ಮಹಾಲಿಂಗೇಶ್ವರ ದೇವಾಲಯದ ದನಗಳವು: ಪ್ರಮುಖ ಆರೋಪಿ ಬಂಧನ
ಮಂಗಳೂರು, ಜುಲೈ 28: ನಗರದ ಪಾಂಡೇಶ್ವರ ಮಹಾಲಿಂಗೇಶ್ವರ ದೇವಾಲಯದ ಗೋವುಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಕೇರಳ ಮಂಜೇಶ್ವರದ ಮಚ್ಚಂಪಾಡಿ ನಿವಾಸಿ ಅಬ್ದುಲ್ ಹುಸೈನ್ (37) ಎಂದು ಗುರುತಿಸಲಾಗಿದೆ.
ಈ ಅಂತರರಾಜ್ಯ ಗೋಗಳ್ಳನನ್ನು ಮಂಗಳೂರಿನ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಈತ ಇತ್ತೀಚೆಗೆ ಕೊಣಾಜೆ ಕೈರಂಗಳ ಪುಣ್ಯಕೋಟಿ ಅಮೃತಧಾರಾ ಗೋಶಾಲೆಯ ದನ ಕಳವು ಪ್ರಕರಣದಲ್ಲೂ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಹೇಳಲಾಗಿದೆ. ಜುಲೈ 05 ರಂದು ನಗರದ ಹೃದಯ ಭಾಗದಲ್ಲಿರುವ ಪಾಂಡೇಶ್ವರದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದನ ಕಳ್ಳತನದಲ್ಲೂ ಈತ ಪ್ರಮುಖ ಆರೋಪಿ ಎಂದು ಹೇಳಲಾಗಿದೆ.

ಇದೇ ಜುಲೈ 05 ರಂದು ಮಂಗಳೂರು ಪೊಲೀಸ್ ಕಮಿಷನರ್ ನಿವಾಸದ ಬಳಿ ಇರುವ ಶ್ರೀ ಮಹಾಲಿಂಗೇಶ್ವರ ದೇವಾಲಯದ ಗೋವುಗಳನ್ನು ಮಾರುತಿ ರಿಟ್ಜ್ ಕಾರಿನಲ್ಲಿ ಅಪಹರಿಸಿರುವುದಾಗಿ ಆರೋಪಿ ತಪ್ಪೋಪ್ಪಿಕೊಂಡಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.
ಈತನ ನೇತೃತ್ವದ ತಂಡ ಮಂಗಳೂರು ಹಾಗೂ ನೆರೆಯ ಕಾಸರಗೋಡು ಪ್ರದೇಶಗಳಲ್ಲಿ ಅನೇಕ ದನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಹುಸೈನ್ ವಿರುದ್ಧ ಕಾಸರಗೋಡು ಮತ್ತು ಮಂಗಳೂರಿನಲ್ಲಿ 10 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.












Click it and Unblock the Notifications