ಶೌಚಾಲಯದಿಂದ ಚಿರತೆ ಪರಾರಿ, ಜೀವ ಉಳಿಸಿಕೊಂಡ ನಾಯಿ!
ಮಂಗಳೂರು, ಫೆಬ್ರವರಿ 03: ನಾಯಿಯ ಜೊತೆ ಶೌಚಾಲಯದಲ್ಲಿ ಬಂಧಿಯಾಗಿದ್ದ ಚಿರತೆ ಅರಣ್ಯ ಇಲಾಖೆ ಕಾರ್ಯಾಚರಣೆ ವೇಳೆ ಪರಾರಿಯಾಗಿದೆ. ಶೌಚಾಲಯದಲ್ಲಿದ್ದ ನಾಯಿ ಜೀವ ಉಳಿಸಿಕೊಂಡಿದೆ.
ಬುಧವಾರ ಮುಂಜಾನೆ ಇಂದಲೇ ನಾಯಿ ಮತ್ತು ಚಿರತೆ ಶೌಚಾಲಯದಲ್ಲಿ ಬಂಧಿಯಾದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೈಕಂಬ ಗ್ರಾಮದಲ್ಲಿ ಮುಂಜಾನೆ ಚಿರತೆ ಪ್ರತ್ಯಕ್ಷವಾಗಿತ್ತು.
ರೇಗಪ್ಪ ಎಂಬುವವರ ಮನೆಯ ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆಯನ್ನು ಮನೆಯವರು ಶೌಚಾಲಯದಲ್ಲಿ ಕೂಡಿ ಹಾಕಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಜೀವಂತವಾಗಿ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದರು.

ಶೌಚಾಲಯದ ಮೇಲ್ಭಾಗಕ್ಕೆ ಬಲೆಯನ್ನು ಹೊದಿಸಿ, ಜೆಸಿಬಿ ಮೇಲೆ ಹತ್ತಿ ಏರ್ ಗನ್ ಮೂಲಕ ಚಿರತೆಗೆ ಅರವಳಿಕೆ ಮದ್ದು ನೀಡಲು ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಈ ವೇಳೆ ಎಲ್ಲಾ ಶಕ್ತಿ ಉಪಯೋಗಿಸಿ ಮೇಲಕ್ಕೆ ಜಿಗಿದ ಚಿರತೆ ಶೌಚಾಲಯದ ಮೇಲ್ಬಾಗಕ್ಕೆ ಹಾಸಿದ್ದ ಶೀಟ್ ಸೀಳಿಕೊಂಡು ಪರಾರಿಯಾಗಿದೆ.
ಏಕಾಏಕಿ ಚಿರತೆ ಆರ್ಭಟ ಕಂಟು ಅರಣ್ಯ ಇಲಾಖೆ ಸಿಬ್ಬಂದಿ ಬೆಚ್ಚಿ ಬಿದ್ದರು. ಬೆಳಗ್ಗೆಯಿಂದ ಚಿರತೆ ಫೋಟೋ ತೆಗೆಯಲು, ವಿಡಿಯೋ ಮಾಡಲು ಪ್ರಯತ್ನ ಮಾಡುತ್ತಿದ್ದ ಜನರು ದಿಕ್ಕಾಪಾಲಾಗಿ ಓಡಿದರು. ಚಿರತೆ ಪರಾರಿಯಾಗುವ ವೇಳೆ ಯಾರಿಗೂ ಸಹ ಅಪಾಯವಾಗಿಲ್ಲ.
ಮುಂಜಾನೆಯಿಂದ ಚಿರತೆಗೆ ಬೆದರಿ ಶೌಚಾಲಯದ ಒಂದು ಮೂಲೆಯಲ್ಲಿ ಅಡಗಿ ಕುಳಿತಿದ್ದ ನಾಯಿ ಜೀವವನ್ನು ಉಳಿಸಿಕೊಂಡಿದೆ. ಬೆಳಗ್ಗೆಯಿಂದ ಚಿರತೆ ಜೊತೆಗಿದ್ದು ಗಾಬರಿಯಾಗಿದ್ದ ನಾಯಿ ನಿಟ್ಟುಸಿರು ಬಿಟ್ಟಿದೆ.












Click it and Unblock the Notifications