ಲಾಕ್ಡೌನ್: ಸುಬ್ರಹ್ಮಣ್ಯದಲ್ಲಿ ಹಾಲು ತಂದ ಕೃಷಿಕರ ವಾಹನಗಳು ಸೀಜ್
ಮಂಗಳೂರು, ಮೇ 10: ರಾಜ್ಯ ಸರ್ಕಾರದ ಕಠಿಣ ಲಾಕ್ಡೌನ್ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವ್ಯತಿರಿಕ್ತ ಬೆಂಬಲ ವ್ಯಕ್ಯವಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಜನ ದಿನಸಿ ಅಂಗಡಿಗಳಲ್ಲಿ ಮುಗಿಬಿದ್ದು, ಸಾಮಾಗ್ರಿ ಖರೀದಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮತ್ತು ಆದಿತ್ಯವಾರ ವೀಕೆಂಡ್ ಕರ್ಫ್ಯೂ ಇದ್ದ ಕಾರಣ, ಅಗತ್ಯ ವಸ್ತುಗಳ ಅಂಗಡಿಗಳೂ ಮುಚ್ಚಿದ್ದವು. ಈ ಹಿನ್ನಲೆಯಲ್ಲಿ ಬೆಳ್ಳಂಬೆಳಗ್ಗೆ ಅಂಗಡಿಗಳಿಗೆ ಧಾವಿಸಿ ಬಂದ ಜನರು ಸಾಮಾಜಿಕ ಅಂತರವಿಲ್ಲದೆ, ಗುಂಪು ಗುಂಪಾಗಿ ಸಾಮಾಗ್ರಿ ಖರೀದಿಯಲ್ಲಿ ತೊಡಗಿರುವುದು ಕಂಡು ಬಂದಿದೆ.
ಮಂಗಳೂರು ನಗರ ಪ್ರವೇಶಿಸುವ ಪಡೀಲ್, ಪಂಪ್ವೆಲ್, ನಂತೂರು ಜಂಕ್ಷನ್ ಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರೂ ಜನ ಮಾತ್ರ ಕ್ಯಾರೇ ಅನ್ನದೆ ಮಂಗಳೂರು ನಗರದ ತುಂಬಾ ಓಡಾಟ ಮಾಡಿದ್ದಾರೆ. ಜಿಲ್ಲಾಡಳಿತ ವಾಹನಗಳನ್ನು ಮುಟ್ಟುಗೋಲು ಹಾಕುವ ಎಚ್ಚರಿಕೆ ನೀಡಿದ್ದರೂ, ಮಂಗಳೂರಿನ ನಗರದ ರಸ್ತೆಗಳು ವಾಹನಗಳಿಂದ ತುಂಬಿ ಹೋಗಿತ್ತು.

ಬೆಳಗ್ಗೆ 6 ಗಂಟೆಯಿಂದ 9 ಗಂಟೆ ತನಕ ದಿನಸಿ ಮತ್ತು ಆಹಾರ ಸಾಮಾಗ್ರಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದರಿಂದ 9 ಗಂಟೆಗೆ ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದ್ದಾರೆ.
ಮಂಗಳೂರಿನ ನಗರದ ಚಿಲಿಂಬಿಯ ಮಾಲ್ನಲ್ಲಿ ಗ್ರಾಹಕರ ಕ್ಯೂ ಒಂದು ಕಿಲೋಮೀಟರ್ ವರೆಗೂ ನಿಂತಿದ್ದು ಕಂಡು ಬಂದಿದೆ. ಮಂಗಳೂರು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಜನರ ಓಡಾಟ ಅತೀ ಹೆಚ್ಚಾಗಿದ್ದು, ಜನ ಕೊರೊನಾ ನಿಯಮಕ್ಕೆ ಕ್ಯಾರೇ ಮಾಡದಿರೋದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.

ಇನ್ನೂ ಪೊಲೀಸರೂ ಸರ್ಕಾರದ ಮಾರ್ಗಸೂಚಿಗಳಿಂದ ಗೊಂದಲಕ್ಕೀಡಾಗಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಗ್ಗಿನ ಜಾವ ಏಳು ಗಂಟೆಗೆ ಹಳ್ಳಿಯಿಂದ ಡೈರಿಗಳಿಗೆ ಹಾಲು ತರುವ ಕೃಷಿಕರನ್ನೂ ಪೊಲೀಸರು ತಡೆದಿದ್ದು, ವಾಹನಗಳನ್ನು ಸೀಜ್ ಮಾಡಿದ್ದಾರೆ.
ಸರ್ಕಾರ ವಾಹನ ಬಳಕೆ ಮಾಡಬಾರದಾಗಿ ಹೇಳಿದ್ದು, ಜಿಲ್ಲಾಡಳಿತ ವಾಹನ ಬಳಕೆಗೆ ಅವಕಾಶ ನೀಡಿದೆ. ಈ ಹಿನ್ನಲೆಯಲ್ಲಿ ಪೊಲೀಸರ ಗೊಂದಲದಿಂದ ಬಡಪಾಯಿ ಕೃಷಿಕರ ವಾಹನಗಳನ್ನು ಸೀಜ್ ಮಾಡಿದ್ದು, ಸರ್ಕಾರದ ದಿಕ್ಕೆಟ್ಟ ನೀತಿಗಳಿಂದ ಜನ ತೊಂದರೆ ಅನುಭವಿಸುವಂತಾಗಿದೆ.












Click it and Unblock the Notifications