ಫೆ.22ರಿಂದ ವೇಣೂರಿನ ಭಗವಾನ್ ಬಾಹುಬಲಿ ಮಹಾಮಜ್ಜನ: ಪಾಸ್ ವಿತರಣೆ ಆರಂಭ
ಮಂಗಳೂರು, ಫೆಬ್ರವರಿ 13: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಭಗವಾನ್ ಬಾಹುಬಲಿಗೆ ಮಹಾಮಜ್ಜನಕ್ಕೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ 22ರಿಂದ ಮಾರ್ಚ್ 1ವರೆಗೆ ಬಾಹುಬಲಿಗೆ ಮಹಾಮಸ್ತಕಾಭಿಷೇಕ ವೈಭವ ನಡೆಯಲಿದ್ದು, ಸಕಲ ತಯಾರಿಗಳು ನಡೆಯುತ್ತಿದೆ.
35 ಅಡಿ ಎತ್ತರದ ಬಾಹುಬಲಿಗೆ ಎಳನೀರು, ಕಬ್ಬಿನ ಹಾಲು, ಹಾಲು, ಅಕ್ಕಿಹಿಟ್ಟು, ಕಷಾಯ, ಶ್ರೀಗಂಧ, ರಕ್ತ ಚಂದನ, ಅಷ್ಟಗಂಧ, ಕೇಸರಿ, ಅರಶಿನ, ಸುವರ್ಣ ರತ್ನ, ಸೇರಿದಂತೆ ಪುಷ್ಪವೃಷ್ಠಿಯ ಮಹಾಮಜ್ಜನ ನಡೆಯಲಿದೆ. ಮಹಾಮಸ್ತಕಾಭಿಷೇಕದ ಕೊನೆಯ ದಿನ ಬಾಹುಬಲಿಗೆ 1,008 ಕಳಶಗಳ ಅಭಿಷೇಕ ನಡೆಯಲಿದೆ.

ವಿಶೇಷ ಎಂಬಂತೆ ಬಾಹುಬಲಿಗೆ ಶುದ್ಧ ಕಾಶ್ಮೀರ ಕೇಸರಿಯಿಂದ ಅಭಿಷೇಕ ನಡೆಯಲಿದೆ. ತುಮಕೂರು ಮೂಲಕ ಎನ್ ಬಿ ಶ್ರೇಯಾಂಶ್ ಕುಮಾರ್ ಅವರ ಕುಟುಂಬ ಈ ಸೇವೆಯನ್ನು ಮಾಡಲಿದೆ. ಮಹಾಮಸ್ತಕಾಭಿಷೇಕದ ಸಂಧರ್ಭದಲ್ಲಿ ಬಾಹುಬಲಿಗೆ ಅಭಿಷೇಕ ಮಾಡಲು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಅಟ್ಟಿಗೆಯನ್ನು ಮಾಡಲಾಗುತ್ತಿದೆ. ಈ ಅಟ್ಟಣಿಗೆಯಲ್ಲಿ 600 ಜನ ನಿಲ್ಲಬಹುದಾದ ಸಾಮರ್ಥ್ಯವನ್ನು ಹೊಂದಿದೆ.
ಈ ಮಹಾಮಸ್ತಕಾಭಿಷೇಕದ ಸಂಧರ್ಭದಲ್ಲಿ ಪ್ರತಿದಿನ ನಲ್ವತ್ತು ಸಾವಿರ ಜನರು ಭಾಗವಹಿಸುವ ನೀರಿಕ್ಷೆಗಳಿವೆ. ಗಣ್ಯರು ಆಗಮನಕ್ಕಾಗಿ ಹೆಲಿಪ್ಯಾಡ್ ನಿರ್ಮಾಣವೂ ನಡೆದಿದೆ. ಭಕ್ತಾದಿಗಳಿಗಾಗಿ ಜೈನ ಸಂಪ್ರದಾಯದ ತಿನಿಸುಗಳನ್ನು ನೀಡಲಾಗುತ್ತದೆ. ಸುಮಾರು ನಾಲ್ಕು ಸಾವಿರ ಕಾರುಗಳು ನಿಲ್ಲಬಹುದಾದ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಮಹಾಮಸ್ತಕಾಭಿಷೇಕ್ಕಾಗಿ ಎರಡು ವೇದಿಕೆ ಗಳ ನಿರ್ಮಾಣ ಮಾಡಲಾಗುತ್ತಿದ್ದು, ಒಂದು ವೇದಿಕೆಯಲ್ಲಿ ವಸ್ತು ಪ್ರದರ್ಶನ ನಡೆಯಲಿದೆ. ಈಗಾಗಲೇ ಪಾಸ್ಗಳ ಹಂಚಿಕೆ ಮಾಡಲಾಗುತ್ತಿದ್ದು, ಪಾಸ್ ಇದ್ದವರಿಗೆ ಪ್ರತ್ಯೇಕ ಗ್ಯಾಲರಿ, ಸಾರ್ವಜನಿಕರಿಗೆ ಧರ್ಮದರ್ಶನ ಗ್ಯಾಲರಿ ಮಾಡಲಾಗುತ್ತಿದೆ.
ಒಟ್ಟಿನಲ್ಲಿ 1604ರಲ್ಲಿ ಕಲ್ಕುಡ ಕೆತ್ತಿದ ಬಾಹುಬಲಿ ಎಂಬ ಪ್ರಖ್ಯಾತಿಗೆ ವೇಣೂರಿನ ಬಾಹುಬಲಿ ಭಾಜನವಾಗಿದ್ದು, ವೇಣೂರೆಂಬ ಪುಟ್ಟ ಗ್ರಾಮ ಮಹಾಮಸ್ತಕಾಭಿಷೇಕದ ಸಂಭ್ರಮದಲ್ಲಿ ಮುಳುಗೇಳಲು ಸಿದ್ಧವಾಗಿದೆ.












Click it and Unblock the Notifications