರನನ್ನು ಕರೆಸಿ ಪಂಚಾಯಿತಿ ನಡೆಸಿ, ಆರೋಪಿಗಳು ಮಾಡಿದ ತಪ್ಪಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡುತ್ತಾರೆ. ನಂತರ ನಾರ್ಕೊಟಿಕ್ ಸೆಲ್ ಗೆ ನೀಡಿದ ದೂರು ಕೂಡ ಹಿಂತೆಗೆದುಕೊಳ್ಳಲಾಗುತ್ತದೆ. ಆದರೆ ಆರೋಪಿಗಳು ನೀಡಿದ 2 ಲಕ್ಷ ರೂಪಾಯಿಯನ್ನು ನೂರ್ ಸಹೋದರ ತೆಗೆದುಕೊಳ್ಳದೆ ಮಸೀದಿಗೆ ಸಂದಾಯ ಮಾಡುತ್ತಾರೆ.
ಯಾವುದೇ ತನಿಖೆ ನಡೆಸದ ನಾರ್ಕೋಟಿಕ್ ಸೆಲ್
ಅಮಾಯಕ ನೂರ್ ಪಾರ್ಸೆಲ್ ತೆಗೆದು ನೋಡದೆ, ವಿಮಾನ ಏರಿದ್ದರೆ ಡ್ರಗ್ ಸಮೇತ ಸಿಕ್ಕಿ ಬಿದ್ದು, ನೂರ್ ತಲೆ ಉರುಳುತ್ತಿತ್ತು. ಆದರೆ ನೂರ್ ಪವಾಡ ಸದೃಶ ಪಾರಾಗಿದ್ದಾನೆ. ಪಂಚಾಯಿತಿಯಲ್ಲಿ ಆರೋಪಿಗಳ ಪರ ವಕಾಲತ್ತು ವಹಿಸಿ ಬಂದಿದ್ದ ಊರಿನ ಗಣ್ಯರು ದೂರು ನೀಡಿದ್ದರೂ ಯಾವುದೇ ತನಿಖೆ ನಡೆಸದಿರುವುದು ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಅನುಮಾನ ಮೂಡಿಸಿದೆ.
ಅಂತರಾಷ್ಟ್ರೀಯ ಡ್ರಗ್ ಮಾಫಿಯಾದಲ್ಲಿ ರಾಹಿಲ್ ಮತ್ತು ರಾಝೀಂ
ದುಬೈ ನಲ್ಲಿ exelon ಎಂಬ ಕಂಪೆನಿ ಸ್ಥಾಪಿಸಿದ ರಾಹಿಲ್ ಮತ್ತು ರಾಝಿಂ ದಿನ ಬೆಳಗಾಗುವುದರೊಳಗೆ ಶ್ರೀಮಂತರಾಗಿದ್ದರು. ಇವರ ಐಷಾರಾಮಿ ಬದುಕು ನೋಡಿ ಎಲ್ಲರೂ ನಿಬ್ಬೆರಗಾಗಿದ್ದರು. ಇದೀಗ ಇವರ ದಂಧೆ ಬಗ್ಗೆ ನೂರ್ ಬಯಲು ಮಾಡಿದ್ದಾನೆ. ಸೌದಿಗೆ ತೆರಳುವ ಅಮಾಯಕರ ಕೈಯ್ಯಲ್ಲಿ ಇವರು ಕೊಡುವ ಪೊಟ್ಟಣವೇ ಶ್ರೀಮಂತಿಕೆಯ ಹಿಂದಿನ ರಹಸ್ಯ. ಹೆಸರಿಗೊಂದು ಕಂಪೆನಿ ಮಾಡಿ ಮಾದಕ ದ್ರವ್ಯ ದಂಧೆ ಮಾಡುವ ಇವರಿಗೆ ಮಂಗಳೂರಿನ ಕೆಲ ಮಂದಿ ಸಹಕಾರ ನೀಡುತ್ತಿರುವುದು ವಿಪರಾಸ್ಯವೇ ಸರಿ.
ಜಿಲ್ಲೆಯಲ್ಲಿ ಅವ್ಯಾಹತವಾಗಿ ಈ ದಂಧೆ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಕಣ್ಮುಚ್ಚಿ ಕುಳಿತಿರುವುದು ಅನುಮಾನಕ್ಕೆ ಎಡೆ ಮಾಡಿದೆ.












Click it and Unblock the Notifications