ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಟ್ಟಿಂಗ್ ಭರಾಟೆ, ಬುಕ್ಕಿಗಳ ಫೇವರಿಟ್ ಯಾರು?
ಮಂಗಳೂರು, ಮೇ 13: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮತ ಎಣಿಕೆಗೆ ಸಮಯ ಸಮೀಪಿಸುತ್ತಿದ್ದಂತೆ ಸಟ್ಟಾ ಬಜಾರ್ ಅಥವಾ ಬೆಟ್ಟಿಂಗ್ ಲೋಕದಲ್ಲಿ ಭಾರಿ ಚಟುವಟಿಕೆ ಆರಂಭವಾಗಿದೆ.
ರಾಜ್ಯದಲ್ಲಿ ಯಾರು ಸರಕಾರ ರಚನೆ ಮಾಡುತ್ತಾರೆ ಎನ್ನುವುದರ ಮೇಲೆ ಬೆಟ್ಟಿಂಗ್ ಅರಂಭವಾದರೆ, ಇನ್ನೊಂದೆಡೆ ಪ್ರತಿ ಅಭ್ಯರ್ಥಿಗಳ ಸೋಲು ಗೆಲುವಿನ ಮೇಲೂ ಬೆಟ್ಟಿಂಗ್ ನಡೆಯುತ್ತಿದೆ.
ಉಡುಪಿ, ಬೈಂದೂರಿನಲ್ಲಿ ಬೆಟ್ಟಿಂಗ್ ಜೋರು: ಕೃಷ್ಣನಗರಿಯಲ್ಲಿ ಗೆಲ್ಲೋರಾರು ?
ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದ ಫಲಿತಾಂಶದ ಮೇಲೂ ಭಾರೀ ಬೆಟ್ಟಿಂಗ್ ಆರಂಭವಾಗಿದೆ. ಅದರಲ್ಲೂ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿನ ಸೋಲು ಗೆಲುವಿನ ವಿಚಾರದಲ್ಲಿ ಭಾರೀ ಬೆಟ್ಟಿಂಗ್ ನಡೆಸಲಾಗುತ್ತಿದೆ.
ದಕ್ಷಿಣ ಕನ್ನಡದಲ್ಲಿ ಬಹುತೇಕ ಕಾಂಗ್ರೆಸ್ - ಬಿಜೆಪಿ ನಡುವೆ ನೇರ ಫೈಟ್ ಇದ್ದು ಗೆಲುವಿನ ಲೆಕ್ಕಾಚಾರ ಆರಂಭಗೊಂಡಿದೆ. ಒಟ್ಟಾರೆ ಬೆಟ್ಟಿಂಗ್ ನಲ್ಲಿ ಕಾಂಗ್ರೆಸ್ ಪರ ಒಲವಿದ್ದು, ಸಚಿವ ರಮಾನಾಥ ರೈ ಗೆಲ್ಲುವ ಫೇವರಿಟ್ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ರಮಾನಾಥ ರೈ ಪರ ಒಂದು ಲಕ್ಷಕ್ಕೆ ಒಂದೂವರೆ ಪಟ್ಟು ನೀಡುವಷ್ಟು ಬೆಟ್ಟಿಂಗ್ ನಡೀತಿದೆ. ಬಂಟ್ವಾಳದಲ್ಲಿ ಎಸ್ ಡಿಪಿಐ ಮತ್ತು ಕಮ್ಯುನಿಸ್ಟ್ ಬಹಿರಂಗವಾಗೇ ಕಾಂಗ್ರೆಸ್ ಪರ ನಿಂತಿದ್ದರಿಂದ ರಮಾನಾಥ ರೈ ಗೆಲುವಿನ ಬಗ್ಗೆ ಲೆಕ್ಕಾಚಾರ ಮಾಡ್ತಿದ್ದಾರೆ. ಇನ್ನು ವೋಟಿಂಗ್ ಪರ್ಸೆಂಟೇಜ್ ಹೆಚ್ಚಾಗಿದ್ದರಿಂದ ಬಿಜೆಪಿ ಕೂಡ ಬಂಟ್ವಾಳದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದೆ.
ವೋಟಿಂಗ್ ಆಯ್ತು ಇದೀಗ ಬೆಟ್ಟಿಂಗ್ ಸರದಿ!
ಈ ನಡುವೆ ಮಂಗಳೂರು ನಗರ ದಕ್ಷಿಣ ಹಾಗು ಉತ್ತರ ವಿಧಾನಸಭಾ ಕ್ಷೇತ್ರ ಸೇರಿದಂತೆ ಬೆಳ್ತಂಗಡಿ ಕ್ಷೆತ್ರದ ಫಲಿತಾಂಶದ ಮೇಲು ಭಾರೀ ಬೆಟ್ಟಿಂಗ್ ನಡೆದಿದೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಜೆ.ಆರ್. ಲೋಬೊ ಹಾಗೂ ಬಿಜೆಪಿಯ ವೇದವ್ಯಾಸ ಕಾಮತ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು ಫಲಿತಾಂಶ ಭಾರೀ ಕುತೂಹಲ ಮೂಡಿಸಿದೆ.
ಜಿಲ್ಲೆಯಲ್ಲಿ ಅತಿ ಕಡಿಮೆ ಮತದಾನ ದಾಖಲಾಗಿರುವುದು ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ. ಇದು ಫಲಿತಾಂಶದ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬ ಲೆಕ್ಕಾಚಾರವನ್ನು ಬುಕ್ಕಿಗಳು ಹಾಕುತ್ತಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಮೊಯ್ದೀನ್ ಬಾವಾ ಹಾಗು ಬಿಜೆಪಿಯ ಡಾ. ಭರತ್ ಶೆಟ್ಟಿ ನಡುವೆ ನೇರ ಜಿದ್ದಾಜಿದ್ದಿ ಇದೆ. ಇಲ್ಲಿ ಕಾಂಗ್ರೆಸ್ ನ ಮೊಯ್ದೀನ್ ಬಾವಾ ಫೇವರಿಟ್ ಆಗಿದ್ದಾರೆ. ಆದರೆ ಕ್ಷೇತ್ರದಲ್ಲಿ ಶೇಕಡಾ 75 ರಷ್ಟು ಮತದಾನ ದಾಖಲಾದ ಹಿನ್ನೆಲೆಯಲ್ಲಿ ಬಿಜೆಪಿಯವರು ಜಯದ ನಿರೀಕ್ಷೆ ಯಲ್ಲಿದ್ದಾರೆ.
ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಜೆಪಿ ಹರೀಶ್ ಪೂಂಜಾ ಹಾಗೂ ಕಾಂಗ್ರೆಸಿನ ವಸಂತ ಬಂಗೇರಾ ನಡುವೆ ನೇರ ಹಣಾಹಣಿ ಇದೆ. ಇಲ್ಲಿ ಹರೀಶ್ ಪೂಂಜಾ ಬುಕ್ಕಿಗಳ ಫೇವರೆಟ್. ಜಿಲ್ಲೆಯಲ್ಲಿ 4 ಕಡೆ ವೋಟಿಂಗ್ ಪರ್ಸೆಂಟೇಜ್ ಹೆಚ್ಚಾಗಿದ್ದರಿಂದ ಬಿಜೆಪಿ ಗೆಲುವಿನ ನಿರೀಕ್ಷೆಯಲ್ಲಿದೆ.