ಅಂಬ್ಲಮೊಗರು ಮದಕ ಜಂಕ್ಷನ್ ಬಳಿ ಗುಡ್ಡ ಕುಸಿತ
ಮಂಗಳೂರು ಜೂನ್ 21: ಕರಾವಳಿಯಲ್ಲಿ ಕಳೆದೆರೆಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಜಡಿ ಮಳೆ ಸುರಿಯುತ್ತಿದೆ. ಧೋ ಎಂದು ಸುರಿಯುತ್ತಿರುವ ಮಳೆಗೆ ಕೆಲವೆಡೆ ಭೂ ಕುಸಿತ ಉಂಟಾಗಿದೆ.
ಉಳ್ಳಾಲ ಸಮೀಪದ ಅಂಬ್ಲಮೊಗರು ಮದಕ ಜಂಕ್ಷನ್ ಬಳಿ ನಿನ್ನೆ ರಾತ್ರಿ ನಿರ್ಮಾಣ ಹಂತದ ಹಾಗೂ ಜನ ವಾಸವಿರುವ ಮನೆಗಳ ಮೇಲೆ ಹಾಗೂ ಮನೆಯ ಪಕ್ಕ ಗುಡ್ಡ ಕುಸಿದು ಬಿದ್ದಿದೆ.
ಈ ಮನೆಗಳು ಅಬ್ಬಾಸ್ ಹಾಗೂ ರಝಾಕ್ ಎಂಬುವವರಿಗೆ ಸೇರಿವೆ. ಗುಡ್ಡ ಕುಸಿದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಈ ಘಟನೆಯ ಬಳಿಕ ಗುಡ್ಡದ ಹತ್ತಿರದಲ್ಲಿರುವ ನಾಲ್ಕು ಮನೆಗಳು ಕೂಡ ಅಪಾಯ ಎದುರಾಗಿದೆ.

ಇಂದು ಮಂಜಾನೆಯಿಂದ ಜೆಸಿಬಿ ಮೂಲಕ ಮಣ್ಣು ತೆರವು ಗೊಳಿಸುವ ಕಾರ್ಯ ನಡೆಯುತ್ತಿದೆ. ಉಳ್ಳಾಲ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಎರಡು ದಿನಗಳಿಂದ ಸುರಿದ ಮಳೆ ಇಂದು ಕೊಂಚ ಬಿಡುವು ನೀಡಿದೆ.

ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೋಡದ ವಾತಾವರಣ ನೆಲೆಸಿದೆ. ಹವಾಮಾನ ಇಲಾಖೆಯ ಪ್ರಕಟಣೆಯಂತೆ ಇನ್ನೆರಡು ದಿನಗಳ ಕಾಲ ಕರಾವಳಿಯಲ್ಲಿ ಭಾರೀ ಮಳೆ ಸುರಿಯಲಿದೆ.












Click it and Unblock the Notifications