6 ಬಾರಿ ಶಾಸಕರಾದರೂ ಸಚಿವರಾಗುವ ಭಾಗ್ಯವಿಲ್ಲ! ಅಂಗಾರ ಹೇಳಿದ್ದೇನು?
ಮಂಗಳೂರು, ಆಗಸ್ಟ್ 20: "ನಾವು ತತ್ತ್ವ, ನಿಷ್ಠೆಗಳಲ್ಲಿ ನಂಬಿಕೆ ಇಟ್ಟು ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ ಅದಕ್ಕೆ ಬೆಲೆ ಇಲ್ಲ ಎಂದರೆ ಏನು ಮಾಡುವುದು? ಹಾಗಂತ ನಾವು ತತ್ತ್ವ ನಿಷ್ಠೆ ಬಿಟ್ಟು ಬದುಕುವುದಕ್ಕಾಗುತ್ತದೆಯೇ?" ಎಂದು ಸುಳ್ಯ ಬಿಜೆಪಿ ಶಾಸಕ ಎಸ್.ಅಂಗಾರ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಮಂಗಳವಾರ ನಸುಕಿನಲ್ಲಿ ನಿರ್ಧಾರವಾದ ಸಚಿವರ ಪಟ್ಟಿಯಲ್ಲಿ ಅಂಗಾರ ಅವರ ಹೆಸರಿರಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಏಳರಲ್ಲಿ ಬಿಜೆಪಿಯೇ ಗೆಲುವು ಸಾಧಿಸಿದೆ. ಆದರೂ ಕರಾವಳಿಗೆ ಮಂತ್ರಿ ಸ್ಥಾನ ನೀಡದಿರುವುದು ಈ ಭಾಗದ ಜನರಲ್ಲಿ ಭಾರೀ ನಿರಾಸೆ ಮೂಡಿಸಿದೆ.
"ನಮ್ಮ ಜಿಲ್ಲೆ ಮತ್ತು ಕ್ಷೇತ್ರದ ಜನರಿಗೆ ತಮ್ಮ ಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕು, ಮಂತ್ರಿಸ್ಥಾನ ನೀಡಬೇಕು ಎಂಬುದು ಅಪೇಕ್ಷೆ. ಆದರೆ ತತ್ತ್ವ, ನಿಷ್ಠೆಗಳಿಗೆ ಬೆಲೆ ಇಲ್ಲವೆಂದರೆ ನಾವು ಏನೂ ಮಾಡುವುದಕ್ಕೆ ಆಗುವುದಿಲ್ಲ. ನಾನು ಮೊದಲಿನಿಂದಲೂ ಸಂಘಟನೆಯಲ್ಲಿ ಗುರುತಿಸಿಕೊಂಡವನು. ಸಚಿವ ಸ್ಥಾನ ದೊರಕಲಿಲ್ಲ ಎಂಬುದು ಸತ್ಯ. ಆದರೆ ಸಂಘಟನೆಯೊಂದಿಗೆ ನನಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನನ್ನ ಮೇಲೆ ಪ್ರೀತಿ, ವಿಶ್ವಾಸ ಇಟ್ಟು ಇಲ್ಲಿಯ ತನಕ ಬಂದಿರುವ ಎಲ್ಲರಿಗೂ ನಾನು ಋಣಿಯಾಗಿರುತ್ತೇನೆ" ಎಂದು ಅಂಗಾರ ಹೇಳಿದ್ದಾರೆ.

ಈ ಎಂಟು ಶಾಸಕರಲ್ಲಿ ಆರು ಬಾರಿ ವಿಧಾಸಭೆಗೆ ಆಯ್ಕೆಯಾದ ಅಂಗಾರ ಅವರು ಹಿರಿಯರು. ಸಂಘ-ಪರಿವಾರದ ಪ್ರಾಬಲ್ಯ ಇರುವ ಕಾರಣಕ್ಕೇ ಈ ಜಿಲ್ಲೆಯಲ್ಲಿ ವಿಧಾನಸಭೆ ಮತ್ತು ಲೋಕಸಭೆ ಎರಡು ಚುನಾವಣೆಗಳಲ್ಲೂ ಬಿಜೆಪಿಗೆ ಭಾರೀ ಯಶಸ್ಸು ಲಭಿಸಿದೆ. ಆದರೆ ಸಂಘ-ಪರಿವಾರದ ಹಿನ್ನೆಲೆಯಿಂದಲೇ ಬಂದ ಎಸ್.ಅಂಗಾರ ಅವರನ್ನು ಸಚಿವರನ್ನಾಗಿ ಮಾಡದೆ, ಬಿಜೆಪಿ ಭಾರೀ ದೊಡ್ಡ ಪ್ರಮಾದವನ್ನು ಮಾಡಿದೆ ಎಂಬ ಮಾತು ಕೇಳಿಬರುತ್ತಿದೆ.
ಸದಾ ಸಮಾಜಸೇವೆಯಲ್ಲಿ ಹೆಸರಾಗಿರುವ ಅಂಗಾರ ಸತತವಾಗಿ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿ, ಈ ಸಾಧನೆ ಮಾಡಿದ ದಕ್ಷಿಣ ಕನ್ನಡದ ಏಕೈಕ ಶಾಸಕ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಯಡಿಯೂರಪ್ಪ ಆಂಡ್ ಟೀಂ: ಸಂಪುಟ ವಿಸ್ತರಣೆ ಸಂತಸದ ಚಿತ್ರಗಳು
ಅಂಗಾರ ಅವರಿಗೆ ಸಾಕಷ್ಟು ಬೆಂಬಲಿಗರಿದ್ದು, ಅವರಿಗೆ ಸಚಿವ ಸ್ಥಾನ ಸಿಗದಿರುವುದರಿಂದ ಬೇಸರಗೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2018 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ರಘು ವಿರುದ್ಧ 15000 ಗೂ ಅಧಿಕ ಮತಗಳ ಅಂತರದಲ್ಲಿ ಅವರು ಗೆಲುವು ಸಾಧಿಸಿದ್ದರು.












Click it and Unblock the Notifications