ಮಂಗಳೂರಲ್ಲಿ ಯುಟಿ ಖಾದರ್ ವಿರುದ್ಧ ತೊಡೆ ತಟ್ಟಿದ ಅಶ್ರಫ್
ಮಂಗಳೂರು, ಏಪ್ರಿಲ್ 24: ಅತ್ಯಂತ ಕುತೂಹಲ ಕೆರಳಿಸಿರುವ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕೊನೆಗೂ ಮಾಜಿ ಮೇಯರ್ ಆಶ್ರಫ್ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ನೂರಾರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದ ಕೆ. ಅಶ್ರಫ್ ಮಂಗಳೂರಿನ ತಾಲೂಕು ಪಂಚಾಯತ್ ಕಚೇರಿಯಲ್ಲಿ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಇತ್ತೀಚೆಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದ ಮಾಜಿ ಮೇಯರ್ ಕೆ.ಅಶ್ರಫ್, ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯು.ಟಿ ಖಾದರ್ ವಿರುದ್ಧ ತೊಡೆ ತಟ್ಟಿದ್ದಾರೆ. ಮಂಗಳೂರು ಕ್ಷೇತ್ರದಲ್ಲಿ ಯು.ಟಿ ಖಾದರ್ ಅವರನ್ನು ಮಣಿಸಲೇಬೇಕು ಎಂದು ಆಶ್ರಫ್ ಹಾಗು ಜೆಡಿಎಸ್ ಮುಖಂಡ ಬಿ.ಎಂ .ಫಾರುಕ್ ಪಣತೊಟ್ಟಿದ್ದಾರೆ.

ಮುಸ್ಲಿಂ ಬಾಹುಳ್ಯವಿರುವ ಮಂಗಳೂರು ಕ್ಷೇತ್ರದಲ್ಲಿ ಖಾದರ್ ಅವರನ್ನು ಮಣಿಸಲು ಈ ಇಬ್ಬರು ರಣತಂತ್ರ ರೂಪಿಸಿರುವುದು ಖಾದರ್ ಅವರಿಗೆ ಮುಳುವಾಲಿದೆ ಎಂದು ವಿಶ್ಲೇಷಿಸಲಾಗಿದೆ. ಈ ಕಾರಣ ದಿಂದಾಗಿ ಖಾದರ್ ಅವರಿಗೆ ಕ್ಷೇತ್ರ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಈ ಹಿಂದೆ ಅಶ್ರಫ್ ಅವರಿಗೆ ಮಂಗಳೂರು ಕ್ಷೇತ್ರದಿಂದ ಕಣಕ್ಕಿಳಿಸಲು ಜೆಡಿಎಸ್ ಮುಖಂಡರು ತೀರ್ಮಾನಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಇದನ್ನು ತಡೆ ಹಿಡಿಯಲಾಗಿತ್ತು. ಅಶ್ರಫ್ ಅವರಿಗೆ ಬಿ ಫಾರಂ ನೀಡದಂತೆ ಖಾದರ್ ಒತ್ತಡ ಹೇರಿದ್ದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಬಿ.ಎಂ. ಫಾರೂಕ್ ಸಹೋದರ ಮೊಯ್ದೀನ್ ಬಾವಾ ಮೂಲಕ ಅವರ ಆಶ್ರಫ್ ಗೆ ಟಿಕೆಟ್ ನೀಡದಂತೆ ಒತ್ತಡ ಹೇರಿದ್ದರು ಎಂದು ಹೇಳಲಾಗಿದೆ. ಆದರೆ ಪಟ್ಟು ಬಿಡದ ಆಶ್ರಫ್ ಜೆಡಿಎಸ್ ಟಿಕೆಟ್ ನೀಡದಿದ್ದರೆ ಪಕ್ಷೇತರನಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದರು.
ಈ ನಡುವೆ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚಿಂತನೆ ನಡೆಸಿ ಜೆಡಿಎಸ್ ಅಶ್ರಫ್ ಅವರಿಗೆ ಕೊನೆಗೂ ಟಿಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಖಾದರ್ ಕ್ಷೇತ್ರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಂತ್ರಗಾರಿಕೆ ಅರಂಭಿಸಿದ್ದಾರೆ.
ಅಶ್ರಫ್ ಸ್ಪರ್ಧೆಯಿಂದ ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರ್ ಗೆ ವರದಾನವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಎಲ್ಲಾ ಲೆಕ್ಕಾಚಾರಕ್ಕೆ ಮತದಾರ ಪ್ರಭು ಹೇಗೆ ಪ್ರತಿಕ್ರಿಯಿಸಲಿದ್ದಾನೆ ಎಂಬುದೇ ಸದ್ಯದ ಕುತೂಹಲದ ಸಂಗತಿಯಾಗಿದೆ.












Click it and Unblock the Notifications