Get Updates
Get notified of breaking news, exclusive insights, and must-see stories!

Puttur Election Result: ಹಿಂದುತ್ವದ ಪೇಟೆಂಟ್ ತನ್ನದೇ ಎನ್ನುವ ಗುಂಗಿನಲ್ಲಿದ್ದ ಬಿಜೆಪಿಗರಿಗೆ ಹಿಂದೂ ನಾಯಕನಿಂದಲೇ ಪಾಠ

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಕೆಲವೊಂದು ಸಮೀಕ್ಷೆಗಳು ಹೇಳಿದಂತೆ, ಕಾಂಗ್ರೆಸ್ ಬಹುಮತ ಪಡೆದುಕೊಂಡಿದೆ. ಬಿಜೆಪಿ ಮತ್ತು ಜೆಡಿಎಸ್ ಕಳಪೆ ಪ್ರದರ್ಶನ ಮಾಡಿದೆ. ಹಿಂದುತ್ವದ ಪ್ರಯೋಗಶಾಲೆಯಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೇಸರಿ ಹವಾ ಈ ಚುನಾವಣೆಯಲ್ಲೂ ಮುಂದುವರಿದಿದೆ.

ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಳೆದ ಬಾರಿ ಹದಿಮೂರರಲ್ಲಿ ಹನ್ನೆರಡು ಗೆದ್ದಿದ್ದ ಬಿಜೆಪಿ, ಈ ಬಾರಿ 11 ಸ್ಥಾನವನ್ನು ಗೆದ್ದಿದೆ. ಒಂದು ಸ್ಥಾನ ಯಾಕೆ ಬಿಜೆಪಿ ಕಳೆದುಕೊಂಡಿದ್ದು ಎನ್ನುವುದಕ್ಕೆ ಕಾಂಗ್ರೆಸ್ಸಿನ ಪ್ರಭಾವ ಎನ್ನುವುದಕ್ಕಿಂತ ಬಿಜೆಪಿಯ ಸ್ವಯಂಕೃತ ಅಪರಾಧದಿಂದ ಅಥವಾ ಹಿಂದುತ್ವದ ಪೇಟೆಂಟ್ ತನ್ನಲ್ಲೇ ಇರುವುದು ಎನ್ನುವ ಅತಿಯಾದ ಆತ್ಮವಿಶ್ವಾಸದಿಂದ ಆಗಿರಬಹುದು.

Karnataka Assembly Elections 2023

ದಕ್ಷಿಣ ಕನ್ನಡದ ಪುತ್ತೂರು ಕ್ಷೇತ್ರದ ಚುನಾವಣೆ ರಂಗೇರಲು ಆರಂಭವಾಗಿದ್ದದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಹಿಂದೂಪರ ಸಂಘಟನೆಯ ಮತ್ತು ಸ್ಥಳೀಯವಾಗಿ ಪ್ರಭಾವೀ ನಾಯಕರಾಗಿರುವ ಅರುಣ್ ಕುಮಾರ್ ಪುತ್ತಿಲ ಅವರಿಂದ. ಬ್ರಾಹ್ಮಣ ಸಮುದಾಯದ ಈ ನಾಯಕ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದವರು.

ಬಿಜೆಪಿಯ ಹಿರಿಯ ಸದಸ್ಯರು ಮತ್ತು ಸಂಘ ಪರಿವಾರದ ಪ್ರಮುಖರು

ಆದರೆ, ಕೆಲವು ಬಿಜೆಪಿಯ ಹಿರಿಯ ಸದಸ್ಯರು ಮತ್ತು ಸಂಘ ಪರಿವಾರದ ಪ್ರಮುಖರ ಒತ್ತಡದಿಂದಾಗಿ ಟಿಕೆಟ್ ಆಶಾ ತಿಮ್ಮಯ್ಯ ಎನ್ನುವ ಎಲ್ಲರ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿರುವ ನಾಯಕಿಯ ಪಾಲಾಯಿತು. ಅಲ್ಲಿಂದ ಆರಂಭವಾದ ಹಿಂದೂಪರ ಸಂಘಟನೆಗಳ ವಿರೋಧಕ್ಕೆ ಬಿಜೆಪಿ ಆರಂಭದಲ್ಲಿ ಸೊಪ್ಪು ಹಾಕಲಿಲ್ಲ. ಆದರೆ, ನಾಮಪತ್ರ ಸಲ್ಲಿಸುವ ದಿನ ಪುತ್ತಿಲ ಅವರ ಮೆರವಣಿಗೆಗೆ ಸೇರಿದ್ದ ಜನಸಾಗರ ಬಿಜೆಪಿ ನಾಯಕರನ್ನು ಬೆಚ್ಚಿಬೀಳಿಸುವಂತೆ ಮಾಡಿತು.

Karnataka Assembly Elections 2023

ಯಡಿಯೂರಪ್ಪನವರಿಂದಲೇ ಪುತ್ತಿಲ ಅವರಿಗೆ ಫೋನ್

ಖುದ್ದು ಯಡಿಯೂರಪ್ಪನವರೇ ಪುತ್ತಿಲ ಅವರಿಗೆ ಫೋನ್ ಮಾಡಿ ನಾಮಪತ್ರ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದರು. ಆದರೆ, ಅದ್ಯಾವುದಕ್ಕೂ ಜಗ್ಗದ ಪುತ್ತಿಲ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡರು. ಬಹುತೇಕ ಎಲ್ಲಾ ಹಿಂದೂಪರ ಸಂಘಟನೆಗಳು ಪುತ್ತಿಲಗೆ ಬೆಂಬಲ ಸೂಚಿಸಿದವು. ಕ್ಷೇತ್ರದ ಫಲಿತಾಂಶದ ಲೆಕ್ಕಾಚಾರ ಅಂದೇ ನಿರ್ಧಾರವಾಗಿ ಹೋಗಿತ್ತು.

ಬಿಜೆಪಿ ಮತ್ತು ಹಿಂದೂ ಸಂಘಟನೆಯ ಜಿದ್ದು

ಪುತ್ತೂರಿಗೆ ಪುತ್ತಿಲ ಅಥವಾ ಬಿಜೆಪಿ ಮತ್ತು ಹಿಂದೂ ಸಂಘಟನೆಯ ಜಿದ್ದಿನಿಂದ, ಇಬ್ಬರ ನಡುವೆ ಮೂವರಿಗೆ ಲಾಭ ಎನ್ನುವ ಹಾಗೇ ಕಾಂಗ್ರೆಸ್ ಜಯ ಸಾಧಿಸಬಹುದು ಎನ್ನುವ ಲೆಕ್ಕಾಚಾರವಿತ್ತು. ಈಗ ಫಲಿತಾಂಶ ಹೊರಬಿದ್ದಿದೆ, ಕಾಂಗ್ರೆಸ್ಸಿನ ಅಶೋಕ್ ಕುಮಾರ್ ರೈ ಅವರು ಪುತ್ತಿಲ ಅವರನ್ನು 4,295 ಮತಗಳ ಅಂತರದಿಂದ ಸೋಲಿಸಿದರು. ಬಿಜೆಪಿಯ ಆಶಾ ತಿಮ್ಮಯ್ಯ 36,733 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿ ಪಡುವ ಮೂಲಕ, ಬಿಜೆಪಿ ಭಾರೀ ಮುಖಭಂಗವನ್ನು ಎದುರಿಸಿತು.

ಪ್ರತೀ ರೌಂಡಿನ ಎಣಿಕೆಯಲ್ಲೂ ಭಾರೀ ಕುತೂಹಲ

ಕಾಂಗ್ರೆಸ್ ಮತ್ತು ಪುತ್ತಿಲ ನಡುವೆ ಪ್ರತೀ ರೌಂಡಿನ ಎಣಿಕೆಯಲ್ಲೂ ಭಾರೀ ಕುತೂಹಲವಿತ್ತು ಮತ್ತು ಬಿಜೆಪಿ ಇಲ್ಲಿ ಬಹುತೇಕ ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಇರುವಂತಾಯಿತು. ನಮಗೆ ವಿರೋಧ ಏನಿದ್ದರೂ ಸ್ಥಳೀಯ ಮತ್ತು ರಾಜ್ಯ ಮಟ್ಟದ ನಾಯಕರಿಂದ ಹೊರತು ಮೋದಿ, ಅಮಿತ್ ಶಾ ಅವರ ಮೇಲಲ್ಲ ಎನ್ನುವುದು ಪುತ್ತಿಲ ತಂಡದ ವಾದವಾಗಿತ್ತು. ಹಾಗಾಗಿ, ಪುತ್ತಿಲ ತಮ್ಮ ಪ್ರಚಾರಕ್ಕೆ ಮೋದಿ ಹೆಸರನ್ನು ಬಳಸಿಕೊಂಡಿದ್ದರು.

ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತವರು ಕ್ಷೇತ್ರ ಪುತ್ತೂರು. ಕ್ಷೇತ್ರದಲ್ಲಿ ಈ ಹಿಂದೆ ನಡೆದ 15 ವಿಧಾನಸಭಾ ಚುನಾವಣೆಗಳ ಪೈಕಿ ಎಂಟು ಬಾರಿ ಕಾಂಗ್ರೆಸ್ ಗೆದ್ದರೆ ಆರು ಬಾರಿ ಬಿಜೆಪಿ ಗೆದ್ದಿತ್ತು. ಪ್ರತಿ ಬಾರಿ ನಡೆಯುತ್ತಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಹೋರಾಟದ ಕಣಕ್ಕೆ ಈ ಬಾರಿ ಹಿಂದುತ್ವ ತಂಡ ಎಂಟ್ರಿ ಕೊಟ್ಟಿದ್ದು, ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ಇದಕ್ಕೆ ಕಾರಣ, ಕಟೀಲ್ ಇಲ್ಲಿಯ ಸಂಸದರು.

ಕಲ್ಲಡ್ಕ ಪ್ರಭಾಕರ ಭಟ್ ಕೂಡಾ ಕೇವಲವಾಗಿ ಮಾತನಾಡಿದ್ದರು

ಪುತ್ತಿಲ ಅವರ ಸ್ಪರ್ಧೆಯ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಕೂಡಾ ಕೇವಲವಾಗಿ ಮಾತನಾಡಿದ್ದರು. ಅರುಣ್ ಕುಮಾರ್ ಪುತ್ತಿಲ ಅವರು ಚುನಾವಣೆಯಲ್ಲಿ ಸೋತಿರಬಹುದು, ಆದರೆ ಇಲ್ಲಿನ ಫಲಿತಾಂಶ ಬಿಜೆಪಿಗೆ ಒಂದು ಪಾಠವಾಗುವುದಂತೂ ಹೌದು. ಲೋಕಸಭಾ ಚುನಾವಣೆಗೆ ಒಂದು ವರ್ಷ ಬಾಕಿಯಿದೆ. ಕರಾವಳಿ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಹಿಂದೂ ಸಂಘಟನೆಗಳ ಪಾತ್ರ ಎಷ್ಟು ಮುಖ್ಯ ಎನ್ನುವುದನ್ನು ಪುತ್ತೂರು ಫಲಿತಾಂಶ ತೋರಿಸಿಕೊಟ್ಟಿರುವುದಂತೂ ಹೌದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+