ಕಾರಂತರ ವಿರುದ್ಧ ಮಾತನಾಡಿ ಮತ್ತೆ ವಿವಾದಕ್ಕೆ ಗ್ರಾಸವಾದ ಪತ್ರಕರ್ತ ದಿನೇಶ್ ಅಮೀನ್ ಮಟ್ಟು
ಮಂಗಳೂರು, ಆಗಸ್ಟ್ 12: ಕಡಲ ತೀರದ ಭಾರ್ಗವ ಡಾ.ಶಿವರಾಮ್ ಕಾರಂತರ ವಿರುದ್ಧ ಮಾತನಾಡಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ. ನಾಡಿನ ಶ್ರೇಷ್ಠ ಕವಿ ಶಿವರಾಮ ಕಾರಂತರು ಸ್ವಲ್ಪ ಬೇಗ ನಿಧನರಾಗಿದ್ದರೆ ಒಳ್ಳೆಯದಿತ್ತು ಎಂದು ಹೇಳುವ ಮೂಲಕ ಅಮೀನ್ ಮಟ್ಟು ಮತ್ತೆ ವಿವಾದಕ್ಕೆ ಗ್ರಾಸವಾಗಿದ್ದಾರೆ.
ಮಂಗಳೂರಿನಲ್ಲಿ 'ಕೋಶ ಓದು ದೇಶ ನೋಡು ಬಳಗ'ದ ಅಭಿಯಾನದ ಭಾಗವಾಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾರಂತರು ಕೊನೆಯ ದಿನಗಳಲ್ಲಿ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹರಿದ ವಿಚಾರದಲ್ಲಿ ಆರ್ಎಸ್ಎಸ್ ಪರವಾಗಿ ಮಾತನಾಡಿದ್ದರು.
ಆ ಸಂದರ್ಭ ಕಾರಂತರು ಸ್ವಲ್ಪ ಬೇಗ ಸತ್ತರೆ ಒಳ್ಳೆಯದಿತ್ತು ಎಂದು ಅನಿಸಿತ್ತು ಎಂದು ದಿನೇಶ್ ಅಮೀನ್ ಮಟ್ಟು ಹೇಳಿದರು. ಕಾರಂತರ 'ಚೋಮನ ದುಡಿ' ಕಾದಂಬರಿ ಬಗ್ಗೆ ಟೀಕೆಗಳು ಬಂದಿದ್ದವು. ಅದನ್ನು ಅವರು ಸಂಶೋಧನ ಗ್ರಂಥ ರೀತಿ ಬರೆದಿದ್ದಾರೆ.

ಚೋಮನ ಅನುಭವ ಕಾರಂತರ ಸಾಹಿತ್ಯದಲ್ಲಿ ಬರಲು ಹೇಗೆ ಸಾಧ್ಯ ? ಚೋಮನ ಕಷ್ಟ ಕಾರಂತರಿಗೇನು ಗೊತ್ತು? ಮುಂತಾದ ಟೀಕೆಗಳು ಬಂದಿದ್ದವು ಎಂದು ಪ್ರಶ್ನಿಸಿದರು.
ದಿನೇಶ್ ಅಮೀನ್ ಮಟ್ಟು ಅವರ ಈ ಹೇಳಿಕೆಗಳು ಚರ್ಚೆಗೆ ಗ್ರಾಸ ವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪರ-ವಿರೋಧ ಚರ್ಚೆಗಳು ಆರಂಭವಾಗಿವೆ.












Click it and Unblock the Notifications