ಯಡಿಯೂರಪ್ಪ ಮುಹೂರ್ತದಿಂದ ಕರಾವಳಿಯಲ್ಲಿ ಬಿಜೆಪಿ ಕೊನೆಗಾಣಲಿದೆ:ಮಧು ಬಂಗಾರಪ್ಪ
ಮಂಗಳೂರು, ಏಪ್ರಿಲ್ 07:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮೋದಿ ಅಲೆ ವರ್ಕೌಟ್ ಆಗಲ್ಲ. ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರವಲ್ಲದೇ, ರಾಜ್ಯದಲ್ಲೇ ನಿರ್ಮೂಲನೆಯಾಗಲಿದೆ ಎಂದು ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ತಿಳಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನ ದೊರಕಿದಾಗ ಯಡಿಯೂರಪ್ಪರಿಗೆ ತಮ್ಮ ಸ್ಥಾನ ಉಳಿಸಿಕೊಳ್ಳಲಾಗಿರಲಿಲ್ಲ. ಈಗ ಅವರು ಬಂದು ಕುಮಾರಸ್ವಾಮಿಯವರಿಗೆ ಮುಹೂರ್ತ ಇಡುತ್ತಿದ್ದಾರೆ. ಅವರ ಮುಹೂರ್ತದಿಂದ ಕರಾವಳಿಯಲ್ಲಿ ಬಿಜೆಪಿ ಕೊನೆಗಾಣಲಿದೆ. ಕರಾವಳಿಯಲ್ಲಿ ಬಿಜೆಪಿ ನಿರ್ಮೂಲನೆಯಾಗಬೇಕಿದೆ ಎಂದು ಹೇಳಿದರು.
ಈ ಹಿಂದೆಯೂ ಶಿವಮೊಗ್ಗದಲ್ಲಿ ಘಟಾನುಘಟಿಗಳಿದ್ದರು. ಯಡಿಯೂರಪ್ಪ ಹಾಗೂ ಈಶ್ವರಪ್ಪ ಪೂರ್ತಿ ನೆಲಕಚ್ಚಿದ್ದರು. ಆ ಸಂದರ್ಭದಲ್ಲಿ ನನ್ನ ತಂದೆ ಬಂಗಾರಪ್ಪನವರಿಂದ ಬಿಜೆಪಿ ಗೆದ್ದಿತ್ತು. ಯಡಿಯೂರಪ್ಪ ತನ್ನ ಮಕ್ಕಳನ್ನು ಬೆಳೆಸುವ ವ್ಯವಸ್ಥೆ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ನನಗೆ ಅವಕಾಶ ನೀಡಿ ಟಿಕೆಟ್ ಒದಗಿಸಿತು. ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪನವ್ರು ಮೋದಿಯವರಿಂದಾಗಿ ಅಷ್ಟು ಮತ ಪಡೆದಿದ್ರು.ಆದರೆ ಅವರ ಗೆಲುವಿನ ಮತದ ಪ್ರಮಾಣವೂ ಈಗ ಕಡಿಮೆಯಾಗಿದೆ ಎಂದು ಹೇಳಿದರು.
ಮೋದಿಯವರ ಅಲೆ ಕಡಿಮೆಯಾಗಿದೆ, ಅದಕ್ಕೆ ಗೆಲುವಿನ ಮತದ ಪ್ರಮಾಣ ಕಡಿಮೆಯಾಗಿದೆ. ಘಟಾನುಘಟಿಗಳು ಎಂದು ಹೇಳುವವರ ಮೌಲ್ಯ ಕೂಡ ಕಡಿಮೆಯಾಗಿದೆ ಎಂದು ಹೇಳಿದ ಮಧು, ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಬಗ್ಗೆ ಯಾರಿಗೂ ಭಯವಿಲ್ಲ. ಚುನಾವಣೆಗೆ ಯಾರಾದರೂ ಸ್ಪರ್ಧಿಸಬಹುದು.ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿಯನ್ನು ಅಭ್ಯರ್ಥಿಯಾಗಿ ನಿಲ್ಲಿಸಲಾಗಿದೆ. ಅವರು ಗೆಲ್ತಾರೆಂದು ನನಗೆ ನಂಬಿಕೆಯಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ನಾನು ಯಡಿಯೂರಪ್ಪನವರನ್ನು ಕಟ್ಟಿ ಹಾಕಿದ್ದೇನೆ. ಹಿಂದೆ 52 ಸಾವಿರ ಮತದಿಂದ ನಾನು ಸೋತಿರಬಹುದು. ಆದರೆ, ನೈತಿಕವಾಗಿ ಗೆದ್ದಿದ್ದೇನೆ ಎಂದು ಮಧು ಬಂಗಾರಪ್ಪ ತಿಳಿಸಿದರು.












Click it and Unblock the Notifications