ಸರ್ಕಾರದ ವಿರುದ್ಧ ಬಿಲ್ಲವ ಸಮಾಜ ಆಕ್ರೋಶ: ಜನವರಿಯಲ್ಲಿ ಬೃಹತ್ ಪ್ರತಿಭಟನೆಗೆ ಸಿದ್ಧತೆ
ಮಂಗಳೂರು, ನವೆಂಬರ್2: ರಾಜ್ಯ ಸರ್ಕಾರ ಆದೇಶಿಸಿರುವ ನಾರಾಯಣ ಗುರು ಕೋಶಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಬಲ ಬಿಲ್ಲವ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರದಲ್ಲಿ ಬಿಲ್ಲವ ಮುಖಂಡರು ಸಭೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರಕಾರ ಘೋಷಣೆ ಮಾಡಿರುವ ಬ್ರಹ್ಮಶ್ರೀ ನಾರಾಯಣಗುರು ಕೋಶವನ್ನು ಬಿಲ್ಲವ, ಈಡಿಗ ಸೇರಿದಂತೆ 26 ಒಳಪಂಗಡಗಳು ಸಾರಾಸಗಟಾಗಿ ತಿರಸ್ಕರಿಸಿದೆ. ನಮಗೆ ಕೋಶದ ಅಗತ್ಯವಿಲ್ಲ. ನಿಜವಾಗಿಯೂ ಸರಕಾರಕ್ಕೆ ಇಚ್ಛಾಶಕ್ತಿ ಇದ್ದಲ್ಲಿ ನಮ್ಮ ಸಮುದಾಯಕ್ಕೆ ಬ್ರಹ್ಮಶ್ರೀ ನಾರಾಯಣಗುರು ನಿಗಮ ನೀಡಲಿ ಎಂದು ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಆಗ್ರಹಿಸಿದ್ದಾರೆ.

ಒಂದು ಇಲಾಖೆಯ ಅಡಿಯಲ್ಲಿ ನಾರಾಯಣ ಗುರು ಕೋಶ
ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ಬಿಲ್ಲವ ಸಮಾಜದ ಪ್ರಮುಖರ ಸಭೆಯ ಬಳಿಕ ಮಾತನಾಡಿದ ಅವರು, "ಈ ಕೋಶ ಹಲ್ಲಿಲ್ಲದ ಹಾವು. ಇದಕ್ಕೊಂದು ಉನ್ನತ ಸ್ಥಾನದ ಅಧಿಕಾರಿಯನ್ನು ನೇಮಕ ಮಾಡಿದ್ದರೂ, ಅವರಿಗೆ ಸ್ವತಂತ್ರ ಅಧಿಕಾರ ಇರುವುದಿಲ್ಲ. ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದರೂ ಸರಕಾರದ ಕಾರ್ಯದರ್ಶಿಯ ಅನುಮತಿ ಬೇಕಾಗುತ್ತದೆ. ಅಲ್ಲದೆ ಈ ಕೋಶ ಒಂದು ಇಲಾಖೆಯ ಅಡಿಯಲ್ಲಿದ್ದು, ಯಾವಾಗ ಬೇಕಾದರೂ ಇದನ್ನು ವಾಪಸ್ ತೆಗೆದುಕೊಳ್ಳಬಹುದು," ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಹೋರಾಟ ತೀವ್ರ
"ರಾಜ್ಯ ಸರ್ಕಾರ ಬ್ರಹ್ಮಶ್ರೀ ನಾರಾಯಣ ಗುರು ಕೋಶ ಸ್ಥಾಪಿಸಿ ಸಮುದಾಯವನ್ನು ತಪ್ಪುದಾರಿಗೆ ಎಳೆಯುತ್ತಿದೆ. ನಿಗಮ ಹಾಗೂ ಕೋಶಕ್ಕೆ ಬಹಳಷ್ಟು ವ್ಯತ್ಯಾಸವಿದೆ. ನಿಗಮ ಸ್ವಾಯತ್ತತೆಯನ್ನು ಹೊಂದಿರುವ ಸಂಸ್ಥೆಯಾಗಿದ್ದು, ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಶಕ್ತಿ ನಿಗಮಕ್ಕಿರುತ್ತದೆ. ಆದರೆ ಕೋಶದಿಂದ ಸಮುದಾಯದ ಯಾವ ಅಭಿವೃದ್ಧಿಯೂ ಆಗುವುದಿಲ್ಲ. ಇದಲ್ಲದೆ ಸರಕಾರ ಕೋಶ ಘೋಷಣೆ ಮಾಡಿದರೂ, ಎಷ್ಟು ಅನುದಾನ ಮೀಸಲಿಡಲಾಗಿದೆ ಎಂದು ಈವರೆಗೆ ಹೇಳಿಲ್ಲ. ಆದ್ದರಿಂದ ನಮ್ಮ ಬೇಡಿಕೆಗಳು ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ತೀವ್ರವಾಗಲಿದೆ," ಎಂದು ಪದ್ಮರಾಜ್ ಆರ್. ಎಚ್ಚರಿಸಿದ್ದಾರೆ.

1ಲಕ್ಷಕ್ಕೂ ಅಧಿಕ ಮಂದಿ ಭಾಗಿ ನಿರೀಕ್ಷೆ
ಇನ್ನು "ಬಿಲ್ಲವ, ಈಡಿಗ, ನಾಮಧಾರಿ ಸೇರಿದಂತೆ 26 ಪಂಗಡಗಳ ಸಮಗ್ರ ಅಭಿವೃದ್ಧಿಗಾಗಿ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಸಮುದಾಯವು ಜನವರಿ 29ರಂದು ಮಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸುತ್ತಿದೆ ಎಂದು ಶ್ರೀನಾರಾಯಣ ಗುರು ಐಕ್ಯತಾ ವೇದಿಕೆ ರಾಜ್ಯ ಸಮಿತಿಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.
ಜನವರಿ 29ರಂದು ರಂದು ಮಧ್ಯಾಹ್ನ 3ಕ್ಕೆ ಮೆರವಣಿಗೆ ನಡೆದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರ ಅಧ್ಯಕ್ಷತೆಯಲ್ಲಿ 4ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಕನಿಷ್ಠ 1ಲಕ್ಷಕ್ಕೂ ಅಧಿಕ ಮಂದಿ ಜನರು ಈ ಸಮಾವೇಶದಲ್ಲಿ ಸೇರಬೇಕೆಂಬ ಗುರಿ ಇರಿಸಲಾಗಿದೆ," ಎಂದು ಹೇಳಿದ್ದಾರೆ.

ಸಮಾವೇಶಕ್ಕೆ ಮೊದಲೇ ನಿಗಮ ಘೋಷಣೆಯಾದರೆ ವಿಜಯೋತ್ಸವ
"ಕನಿಷ್ಠ 500 ಕೋಟಿ ರೂ. ಅನುದಾನ ಮೀಸಲಿರಿಸಿ ಸಮಾಜಕ್ಕೆ ನಿಗಮ ಮಾಡಬೇಕು, ಕಾಂತರಾಜು ವರದಿ ಜಾರಿಯಾಗಲಿ, ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ - ಚೆನ್ನಯರ ಹೆಸರನ್ನಿಡಬೇಕೆಂಬ ಬೇಡಿಕೆಗಳನ್ನು ಮುಂದಿರಿಸಿ ಈ ಸಮಾವೇಶವನ್ನು ಆಯೋಜಿಸಲಾಗಿದೆ. ಸರಕಾರ ನಮ್ಮ ಸಮುದಾಯಕ್ಕೆ ಕೋಶ ಘೋಷಣೆ ಮಾಡಿ ಮತ್ತೆ ನಮಗೆ ಮಂಕುಬೂದಿ ಎರಚುವ ಕೆಲಸ ಮಾಡಿದೆ. ಹಿಂದುಳಿದ ವರ್ಗವು ಈ ರಾಜ್ಯದ ಜನಸಂಖ್ಯೆಯ 30-40 ಶೇಕಡಾ ಇದ್ದರೂ ಇಡೀ ಸಮುದಾಯಕ್ಕೆ ಸಿಕ್ಕಿರೋದು ಕೇವಲ 7 ಮಂದಿಗೆ ಮಂತ್ರಿ ಸ್ಥಾನ. ಸರ್ವರಿಗೂ ಸಮಪಾಲು ಸಮಬಾಳು ಎಂಬ ಆಧಾರದಲ್ಲೂ ಇನ್ನು ಮುಂದೆ ಯೋಚನೆ ಮಾಡಬೇಕಿದೆ. ಅದನ್ನೂ ಈ ಸಮಾವೇಶದಲ್ಲಿ ನಿರ್ಧಾರ ಮಾಡಲಾಗುತ್ತದೆ. ಸಮಾವೇಶಕ್ಕೆ ಮೊದಲೇ ನಿಗಮ ಘೋಷಣೆ ಆದಲ್ಲಿ ಖಂಡಿತಾ ವಿಜಯೋತ್ಸವ ಆಚರಣೆ ಮಾಡಲಾಗುತ್ತದೆ," ಎಂದು ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.












Click it and Unblock the Notifications