ಮಂಗಳೂರು: ಕೋಳಿಗೂ ಟಿಕೆಟ್ ಕೊಳ್ಳಿರೆಂದ ಕಂಡಕ್ಟರ್ ಮಹಾಶಯ!
ಮಂಗಳೂರು, ಮೇ 01 : ಬಸ್ ನಲ್ಲಿ ಮಕ್ಕಳಿಗೆ ಅರ್ದ ಟಿಕೆಟ್ ಪಡೆಯುವುದನ್ನು ನಾವು ಕೇಳಿರುತ್ತೇವೆ ನೋಡಿಯೂ ಇರುತ್ತೇವೆ . ಆದರೆ ಕೋಳಿಗೆ ಅರ್ದ ಟಿಕೆಟ್ ಪಡೆದಿದ್ದನ್ನು ಕೇಳಿರಲಿಕ್ಕಿಲ್ಲ. ಹರಿಕೆ ತೀರಿಸಲು ಬಸ್ಸಿನಲ್ಲಿ ಕೊಂಡು ಹೋಗುತಿದ್ದ ಕೋಳಿಗೆ ಅರ್ಧ ಟಿಕೆಟ್ ಪಾವತಿಸಲು ಕೆ.ಎಸ್.ಆರ್.ಟಿ.ಸಿ ಬಸ್ಸಿನ ನಿರ್ವಾಹಕ ಹಠ ಹಿಡಿದ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಉಪ್ಪಿನಂಗಡಿ ಬಳಿಯ ಕುಪ್ಪೆಟ್ಟಿ ನಿವಾಸಿಯೋಬ್ಬರು ಜಿಲ್ಲೆಯ ಗಡಿ ಭಾಗವಾದ ಶಿರಾಡಿಯ ಕಾರಣಿಕ ಪ್ರಸಿದ್ದ ದೈವಸ್ಥಾನಕ್ಕೆ ಎರಡು ಕೋಳಿ ಹರಕೆ ಆರ್ಪಿಸಲು ಇತ್ತೀಚೆಗೆ ಕೊಂಡು ಹೋಗಿದ್ದರು . ಅವರು ಉಪ್ಪಿನಂಗಡಿ ಬಸ್ ನಿಲ್ದಾಣದಿಂದ ಉಪ್ಪಿನಂಗಡಿ -ಸಕಲೇಶಪುರ ಬಸ್ಸು ಏರಿದ್ದರು.
ಉಪ್ಪಿನಂಗಡಿಯಿಂದ ಶಿರಾಡಿಗೆ ಹೋಗಲು ಬಸ್ ಏರಿದ ಸಂದರ್ಭದಲ್ಲಿ ಪ್ರಯಾಣಿಕನ ಕೈ ಯಲ್ಲಿದ ಎರಡು ಕೋಳಿಯನ್ನು ಗಮನಿಸಿದ ಬಸ್ ನ ನಿರ್ವಾಹಕನ ಟಿಕೆಟ್ ದರ 154 ಪಾವತಿಸುವಂತೆ ತಿಳಿಸಿದ್ದಾನೆ. ಉಪ್ಪಿನಂಗಡಿ ಯಿಂದ ಶಿರಾಡಿಗೆ 77 ರೂಪಾಯಿ ಪ್ರಯಾಣ ದರವಿದೆ ಎರಡು ಕೋಳಿಗೆ ತಲಾ ಅರ್ಧ ಟಿಕೇಟ್ ನಂತೆ ಒಟ್ಟು ರೂ 154 ನೀಡುವಂತೆ ನಿರ್ವಾಹಕ ಪ್ರಯಾಣಿಕನಲ್ಲಿ ಹಟ ಹಿಡಿದಿದ್ದಾನೆ. ಅದರೆ ಕೋಳಿಯ ಮಾಲಿಕ ಅದನ್ನು ನೀಡಲು ಅವರು ನಿರಾಕರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕನಿಗೂ ಹಾಗೂ ಬಸ್ ನಿರ್ವಾಹಕನಿಗೂ ಮಾತಿನ ಚಕಮಕಿ ನಡೆದಿದೆ.

ಚೀಲದಲ್ಲಿ ಹಾಕಿ ಕೊಂಡೊಯ್ಯುವ ಕೋಳಿಗೂ ಟಿಕೆಟ್ ತೆಗೆಯಬೇಕು ಎಂಬುವುದಕ್ಕೆ ಆಕ್ಷೇಪಿಸಿದ ಪ್ರಯಾಣಿಕ, ನಿರ್ವಾಹಕನ ಜೊತೆ ವಾದ ವಿವಾದಕ್ಕೆ ಮುಂದಾಗಿದ್ದಾನೆ. ಈ ವಾಗ್ವಾದವನ್ನು ಕಂಡ ಬಸ್ಸು ನಿಲ್ದಾಣದಲ್ಲಿನ ಉಳಿದ ಬಸ್ಸು ನಿರ್ವಾಹಕರು ಜೀವಂತ ಪ್ರಾಣಿಗಳ ಸಂಚಾರಕ್ಕೆ ಅರ್ಧ ಟಿಕೆಟ್ ವಿಧಿಸುವುದು ಸರಕಾರದ ನಿಯಮ ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡಿದರು . ಇದರಿಂದ ಅಕ್ರೋಶಿತನಾದ ಪ್ರಯಾಣಿಕ ಇನ್ನೆಂದೂ ನಾನು ಕೋಳಿಯೊಂದಿಗೆ ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಬದಲಿ ವಾಹನದ ಮೂಲಕ ಶಿರಾಡಿ ಕಡೆ ಪ್ರಯಾಣ ಬೆಳೆಸಿದ್ದಾರೆ.
ಕೆಲವೇ ಗಂಟೆಗಳ ಬಳಿಕ ಹರಕೆಯ ರೂಪದಲ್ಲಿ ದೈವಕ್ಕೆ ಅರ್ಪಣೆಯಾಗಲಿದ್ದ ಕೋಳಿ ವಿವಾದ ವಸ್ತುವಾದದ್ದಾರೂ ಬಸ್ ನಲ್ಲಿ ಹಾಗು ಬಸ್ ನಿಲ್ದಾಣದಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಪುಕ್ಕಟ್ಟೆ ಮನರಂಜನೆ ಒದಗಿಸಿತ್ತು . ಇದ್ಯಾವುದರ ಪರಿವೆಯೇ ಇಲ್ಲದ್ದೆ ಹರಕೆಗೆ ತೆರಳುತ್ತಿದ್ದ ಕೋಳಿಗಳು ಮಾತ್ರ ತಮ್ಮಷ್ಟ್ತಕ್ಕೆ ಕೋ ಕೋ ಎನ್ನುತ್ತಾ ಅಲ್ಲಿದ್ದವರ ಗಮನವನ್ನು ತನ್ನೆಡೆ ಆಕರ್ಷಿಸುತಿದ್ದವು.












Click it and Unblock the Notifications