ವೈಭವದ ಮಂಗಳೂರು ದಸಾರಾಗೆ ಮಾಜಿ ಸಚಿವ ಜನಾರ್ದನ ಪೂಜಾರಿ ಚಾಲನೆ
ಮಂಗಳೂರು, ಸೆಪ್ಟೆಂಬರ್ 26: ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾಕ್ಕೆ ಸೋಮವಾರ ಅದ್ದೂರಿ ಚಾಲನೆ ದೊರೆಯಿತು. ನವರಾತ್ರಿಯ ಒಂಬತ್ತು ದಿನಗಳ ಕಾಲ ಈ ಕ್ಷೇತ್ರದಲ್ಲಿ ಆರಾಧನೆಗೊಳ್ಳಲಿರುವ ಶಾರದೆ, ನವದುರ್ಗೆಯರ ಮೂರ್ತಿ ಪ್ರತಿಷ್ಠಾನೆ ನಡೆಯಿತು. ಈ ಬಾರಿಯ ದಸರಾಕ್ಕೆ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಚಾಲನೆ ನೀಡಿದರು.
ಮಂಗಳೂರು ದಸರಾ ಮಹೋತ್ಸವವನ್ನು ಆಯೋಜಿಸುತ್ತಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸೋಮವಾರದಿಂದ ಒಂಬತ್ತು ದಿನಗಳ ಕಾಲ ನಡೆಯಲಿರುವ ಮಂಗಳೂರು ದಸರಾಕ್ಕೆ ಸೋಮವಾರ ವಿದ್ಯುಕ್ತ ಚಾಲನೆ ದೊರೆಯಿತು. ಕ್ಷೇತ್ರದಲ್ಲಿ ವಿಘ್ನವಿನಾಶಕ ಗಣೇಶ, ವಿದ್ಯಾದೇವಿ ಶಾರದಾ ಮಾತೆ, ಆದಿಶಕ್ತಿ ಹಾಗೂ ನವದುರ್ಗೆಯರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಎಲ್ಲಾ ದೇವರುಗಳನ್ನು ಏಕಕಾಲಕ್ಕೆ ಪ್ರತಿಷ್ಠಾಪಿಸಲಾಗಿದ್ದು ಒಂಬತ್ತು ದಿನಗಳ ಕಾಲ ಪೂಜೆಗೊಳ್ಳಲಿದೆ. ಕೇಂದ್ರದ ಮಾಜಿ ಸಚಿವ,ದಸರಾದ ರೂವಾರಿ ಬಿ.ಜನಾರ್ದನ ಪೂಜಾರಿ ಈ ಬಾರಿಯ ಮಂಗಳೂರು ದಸರಾಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ ಹಾಗೂ ಮಹಾಲಿಂಗ ನಾಯ್ಕ್ ವಿಶೇಷ ಆಹ್ವಾನಿತರಾಗಿ ಈ ಸಂದರ್ಭ ಜೊತೆಗಿದ್ದರು.
ಸುಂದರ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೊಂಡ ನವದುರ್ಗೆಯರು ದೇಶ ವಿದೇಶದ ಭಕ್ತರನ್ನು ಸೆಳೆಯುತ್ತದೆ. ಗಣಪತಿ,ಶಾರದಾ ಮಾತೆ, ಆದಿಶಕ್ತಿಯೊಂದಿಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸಿದ್ದಿದಾತ್ರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತೆ ಮಹಾಗೌರಿಯರನ್ನು ಇಲ್ಲಿನ ಸುಂದರ ಕಲಾಕೃತಿಗಳ ಮಂಟಪದಲ್ಲಿ ಪ್ರತಿಷ್ಠಾಪಿಸ ಲಾಗಿದೆ.ಭೂಲೋಕದ ಸ್ವರ್ಗದಂತಿರುವ ಸಭಾಂಗಣದಲ್ಲಿ ಅತ್ಯಾಕರ್ಷ ಸಂಯೋಜನೆಯಲ್ಲಿ ಈ 12 ದೇವರುಗಳನ್ನು ನೋಡುವುದು ಭಕ್ತರ ಕಣ್ಣಿಗೊಂದು ಹಬ್ಬವೇ ಸರಿ. ಮೈಸೂರು ದಸರಾಕ್ಕೆ ಇದು ಸರಿಸಾಟಿ ಎಂದು ಭಕ್ತರು ಬಣ್ಣಿಸುತ್ತಾರೆ. ಈ ರೀತಿ ನವರಾತ್ರಿಯ ಸಂದರ್ಭ ದೇವರುಗಳ ಪ್ರತಿಷ್ಠಾಪನೆ ದೇಶದ ಬೇರೆಲ್ಲೂ ಆಗೋದಿಲ್ಲ ಅನ್ನುವುದು ಇಲ್ಲಿನ ವಿಶೇಷತೆ.

ಇಂದಿನಿಂದ ಮೊದಲ್ಗೊಂಡು ಮಂಗಳೂರು ದಸರಾ ಸಮಾರಂಭವು ಅಕ್ಟೋಬರ್ 6ರಂದು ಸಂಪನ್ನವಾಗಲಿದೆ. ಅಕ್ಟೋಬರ್ 5ರ ಸಂಜೆ 4ಗಂಟೆಗೆ ವಿಸರ್ಜನಾ ಪೂಜೆ ನೆರವೇರಿ ಬಳಿಕ ರಾತ್ರಿ ಪೂರ್ತಿ ಮಂಗಳೂರಿನ ರಾಜಬೀದಿಗಳಲ್ಲಿ ವೈಭವದ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಬಳಿಕ ಶ್ರೀಶಾರದಾ ಮಾತೆ ಸಹಿತ ನವದುರ್ಗೆಯರು, ಶ್ರೀಮಹಾಗಣಪತಿಯ ಮೂರ್ತಿಯನ್ನು ಶ್ರೀಕ್ಷೇತ್ರ ಕುದ್ರೋಳಿಯ ಕೆರೆಯಲ್ಲಿ ವಿಸರ್ಜನೆ ಮಾಡುವುದರೊಂದಿಗೆ ಸಂಪನ್ನಗೊಳ್ಳಲಿದೆ.
ನವರಾತ್ರಿಯ ದಿನದಲ್ಲಿ ಪೂಜೆಗೊಳ್ಳುವ ಈ ಎಲ್ಲಾ ಮೂರ್ತಿಗಳನ್ನು ಹತ್ತನೇ ದಿನ ಅಂದರೆ ಅಕ್ಟೋಬರ್ 5 ರಂದು ನಗರದ 7 ಕಿಲೋಮೀಟರ್ ರಾಜರಸ್ತೆಯಲ್ಲಿ ದಸರಾ ಮೆರವಣಿಗೆ ನಡೆದು ಬಳಿಕ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜಿಸಲಾಗುವುದು.












Click it and Unblock the Notifications