ಮಂಗಳೂರು; ಕೈ ಕೊಟ್ಟ ಮಳೆ, ಬರಡಾದ ಕರಾವಳಿ ಗದ್ದೆಗಳು
ಮಂಗಳೂರು, ಜುಲೈ 07; ಕರಾವಳಿ ಅಂದಾಕ್ಷಣ ಅಲ್ಲಿ ನೀರಿಗೇನು ಬರಗಾಲವಿಲ್ಲ ಅನ್ನೋದು ಬಹುಜನರ ನಂಬಿಕೆಯಾಗಿದೆ. ಆದರೆ ಈ ಬಾರಿ ಮಾತ್ರ ಆ ಮಾತು ಸುಳ್ಳಾಗಿದೆ. ಮಳೆಗಾಲದಲ್ಲೂ ಬಿಸಿಲಿನ ತಾಪ ಕರಾವಳಿಯ ಭೂಮಿಯನ್ನು ಬರಡಾಗಿಸಿದೆ.
ಮಳೆಯನ್ನು ನಂಬಿ ಗದ್ದೆಯನ್ನು ಉಳುಮೆ ಮಾಡಿದ ರೈತರು ಇದೀಗ ಮಳೆ ಇಲ್ಲದೆ ಕಂಗಾಲಾಗಿದ್ದಾರೆ. ಬಿತ್ತನೆಗಾಗಿ ತೆಗೆದಿಟ್ಟ ಬೀಜಗಳು ರಾಶಿಯಲ್ಲೇ ಮೊಳಕೆ ಬರುತ್ತಿದ್ದು, ವರುಣನ ಅವಕೃಪೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ಬೇಸಿಗೆಯಲ್ಲಿ ಮಳೆ ಬಂದು ಮಳೆ ಸಾಕೋ ಸಾಕು ಅಂತಾ ಹೇಳಿದ್ದ ಕರಾವಳಿ ಜನ ಈಗ ಯಾವಾಗ ಮಳೆ ಬರುತ್ತದೆ? ಅಂತಾ ಆಕಾಶ ನೋಡುತ್ತಿದ್ದಾರೆ. ಆರಿದ್ರಾ ಮಳೆ ಸಂಪೂರ್ಣ ಕೈಕೊಟ್ಟು ಕರಾವಳಿಯ ಭತ್ತದ ಗದ್ದೆಗಳು ಬರಡಾಗಿದೆ.

ಮಳೆಯ ನೀರನ್ನೇ ನಂಬಿ ಮಾಡುವ ಏಣೇಲು ಬೇಸಾಯಕ್ಕೆ ಮಳೆಯ ಕೊರತೆ ಬಹುದೊಡ್ಡ ಹೊಡೆತ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು ಮೂರು ಸಾವಿರಕ್ಕಿಂತ ಹೆಚ್ಚು ಭತ್ತದ ಗದ್ದೆಗಳು ನೀರಿಲ್ಲದೆ ಒಣಗುತ್ತಿವೆ.
ಉತ್ತಮ ಮಳೆಯ ನಿರೀಕ್ಷೆಯನ್ನಿಟ್ಟುಕೊಂಡಿದ್ದ ರೈತರು ಗದ್ದೆಯನ್ನು ಉಳುಮೆ ಮಾಡಿ ಬಿತ್ತನೆಗೆ ತಯಾರು ಮಾಡಿಕೊಂಡಿದ್ದಾರೆ. ಮಳೆ ಸುರಿದರೆ ಬಿತ್ತನೆ ಮಾಡಲು ಎಲ್ಲಾ ಸಿದ್ಧತೆಗಳೂ ಆಗಿವೆ. ಆದರೆ ಮಳೆ ದೂರವಾಗಿ ತಿಂಗಳುಗಳೇ ಕಳೆದಿದೆ. ರೈತ ಆಕಾಶದತ್ತ ದೃಷ್ಟಿ ಹರಿಸಿ ಮಳೆಗಾಗಿ ಕಾದು ಕುಳಿತಿದ್ದಾನೆ.

ಮಳೆಯಿಲ್ಲದೆ ಬೆಟ್ಟು ಗದ್ದೆಗಳು ಹಡೀಲು ಬೀಳುವ ಆತಂಕ ರೈತರದ್ದಾಗಿದೆ. ಬಿತ್ತನೆಗಾಗಿ ತೆಗೆದಿಟ್ಟ ಬೀಜಗಳೆಲ್ಲಾ ಮೊಳಕೆ ಬರುತ್ತಿದ್ದು, ಸಂಪೂರ್ಣ ಹಾಳಾಗುವ ಆತಂಕ ರೈತರಲ್ಲಿದೆ. ಈ ಬೀಜಗಳನ್ನು ಬಿತ್ತಿದರೆ ಭತ್ತದ ಫಸಲು ನಿರೀಕ್ಷಿತ ಪ್ರಮಾಣದಲ್ಲಿ ಬರುವುದಿಲ್ಲ.
"ಮಳೆ ಒಮ್ಮೆ ಬಂದು ಮತ್ತೆ ನಿಂತರೆ ಬೀಜಗಳು ಗದ್ದೆಯಲ್ಲೇ ಹಾಳಾಗುತ್ತದೆ. ಗದ್ದೆಯನ್ನು ತೋಟ ಮಾಡದೆ ಹಿರಿಯರು ಕಲಿಸಿದ ಕೃಷಿ ಪದ್ಧತಿ ಯನ್ನೇ ಮುಂದುವರಿಸಿದ್ದೇವೆ. ಈಗಿನ ಸವಾಲು ನೋಡಿದರೆ ಗದ್ದೆಗಳೇ ಬೇಡ ಅನಿಸುತ್ತದೆ" ಎಂದು ಬೆಳ್ತಂಗಡಿ ತಾಲೂಕಿನ ನಾರಾವಿಯ ಗುಡ್ದಾಪಿನ ರೈತ ಸುರೇಂದ್ರ ಜೈನ್ ಹೇಳಿದ್ದಾರೆ.












Click it and Unblock the Notifications