ಮಂಗಳೂರು : ಕಡಿಮೆ ಸಂಬಳ ಕೊಟ್ಟರೆಂದು ಚರ್ಚ್ಗೆ ಕಲ್ಲೆಸದ
ಮಂಗಳೂರು, ಮಾ.10 : ಫೆ.25ರಂದು ಮಂಗಳೂರಿನಲ್ಲಿ ಕ್ರಿಶ್ಚಿಯನ್ನರ ಪ್ರಾರ್ಥನಾ ಮಂದಿರದ ಮೇಲೆ ಕಲ್ಲು ತೂರಾಟ ನಡೆಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಡಿಮೆ ಸಂಬಳ ಕೊಡುತ್ತಿದ್ದರು ಎಂಬ ಕಾರಣಕ್ಕಾಗಿ ಬಂಧಿತ ಆರೋಪಿ ಕಲ್ಲು ತೂರಾಟ ನಡೆಸಿ ಸೇಡು ತೀರಿಸಿಕೊಂಡಿದ್ದ.
ಮಂಗಳೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಮುರುಗನ್ ಅವರು ಈ ಕುರಿತು ಮಾಹಿತಿ ನೀಡಿದರು. ಬಂರಧಿತ ಆರೋಪಿಯನ್ನು ಉಕ್ಕುಡ ಗ್ರಾಮದ ಆನಂದ ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ಕಲ್ಲು ತೂರಾಟ ನಡೆಸಿರುವುದು ನಾನೇ ಎಂದು ಆನಂದ ಒಪ್ಪಿಕೊಂಡಿದ್ದಾನೆ.

ಕಡಿಮೆ ಸಂಬಳ ಕೊಟ್ಟರೆಂದು ಕಲ್ಲು ತೂರಿದ : ಹಲವು ವಾರಗಳ ಕಾಲ ಆನಂದ ಮಂಗಳೂರಿನ ಕೋಟೆಕಾರು ಪ್ರದೇಶದಲ್ಲಿರುವ ಸಂತ ಜೋಸೆಫ್ ವಾಜ್ ಪ್ರಾರ್ಥನಾ ಮಂದಿರದಲ್ಲಿ ಕೆಲಸ ಮಾಡಿದ್ದ. ಆದರೆ, ಅವನಿಗೆ ಕಡಿಮೆ ವೇತನ ಕೊಡುತ್ತಿದ್ದರು. ಆದ್ದರಿಂದ ಕುಡಿದು ಬಂದು ಪ್ರಾರ್ಥನಾ ಮಂದಿರದ ಮೇಲೆ ಕಲ್ಲು ತೂರಾಟ ನಡೆಸಿದ್ದ.
ಬಂಧಿತ ಆನಂದ ಯಾವುದೇ ಸಂಘಟನೆಗೆ ಸೇರಿದವನಲ್ಲ ಎಂದು ಮುರುಗನ್ ಸ್ಪಷ್ಟಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. [ಮಂಗಳೂರು : ಪ್ರಾರ್ಥನಾ ಮಂದಿರದ ಮೇಲೆ ಕಲ್ಲು ತೂರಾಟ]

ಫೆ.25ರಂದು ಮಂಗಳೂರಿನ ಕೋಟೆಕಾರು ಪ್ರದೇಶದಲ್ಲಿರುವ ಸಂತ ಜೋಸೆಫ್ ವಾಜ್ ಪ್ರಾರ್ಥನಾ ಮಂದಿರದ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಇದರಿಂದ ಮಂದಿರದ ಕಿಟಕಿ ಗಾಜುಗಳು ಪುಡಿಯಾಗಿದ್ದು, ಮೇರಿ ಮಾತೆ ವಿಗ್ರಹಕ್ಕೆ ಹಾನಿ ಉಂಟಾಗಿತ್ತು.












Click it and Unblock the Notifications