ನಟ, ನಿರ್ದೇಶಕ ಎಂ.ಕೆ. ಮಠ ಮೇಲೆ ಹಲ್ಲೆಗೆ ಯತ್ನ
ಮಂಗಳೂರು, ಡಿಸೆಂಬರ್ 17: ಚಲನಚಿತ್ರ ನಟ, ನಿರ್ದೇಶಕ ಎಂ.ಕೆ. ಮಠ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಇನ್ನೂ ಬಿಡುಗಡೆಯಾಗಬೇಕಿರುವ ಕನ್ನಡ ಚಿತ್ರ ' ಸುರು ಸುರು ಬತ್ತಿ' ಚಿತ್ರದ ಶೂಟಿಂಗನ್ನು ಚನ್ನಪಟ್ಟಣ, ರಾಮನಗರದಲ್ಲಿ ಮುಗಿಸಿ ನಟ ಎಂ.ಕೆ. ಮಠ ನಿನ್ನೆ ಬೆಂಗಳೂರಿನಿಂದ ಉಪ್ಪಿನಂಗಡಿಗೆ ರಾತ್ರಿ 7.30 ರ ಸುಮಾರಿಗೆ ತಲುಪಿದ್ದರು. ಉಪ್ಪಿನಂಗಡಿ ಬಸ್ ನಿಲ್ದಾಣದಿಂದ ಕೂಟೇಲುವಿನಲ್ಲಿರುವ ತನ್ನ ಮನೆಗೆ ಆಟೋದಲ್ಲಿ ಹೋಗುತ್ತಿದ್ದ ವೇಳೆ ಕೂಟೇಲು ದರ್ಗಾದ ಬಳಿ ಇದ್ದಕ್ಕಿದ್ದಂತೆ ಕೆಂಪು ಬಣ್ಣದ ಇನ್ನೋವಾ ಕಾರಿನಲ್ಲಿ ಬಂದ ಆರು ಮಂದಿಯ ದುಷ್ಕರ್ಮಿಗಳ ತಂಡ ಆಟೋವನ್ನ ಅಡ್ಡಗಟ್ಟಿತು. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾದರು.
ಈ ವೇಳೆ ಅಲ್ಲಿದ್ದ ಅಂಗಡಿ ಸಿಬ್ಬಂದಿ ಹಾಗೂ ದಾರಿಹೋಕರು, ವಾಹನ ಸವಾರರು ಸ್ಥಳಕ್ಕಾಗಮಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಯಾವ ಕಾರಣಕ್ಕಾಗಿ ಈ ಹಲ್ಲೆ ಯತ್ನ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಇನ್ನೋವಾ ಕಾರಿನ ಸಂಖ್ಯೆಯನ್ನ ಕೆ ಎ 19 ಝಡ್ 2802 ಎಂದು ಗುರುತಿಸಲಾಗಿದೆ. ಈ ಪ್ರಕರಣದ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.[ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ]

ಘಟನೆ ಬಗ್ಗೆ ಒನ್ ಇಂಡಿಯಾಕ್ಕೆ ಪ್ರತಿಕ್ರಿಯೆ ನೀಡಿದ ರಾಜ್ಯ ಪ್ರಶಸ್ತಿ ಪುರಸ್ಕೃತ ನಟ ಎಂ.ಕೆ.ಮಠ, 'ದುಷ್ಕರ್ಮಿಗಳು ಹಲ್ಲೆಗೆ ಯತ್ನಿಸಿದ ಹಿಂದಿನ ಕಾರಣ ಗೊತ್ತಿಲ್ಲ. ಪೊಲೀಸರು ಶೀಘ್ರವೇ ಆರೋಪಿಗಳನ್ನ ಬಂಧಿಸಬೇಕು. ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ನಂಬಿಕೆ ಇದೆ ಅಂದರು.
ಎಂ.ಕೆ.ಮಠ, ಖ್ಯಾತ ನಿರ್ದೇಶಕ ನಾಗಾಭರಣ ಗರಡಿಯಲ್ಲಿ ಪಳಗಿದವರು. ಇತ್ತೀಚೆಗೆ ಬಿಡುಗಡೆಗೊಂಡು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ' ರಾಮಾ ರಾಮಾ ರೇ' ಚಿತ್ರದಲ್ಲಿ ಇವರ ಅಭಿನಯ ಎಲ್ಲರ ಮನಸೂರೆಗೊಂಡಿದೆ. ಕನ್ನಡ, ತುಳು ಚಲನಚಿತ್ರವಲ್ಲದೇ ಕೆಲ ಕನ್ನಡ ಧಾರಾವಾಹಿಗಳಲ್ಲಿ , ನಾಟಕಗಳಲ್ಲಿ ಸಹ ನಟಿಸಿದ್ದಾರೆ. ' ಗೆಳತಿ' ಧಾರಾವಾಹಿ ಮೂಲಕ ಕಲಾವಿದನಾಗಿ ಗುರುತಿಸಿಕೊಂಡರು.
'ಜೀವನ್ಮುಖಿ', 'ಸಂಕ್ರಾಂತಿ' ಧಾರಾವಾಹಿಗಳಲ್ಲಿ ಸಹ ನಿರ್ದೇಶಕರಾಗಿ ಖ್ಯಾತಿ ಗಳಿಸಿದ್ದಾರೆ. ನಿರ್ದೇಶಕ ಶಿವಧ್ವಜ್ ರ 'ಗಗ್ಗರ' ಚಿತ್ರದಲ್ಲಿನ ವಿಶಿಷ್ಟ ಅಭಿನಯಕ್ಕೆ ಇವರು ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ.












Click it and Unblock the Notifications