ಸರ್ಕಾರ ಕಲಿಸಿದ ಕುಡಿತದ ಚಟ; ಬೀದಿ ಪಾಲಾಗುವ ಆತಂಕದಲ್ಲಿ ಬಡಕುಟುಂಬಗಳು
ಮಂಗಳೂರು, ಜೂನ್ 2: ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಮದ್ಯ ಮಾರಾಟವನ್ನು ಬೆಳಗ್ಗೆ 6 ಗಂಟೆಯಿಂದಲೇ ಆರಂಭಿಸಿದೆ. ಸರ್ಕಾರಕ್ಕೆ ಆದಾಯದ ಚಿಂತೆಯಾದರೆ, ಬಡವರ ಮನೆಗಳಿಗೆ ಸರ್ಕಾರದ ನಿರ್ಧಾರವೇ ಇದೀಗ ಬಹುದೊಡ್ಡ ಸಮಸ್ಯೆಯಾಗಿದೆ.
ಕೊರೊನಾ ಲಾಕ್ಡೌನ್ನಿಂದಾಗಿ ರಾಜ್ಯದಲ್ಲಿ ಬೆಳಿಗ್ಗೆ ಮಾತ್ರ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿದೆ. ಹೀಗಾಗಿ, ಮದ್ಯವ್ಯಸನಿಗಳು ಬೆಳಗ್ಗಿನಿಂದಲೇ ಕುಡಿಯಲು ಆರಂಭಿಸಿರುವುದರಿಂದ ಬಡ ಕುಟುಂಬಗಳು ಇದೀಗ ಸಂಕಷ್ಟದ ಕೂಪಕ್ಕೆ ಜಾರಿವೆ.
ಅಧ್ಯಯನದ ವರದಿ ಪ್ರಕಾರ, ರಾಜ್ಯ ಸರ್ಕಾರ ಬೆಳಗ್ಗೆ 6 ಗಂಟೆಯಿಂದಲೇ ಮದ್ಯ ಮಾರಟಕ್ಕೆ ಅನುಮತಿ ನೀಡಿರುವುದರಿಂದ ಬಹುತೇಕ ಮದ್ಯ ವ್ಯಸನಿಗಳು ಬೆಳಗ್ಗಿನಿಂದಲೇ ಕಂಠ ಪೂರ್ತಿ ಕುಡಿದು, ದಿನವಿಡೀ ಅಮಲಿನಲ್ಲಿ ಇದ್ದು, ಕುಟುಂಬದವರು ಹೊಟ್ಟೆಗೆ ಬಟ್ಟೆ ಕಟ್ಟಿ ಜೀವನ ನಡೆಸುವಂತಾಗಿದೆ. ಬೆಳಗ್ಗೆಯೇ ಅಮಲೇರಿಸಿದ ಬಳಿಕ ಕೆಲಸಕ್ಕೂ ಹೋಗಲು ಸಾಧ್ಯವಾಗದೆ ಮನೆ ನಡೆಸುವುದೇ ಅಸಾಧ್ಯವಾಗಿದೆ.
ಕಳೆದ ಬಾರಿಯ ಲಾಕ್ಡೌನ್ನಲ್ಲಿ ಮದ್ಯ ಮಾರಾಟಕ್ಕೂ ಸಂಪೂರ್ಣ ನಿಷೇಧವಿತ್ತು. ಬಹುತೇಕರು ಮದ್ಯಸೇವನೆಯ ಚಟವನ್ನೇ ಬಿಟ್ಟಿದ್ದರು. ಆದರೆ ಈ ಬಾರಿ ಸರ್ಕಾರ ಬೆಳಿಗ್ಗೆಯೇ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಕೊಟ್ಟಿರುವುದರಿಂದ ವ್ಯಸನಿಗಳ ಚಟಕ್ಕೂ ಬಲ ಬಂದಿದೆ.
ಅಷ್ಟೆ ಅಲ್ಲದೇ ಮದ್ಯವ್ಯಸನಿಗಳಿಗೆ ಆರೋಗ್ಯ ಸಮಸ್ಯೆಯೂ ಎದುರಾಗುತ್ತಿದ್ದು, ಮನೋವೈದ್ಯರ ಪ್ರಕಾರ, "ಕಳೆದ ಬಾರಿಯ ಕೊರೊನಾ ಸಂದರ್ಭದಲ್ಲಿ ಕೊರೊನಾದಿಂದ ಭಯಗೊಂಡ ರೋಗಿಗಳ ಸಂಖ್ಯೆ ಅಧಿಕವಾಗಿತ್ತು. ಈ ಬಾರಿ ಕುಡಿತದ ಚಟ ಕಲಿತವರ ಸಂಖ್ಯೆ ಜಾಸ್ತಿಯಾಗಿದೆ. ಕೆಲವರ ಆರೋಗ್ಯದ ಮೇಲೂ ತೀವ್ರ ಪರಿಣಾಮ ಬೀರಿದ್ದು, ಅಪಾಯವುಂಟಾಗುವ ಸಾಧ್ಯತೆಗಳೇ ಹೆಚ್ಚು' ಅಂತಾ ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ಬಡ ಕುಟುಂಬಗಳು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದು, ಮನೆಯನ್ನು ನೋಡಿಕೊಳ್ಳಬೇಕಾದವರು ಬೆಳಗ್ಗೆಯೇ ವೈನ್ ಶಾಪ್ಗಳ ಮುಂದೆ ಸಾಲು ನಿಲ್ಲುತ್ತಿದ್ದಾರೆ. ಮನೆಯನ್ನು ನಡೆಸುವುದೇ ಕಷ್ಟವಾಗುತ್ತಿದೆ. ಹಳ್ಳಿಗಳಲ್ಲೂ ಕೆಲವರು ಮನೆಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ನಮ್ಮ ಮನೆಯವರು ಕೆಲಸಕ್ಕೂ ಹೋಗದೇ, ಕುಡಿತವನ್ನು ಬಿಡದಿರುವುದರಿಂದ ಮಕ್ಕಳಿಗೆ ಊಟ ಹಾಕೋದೇ ಕಷ್ಟವಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಮಹಿಳೆ ಆತಂಕ ವ್ಯಕ್ತಪಡಿಸಿದ್ದಾರೆ.