ಮೇ 3ರಂದು ಕರಾವಳಿಯಲ್ಲಿ ಮೋದಿ ದಂಡಯಾತ್ರೆ; ಮಂಗಳೂರು-ಉಡುಪಿ ಹೆದ್ದಾರಿ ಸಂಚಾರದಲ್ಲಿ ಬದಲಾವಣೆ
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಮೇ 10ರಂದು ನಡೆಯುವ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ಮತದಾರನ ಮನಗೆಲ್ಲಲು ರಾಜಕೀಯ ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.
ಕರುನಾಡ ಕುರುಕ್ಷೇತ್ರ ಅಖಾಡದಲ್ಲಿ ರಾಜ್ಯ ನಾಯಕರಲ್ಲದೆ, ರಾಷ್ಟ್ರೀಯ ನಾಯಕರು ಕರ್ನಾಟಕದಲ್ಲೇ ಠಿಕಾಣಿ ಹೂಡಿ ಪ್ರತಿ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಶನಿವಾರದಿಂದ ರಾಜ್ಯದಲ್ಲಿ ದಂಡಯಾತ್ರೆ ಪ್ರಾರಂಭಿಸಿದ್ದು, ಅಬ್ಬರದ ಪ್ರಚಾರ ಸಮಾವೇಶಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಈಗಾಗಲೇ ಅಮಿತ್ ಶಾ, ಜೆಪಿ ನಡ್ಡಾ ರಾಜ್ಯದಲ್ಲಿ ಇದ್ದು, ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ರಣತಂತ್ರ ರೂಪಿಸುತ್ತಿದ್ದಾರೆ. ಶನಿವಾರ, ಭಾನುವಾರ ಸೇರಿ 6 ಸಮಾವೇಶ ಮತ್ತು 2 ರೋಡ್ ಶೋಗಳಲ್ಲಿ ಭಾಗವಹಿಸಿದ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಮತ ಬೇಟೆಯಾಡಿದ್ದಾರೆ.
ಇದೀಗ ಮಂಗಳವಾರದಿಂದ ಮತ್ತೆ ಕರ್ನಾಟಕದಲ್ಲಿ ಅಬ್ಬರದ ಪ್ರಚಾರ ಆರಂಭಿಸಿರುವ ನರೇಂದ್ರ ಮೋದಿ, ಚಿತ್ರದುರ್ಗ, ಹೊಸಪೇಟೆ, ಸಿಂಧನೂರಿನಲ್ಲಿ ಸಮಾವೇಶ ನಡೆಸಿದ್ದರೆ, ಕಲಬುರಗಿಯಲ್ಲಿ ರೋಡ್ ಶೋ ನಡೆಸಿದರು.

ಇನ್ನು ಬುಧವಾರ, ಮೇ 3ರಂದು ಕರಾವಳಿಯಲ್ಲಿ ದಂಡಯಾತ್ರೆ ನಡೆಸಲಿರುವ ನರೇಂದ್ರ ಮೋದಿ, ಬೆಳಗ್ಗೆ 10.30ಕ್ಕೆ ಮಂಗಳೂರಿನ ಮುಲ್ಕಿಯಲ್ಲಿ ನಡೆಯುವ ಬಿಜೆಪಿ ಅಭ್ಯರ್ಥಿಗಳ ಪರ ಬೃಹತ್ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೇಸರಿ ಕಲರವ ಎಬ್ಬಿಸಲಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಎರಡು ಜಿಲ್ಲೆಗಳಿಂದ ಎರಡೂವರೆ ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದ್ದು, ಪ್ರಧಾನಿ ನರೇಂದ್ರ ಮೋದಿ ಬರುವ ಹಿನ್ನೆಲೆ ಈಗಾಗಲೇ ಪ್ರತಿ ಬೂತ್ ಮಟ್ಟದಲ್ಲಿ ಬಿಜೆಪಿ ಸಭೆ ನಡೆಸಿದೆ.

ಪ್ರಧಾನಿ ನರೇಂದ್ರ ಮೋದಿಯವರ ಹೆಲಿಕಾಪ್ಟರ್ ಲ್ಯಾಂಡಿಂಗ್ಗಾಗಿ ಮೂರು ಹೆಲಿಪ್ಯಾಡ್ಗಳನ್ನು ನಿರ್ಮಿಸಲಾಗಿದೆ. ಎನ್ಎಮ್ಪಿಎ, ಎಮ್ಆರ್ಪಿಎಲ್ ಒಳಗೆ ಎರಡು ಮತ್ತು ಮುಲ್ಕಿಯ ಕಾರ್ಯಕ್ರಮ ಸ್ಥಳದಲ್ಲಿ ಒಂದು ಹೆಲಿಪ್ಯಾಡ್ ಸಿದ್ದಪಡಿಸಲಾಗಿದೆ.
ಮೂರರಲ್ಲಿ ಒಂದು ಹೆಲಿಪ್ಯಾಡ್ಗೆ ಪ್ರಧಾನಿ ಮೋದಿಯವರ ಹೆಲಿಕಾಪ್ಟರ್ ಬಂದು ಇಳಿಯಲಿದೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಕಾರ್ಯಕ್ರಮ ಸ್ಥಳಕ್ಕೆ ತೆರಳಲಿದ್ದಾರೆ. ಮುಲ್ಕಿ ಹೆಲಿಪ್ಯಾಡ್ ಮತ್ತು ಕಾರ್ಯಕ್ರಮ ಸ್ಥಳ ಸುಮಾರು ಅರ್ಧ ಕಿಲೋಮೀಟರ್ ಅಂತರದಲ್ಲಿದೆ.
ಮಂಗಳೂರು-ಉಡುಪಿ ಹೆದ್ದಾರಿ ಸಂಚಾರದಲ್ಲಿ ಬದಲಾವಣೆ
ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುವ ಎಲ್ಲಾ ರೀತಿಯ ವಾಹನಗಳು ಮುಲ್ಕಿ ವಿಜಯ ಸನ್ನಿಧಿಯ ಬಳಿ ಎಡಕ್ಕೆ ಚಲಿಸಿ ಕಿನ್ನಿಗೋಳಿ-ಕಟೀಲು-ಬಜ್ಪೆ-ಕಾವೂರು ಮಾರ್ಗವಾಗಿ ಮಂಗಳೂರು ಕಡೆಗೆ ಸಂಚರಿಬಹುದು.
ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುವ ಎಲ್ಲಾ ರೀತಿಯ ವಾಹನಗಳು ಕೆಪಿಟಿ ಜಂಕ್ಷನ್ನಲ್ಲಿ ಬಲಕ್ಕೆ ಚಲಿಸಿ ಕಾವೂರು-ಬಜ್ಪೆ-ಕಟೀಲು-ಕಿನ್ನಿಗೋಳಿ-ಮುಲ್ಕಿ ಕಡೆಗೆ ಅಥವಾ ಕೂಳೂರು ಜಂಕ್ಷನ್ನಿಂದ ಬಲಕ್ಕೆ ಚಲಿಸಿ ಕಾವೂರು-ಬಜ್ಪೆ-ಕಟೀಲು-ಕಿನ್ನಿಗೋಳಿ ಮಾರ್ಗವಾಗಿ ಮುಲ್ಕಿ ಕಡೆಗೆ ಸಂಚರಿಸಬಹುದು.
ಮಂಗಳೂರು, ಸುರತ್ಕಲ್ ಕಡೆಯಿಂದ ಉಡುಪಿ ಕಡೆಗೆ ಹೋಗುವ ವಾಹನಗಳು ಹಳೆಯಂಗಡಿ ಜಂಕ್ಷನ್ ಬಳಿ ಬಲಕ್ಕೆ ತಿರುಗಿ ಪಕ್ಷಿಕೆರೆ ಎಸ್ ಕೋಡಿ ಮಾರ್ಗವಾಗಿ ಮುಲ್ಕಿ ಕಡೆಗೆ ಸಂಚರಿಸಬಹುದು.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಯಾವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.












Click it and Unblock the Notifications