ಮಂಗಳೂರಿನ ಮಳಲಿ ಮಸೀದಿ ವಿವಾದ; ಎಲ್ಲರ ಚಿತ್ತ ಜನವರಿ 8ರ ಕಡೆಗೆ
ಮಂಗಳೂರು, ನವೆಂಬರ್, 09: ಮಂಗಳೂರಿನ ಮಳಲಿ ಮಸೀದಿ ವಿವಾದದ ವಿಚಾರದಲ್ಲಿ ವಿಶ್ವ ಹಿಂದೂ ಪರಿಷತ್(ವಿಎಚ್ಪಿ)ಗೆ ಆರಂಭಿಕ ಗೆಲುವಾಗಿದೆ. ಮಸೀದಿಯ ಸರ್ವೆ ನಡೆಸಲು ವಿಎಚ್ಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಬಹುದು ಎಂದು ನ್ಯಾಯಾಲಯ ತೀರ್ಪು ನೀಡಿದೆ. ವಿಚಾರಣೆ ನಡೆಸಬಾರದೆಂದು ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಹಾಗೆಯೇ ವಿಶ್ವ ಹಿಂದೂಪರಿಷತ್ ಸಲ್ಲಿಸಿದ್ದ ಅರ್ಜಿಯನ್ನು 2023ರ ಜನವರಿ 8ರಂದು ವಿಚಾರಣೆ ನಡೆಸಲು ಆದೇಶಿಸಿದೆ.
ಜ್ಞಾನವಾಪಿ ಮಸೀದಿಯ ವಿವಾದ ಆರಂಭವಾದ ಸಂದರ್ಭದಲ್ಲೇ ಮಂಗಳೂರಿನ ಮಳಲಿ ಮಸೀದಿ ವಿವಾದ ಆರಂಭಗೊಂಡಿತ್ತು. 2022ರ ಏಪ್ರಿಲ್ 21 ರಂದು ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿಯ ನವೀಕರಣಕ್ಕಾಗಿ ಒಂದು ಭಾಗವನ್ನು ಕೆಡವಲಾಗಿತ್ತು. ಆಗ ಅಲ್ಲಿ ಹಿಂದೂ ದೇವಸ್ಥಾನದ ಮಾದರಿ ಪತ್ತೆಯಾಗಿತ್ತು.
Breaking: ಮಳಲಿ ಮಸೀದಿ ವಿವಾದ- ವಿಎಚ್ಪಿ ಅರ್ಜಿ ವಿಚಾರಣೆಗೆ ಅಂಗೀಕಾರ
ಹೀಗಾಗಿ ವಿಶ್ವ ಹಿಂದೂ ಪರಿಷತ್ ಕಾಮಗಾರಿ ನಿಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ಕಾಮಗಾರಿ ಸ್ಥಗಿತಗೊಂಡಿತ್ತು. ಬಳಿಕ ವಿಎಚ್ಪಿ ತಾಂಬೂಲ ಪ್ರಶ್ನೆ ಇಟ್ಟಿದ್ದು, ಅದರಲ್ಲಿ ಮಸೀದಿ ಇರುವ ಜಾಗದಲ್ಲಿ ಹಿಂದೂ ದೇವಸ್ಥಾನ ಇತ್ತು ಎಂಬುದು ಪ್ರಶ್ನಾ ಚಿಂತನೆಯಲ್ಲಿ ಬೆಳಕಿಗೆ ಬಂದಿತ್ತು.
ಹೀಗಾಗಿ ಮಸೀದಿ ಇರುವ ಜಾಗದಲ್ಲಿ ಸರ್ವೆ ನಡೆಸಬೇಕು ಎಂದು ವಿಎಚ್ಪಿ ಮಂಗಳೂರಿನ ಮೂರನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ ಮತ್ತೊಂದೆಡೆ ಸರ್ವೆ ನಡೆಸುವ ಅರ್ಜಿಗೆ ತಡೆ ನೀಡಬೇಕು ಎಂದು ಮಸೀದಿ ಆಡಳಿತ ಮಂಡಳಿಯೂ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ತೀರ್ಪು ನೀಡಿದ್ದು, ಸರ್ವೆ ನಡೆಸುವ ಅರ್ಜಿಯ ವಿಚಾರಣೆಯನ್ನು 2023ರ ಜನವರಿ 8ರಂದು ವಿಚಾರಣೆ ನಡೆಸಲು ಆದೇಶಿಸಿದೆ.
ಮಸೀದಿ ಆಡಳಿತ ಮಂಡಳಿಯ ಅರ್ಜಿ ವಜಾ
ಮಸೀದಿ ಇರುವ ಜಾಗ ವಕ್ಫ್ ಬೋರ್ಡ್ದಾಗಿದ್ದು, ಇದನ್ನು ಸಿವಿಲ್ ನ್ಯಾಯಾಲಯ ವಿಚಾರಣೆ ಮಾಡಲು ಅವಕಾಶ ಇಲ್ಲ. ವಕ್ಫ್ ಟ್ರಿಬ್ಯುನಲ್ ಕೋರ್ಟ್ ವಿಚಾರಣೆ ಮಾಡಬೇಕು ಎಂದು ಮಸೀದಿ ಆಡಳಿತ ಮಂಡಳಿ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಮಂಗಳೂರಿನ ಮೂರನೇ ಹೆಚ್ಚುವರಿ ನ್ಯಾಯಾಲಯ ಮಸೀದಿ ಆಡಳಿತ ಮಂಡಳಿಯ ಅರ್ಜಿಯನ್ನು ವಜಾಗೊಳಿಸಿದೆ. ಹಾಗೂ ವಿಎಚ್ಪಿಯ ಅರ್ಜಿ ವಿಚಾರಣೆ ನಡೆಸಲು ಆದೇಶಿಸಿದೆ. ಹೀಗಾಗಿ ಮಸೀದಿಯ ಸರ್ವೆ ನಡೆಸಲು ವಿಎಚ್ಪಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ವಾದ ಆರಂಭಿಸಲು ಸೂಚಿಸಿದೆ. ಇದು ವಿಎಚ್ಪಿಗೆ ಸಿಕ್ಕ ಆರಂಭಿಕ ಗೆಲುವಾಗಿದ್ದು, ವಿಎಚ್ಪಿ ಕಾರ್ಯಕರ್ತರು ತಮ್ಮ ಕಚೇರಿ ಎದುರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ವಿಎಚ್ಪಿ ಸಲ್ಲಿಸಿದ್ದ ಅರ್ಜಿ ಪುರಸ್ಕಾರ
ಕೋರ್ಟ್ ಆದೇಶ ಹಿಂದುಗಳಿಗೆ ಸಂದ ಜಯವಾಗಿದೆ. ಅಲ್ಲಿ ದೇವಸ್ಥಾನದ ಚಿತ್ರಣ ಇದ್ದ ಕಾರಣಕ್ಕೆ ನವೀಕರಣಕ್ಕೆ ತಡೆ ತಂದಿದ್ದೆವು. 800 ವರ್ಷಗಳ ಹಿಂದಿನ ದೇವಸ್ಥಾನ, ಪುರಾತತ್ವ ಇಲಾಖೆಯಿಂದ ಸರ್ವೆ ನಡೆಸಲು ಕೋರಿದ್ದೆವು. ಮಂಗಳೂರಿನ ಕೋರ್ಟ್ ತೀರ್ಪು ನೀಡಿ, ಮಸೀದಿ ಅರ್ಜಿಯನ್ನು ವಜಾ ಮಾಡಿದೆ. ನಮ್ಮ ಅಹವಾಲನ್ನು ಎತ್ತಿ ಹಿಡಿದಿದೆ. ಈ ಮೂಲಕ ದೇವಸ್ಥಾನ ಅನ್ನುವ ವಾದಕ್ಕೆ ಪುಷ್ಟಿ ಸಿಕ್ಕಂತಾಗಿದೆ. ಆ ಜಾಗದಲ್ಲಿ ಬೃಹತ್ ದೇವಸ್ಥಾನ ನಿರ್ಮಾಣಕ್ಕೆ ತಯಾರಿ ಮಾಡುತ್ತೇವೆ. ಅಷ್ಟಮಂಗಳ ಪ್ರಶ್ನೆ ಇಟ್ಟು ಮುಂದಿನ ನಿರ್ಧಾರ ಮಾಡುತ್ತೇವೆ. ಮಳಲಿ ಗ್ರಾಮ ಮುಸ್ಲಿಮರ ಬಳಿ ಮನವಿ ಮಾಡುತ್ತೇವೆ. ಆ ಜಾಗವನ್ನು ದೇವಸ್ಥಾನಕ್ಕೆ ಬಿಟ್ಟು ಕೊಡಿ. ಅಲ್ಲಿ ಮಂದಿರ ಕಟ್ಟೋಣ, ನೀವೂ ಒಂದು ಕಾಲದಲ್ಲಿ ಹಿಂದೂಗಳಾಗಿಯೇ ಇದ್ದವರು. ಕುಳಿತುಕೊಂಡು ಸಮಸ್ಯೆಯನ್ನು ಬಗೆಹರಿಸೋಣ ಅಂತಾ ಹೇಳಿದ್ದಾರೆ.
Breaking: ಮಳಲಿ ಮಸೀದಿ ವಿವಾದ: ತೀರ್ಪು ಪ್ರಕಟ ದಿನಾಂಕ ನ.9ಕ್ಕೆ ಮುಂದೂಡಿದ ಕೋರ್ಟ್
ವೈ. ಡಾ.ಭರತ್ ಶೆಟ್ಟಿ ಹೇಳಿದ್ದೇನು?
ಮಳಲಿ ಮಸೀದಿ ಒಳಭಾಗದಲ್ಲಿ ಹಿಂದೂ ಧರ್ಮದ ಕುರುಹುಗಳಿರುವ ಕಟ್ಟಡದ ಕುರಿತ ವಿಚಾರಣೆ ಅಧಿಕಾರ ಸಿವಿಲ್ ನ್ಯಾಯಾಲಯಕ್ಕೆ ಇದೆ ಎಂದು ಕೋರ್ಟ್ ಹೇಳಿರುವುದು ಸ್ವಾಗತಾರ್ಹವಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಿ ಸತ್ಯ ವಿಚಾರ ಜನತೆಗೆ ತಿಳಿಯುವಂತೆ ಆಗಬೇಕು ಎಂದು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ವೈ. ಡಾ.ಭರತ್ ಶೆಟ್ಟಿ ಹೇಳಿದ್ದಾರೆ. ನ್ಯಾಯಲಯದ ತೀರ್ಪಿಗೆ ಪ್ರತಿಕ್ರಿಯೆ ನೀಡಿರುವ ಅವರು, ಈ ವಿವಾದದ ಕುರಿತ ಇತರ ಅರ್ಜಿಗಳ ವಿಚಾರಣೆಯನ್ನು ಜನವರಿ 8ಕ್ಕೆ ದಿನಾಂಕ ನಿಗದಿ ಮಾಡಿದೆ.
ಮಳಲಿ ಮಸೀದಿ ಜಾಗ ವಕ್ಫ್ ಆಸ್ತಿ ಆಗಿರುವುದರಿಂದ ಸಿವಿಲ್ ನ್ಯಾಯಾಲಯಕ್ಕೆ ವಿಚಾರಣೆಯ ಅಧಿಕಾರವಿಲ್ಲ ಎಂದು ಅರ್ಜಿ ಸಲ್ಲಿಸಿದ್ದ ಅರ್ಜಿಗೆ ಮನ್ನಣೆ ದೊರೆತಿಲ್ಲ. ವಕ್ಫ್ ಕೂಡ ನಮ್ಮ ಸರ್ಕಾರದ ಅಂಗ ಆಗಿರುವುದರಿಂದ ಅದಕ್ಕೆ ಬೇರೆ ನ್ಯಾಯಾಲಯ, ಕಾನೂನು ಎಂಬ ಭಾವನೆ ಬೇಡ. ವಿಚಾರಣೆ ನಡೆಸಿ ಸೂಕ್ತ ತೀರ್ಪು ಹೊರಬರುವ ವಿಶ್ವಾಸವನ್ನು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
ಜನವರಿ 8ರಂದು ಅರ್ಜಿ ವಿಚಾರಣೆ
ಮಸೀದಿ ಇರುವ ಜಾಗದಲ್ಲಿ ಶಿವನ ಶಕ್ತಿ ಇದೆ ಅನ್ನುವುದು ಈ ಹಿಂದೆ ತಾಂಬೂಲ ಪ್ರಶ್ನೆಯಲ್ಲಿ ತಿಳಿದುಬಂದಿತ್ತು. ಇದೀಗ ಮಸೀದಿಯ ಒಳಗೆ ಸರ್ವೆ ನಡೆಸುವ ಅರ್ಜಿಯನ್ನೂ ನ್ಯಾಯಾಲಯ ಪುರಸ್ಕರಿಸಿ ವಿಚಾರಣೆ ಆರಂಭಿಸಲು ಆದೇಶಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸರ್ವೆ ಕಾರ್ಯಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ? ಅಥವಾ ಮಸೀದಿ ಆಡಳಿತ ಮಂಡಳಿ ಮತ್ತೆ ಮೇಲ್ಮನವಿ ಸಲ್ಲಿಸುತ್ತಾ? ಅನ್ನುವುದನ್ನು ಕಾದುನೋಡಬೇಕಿದೆ.