ಜನವರಿ ಅಂತ್ಯದಲ್ಲಿ ಕರಾವಳಿಯಲ್ಲಿ ಆರಂಭವಾಗಲಿದೆ ಕಂಬಳ
ಮಂಗಳೂರು, ಜನವರಿ 04: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಜನವರಿ ಅಂತ್ಯದಲ್ಲಿ ಕಂಬಳ ಆಯೋಜನೆಗೊಳ್ಳಲಿದೆ. ಕೋವಿಡ್ ಕಾರಣದಿಂದಾಗಿ ಕಂಬಳ ನಡೆಯಲಿದೆಯೇ? ಎಂಬ ಬಗ್ಗೆ ಭಾರೀ ಚರ್ಚೆ ನಡೆಯುತ್ತಿತ್ತು.
ಕಂಬಳದ ಆಯೋಜಕರು ಮತ್ತು ಕೋಣಗಳ ಮಾಲೀಕರ ಸಭೆ ಶನಿವಾರ ನಡೆದಿದೆ. ಈ ಸಭೆಯಲ್ಲಿ ಜನವರಿ 31ರಿಂದ ಮಾರ್ಚ್ 21ರ ತನಕ 7 ಕಂಬಳವನ್ನು ಆಯೋಜನೆ ಮಾಡಲು ತೀರ್ಮಾನ ಮಾಡಲಾಗಿದೆ. ಹಲವಾರು ಕಂಬಳದ ಮಾಲೀಕರು ಈ ಬಾರಿಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿಲ್ಲ.
ಆರ್ಥಿಕ ಕಾರಣ ಮತ್ತು ಸಿದ್ಧಗೊಳ್ಳಲು ಅವಧಿ ಕಡಿಮೆ ಇರುವ ಕಾರಣ ಹಲವಾರು ಜನರು ಈ ಬಾರಿಯ ಕಂಬಳದಿಂದ ದೂರ ಉಳಿಯಲಿದ್ದಾರೆ. ಅಕ್ಟೋಬರ್ನಲ್ಲಿ ಸಿದ್ಧತೆ ಆರಂಭಗೊಂಡು ನವೆಂಬರ್ನಲ್ಲಿ ಕಂಬಳ ನಡೆಯಬೇಕಿತ್ತು. ಆದರೆ, ಈ ಬಾರಿ ಕಂಬಳ ಆಯೋಜನೆ ಕುರಿತು ಹಲವಾರು ಸುತ್ತಿನ ಸಭೆಗಳು ನಡೆದಿವೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಅವರಿಗೆ ಮಾಲೀಕರು ಮನವಿಯನ್ನು ಸಲ್ಲಿಸಲಿದ್ದು, ಕಂಬಳ ಆಯೋಜನೆ ಮಾಡಲು ಅನುಮತಿ ನೀಡುವಂತೆ ಕೇಳಲಿದ್ದಾರೆ. ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತದೆ ಎಂದು ವಿವರಣೆ ನೀಡಲಿದ್ದಾರೆ.
ಕಳೆದ ವರ್ಷದ ಕಂಬಳ ನಡೆದಾಗ ಶ್ರೀನಿವಾಸ ಗೌಡ ಮತ್ತು ನಿಶಾಂತ್ ಶೆಟ್ಟಿ ತಮ್ಮ ಓಟದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದರು. ಹಲವಾರು ಯುವಕರು ಈ ಬಾರಿಯ ಕಂಬಳದಲ್ಲಿ ಪಾಲ್ಗೊಳ್ಳಲು ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ.
ಈ ಬಾರಿ ಕಂಬಳ ಆಯೋಜನೆ ಸಮಯದಲ್ಲಿ ಬದಲಾವಣೆಯಾಗಲಿದೆ. ಪ್ರತಿ ಬಾರಿಯಂತೆ ಸಂಜೆ ಬದಲು ಹಗಲು ಹೊತ್ತಿನಲ್ಲಿಯೇ ಆಯೋಜನೆ ಮಾಡಲಾಗುತ್ತದೆ. ಬೆಳಗ್ಗೆ 7.30ರಿಂದ ಸಂಜೆ 6 ಗಂಟೆಯ ಅವಧಿಯಲ್ಲಿ ಕಂಬಳ ಆಯೋಜನೆ ಮಾಡಲಾಗುತ್ತದೆ.
ಕಂಬಳ ಆಯೋಜನೆ ವೇಳೆ ಹೆಚ್ಚು ಜನರು ಸೇರದಂತೆ ತಡೆಯಲು ಆಯೋಜಕರು ಚಿಂತನೆ ನಡೆಸಿದ್ದಾರೆ. ಆದ್ದರಿಂದ, ಯಾವುದೇ ಸೆಲೆಬ್ರಿಟಿಗಳನ್ನು ಕರೆಸುವುದಿಲ್ಲ. ಕಂಬಳವನ್ನು ಆನ್ಲೈನ್ ಮೂಲಕವೂ ಪ್ರಸಾರ ಮಾಡಲು ತೀರ್ಮಾನಿಸಿದ್ದು, ಜನ ದಟ್ಟಣೆ ಕಡಿಮೆ ಮಾಡಲು ಮುಂದಾಗಿದ್ದಾರೆ.












Click it and Unblock the Notifications