ಪೂಜಾರಿ ಗೆಲ್ತಾರಾ? ಸೀನಿಯರ್ ಮೊಯ್ಲಿ ಗೇಮ್ ಪ್ಲಾನ್ ಏನು?
ಮಂಗಳೂರು, ಮಾರ್ಚ್ 8-ಮೊದಲ ಬಾರಿಗೆ, ಆಂತರಿಕ ಚುನಾವಣೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂಬ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಆಶಯಕ್ಕೆ ವಿರುದ್ಧವಾಗಿ ಕೆಲ ಹಿರಿಯ ಕಾಂಗ್ರೆಸ್ಸಿಗರು ತಮ್ಮ ನಿಜವಾದ 'ರಾಜಕೀಯ ವರಸೆ' ಆರಂಭಿಸಿದ್ದಾರೆ.
ಅಮೆರಿಕದಂತೆ ಪಕ್ಷದ ಕಾರ್ಯಕರ್ತರಿಂದಲೇ ದಕ್ಷಿಣ ಕನ್ನಡ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿಧಾನ ನಿಷ್ಫಲಗೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ. ಬೆಂಗಳೂರು ಉತ್ತರದಲ್ಲಿ ಈಗಾಗಲೇ ಅಭ್ಯರ್ಥಿಗಳು ಹಗುರವಾಗಿರುವುದು ಸ್ಪಷ್ಟಗೊಂಡಿದೆ. ಇನ್ನು, ಅತ್ತ ದಕ್ಷಿಣ ಕನ್ನಡದತ್ತ ಹೆಜ್ಜೆ ಹಾಕಿದಾಗ ...
ದ.ಕ. ಅಭ್ಯರ್ಥಿಯ ಆಯ್ಕೆಗಾಗಿ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಮತ್ತು ಉದ್ಯಮಿ ಕಣಚೂರು ಮೋನು ಮಧ್ಯೆ ನಾಳೆ ಸ್ಪರ್ಧೆ ಏರ್ಪಟ್ಟಿದೆ. ಈ ಮಧ್ಯೆ, ತಮ್ಮ ಪುತ್ರ ಹರ್ಷ ಮೊಯ್ಲಿ ಹಿಟ್ ವಿಕೆಟ್ ಆಗಿ ಕಣದಿಂದ ಹೊರಬಿದ್ದಿರುವುದು ಹಿರಿಯ ಮೊಯ್ಲಿಗೆ ಅರಗಿಸಿಕೊಳ್ಳಲಾಗಿಲ್ಲ. ಶತ್ರು ಕಹಾ ಹೈ ಅಂದರೆ ಬಗಲ್ ಮೆ ಎಂಬಂತೆ ಜನಾರ್ದನ ಪೂಜಾರಿ ಎಂಬ ಹಳೆಯ ಮಿತ್ರ ತಮ್ಮ ಪುತ್ರನ ರಾಜಕೀಯ ಆರಂಗ್ರೇಟಂಗೆ ಕಂಟಕವಾಗಿರುವುದು ವೀರಪ್ಪ ಮೊಯ್ಲಿಗೆ ಆಘಾತ ತಂದಿದೆ.
(ಬೆಂಗಳೂರು ಉತ್ತರ: 'ಹಗುರವಾದ' ಕಾಂಗ್ರೆಸ್ ಅಭ್ಯರ್ಥಿಗಳು)
ಆದರೆ ತಮ್ಮಾಸೆಯನ್ನು ಇನ್ನೂ ಜೀವಂತವಾಗಿಟ್ಟಿರುವ ಮೊಯ್ಲಿ, ಪರೋಕ್ಷವಾಗಿ ಹೇಗಾದರೂ ಮಾಡಿ ಜನಾರ್ದನ ಪೂಜಾರಿ ವರ್ಚಸ್ಸನ್ನು ಕುಗ್ಗಿಸಲು ಹರಸಾಹಸ ಪಡುತ್ತಿದ್ದಾರೆ. ಡಮ್ಮಿ ಅಭ್ಯರ್ಥಿ ಕಣಚೂರು ಮೋನುಗೆ ವೀಳ್ಯ ಕೊಟ್ಟು ಮತ ವಿಭಜನೆ ಮೂಲಕ ಪೂಜಾರಿಯನ್ನು ಮಣಿಸುವುದು ಸೀನಿಯರ್ ಮೊಯ್ಲಿಯ ತಕ್ಷಣದ ಕಾರ್ಯತಂತ್ರವಾಗಿದೆ.
ಅದಾದ ನಂತರ ಕೇಂದ್ರದಲ್ಲಿ ತಮ್ಮ ಪ್ರಭಾವ ಬಳಸಿ, ತಿರಸ್ಕೃತ ಅಭ್ಯರ್ಥಿ- ತಮ್ಮ ಪುತ್ರನಿಗೇ ಕೊನೆಯ ಕ್ಷಣದಲ್ಲಿ ಟಿಕೆಟ್ ಪ್ರಾಪ್ತಿಯಾಗುವಂತೆ ಮಾಡುವುದು ಸೀನಿಯರ್ ಮೊಯ್ಲಿಯ ಗುರಿಯಾಗಿದೆ ಎಂಬುದು ಜಿಲ್ಲಾ ಕಾಂಗ್ರೆಸ್ ನಾಯಕರ ಅನಿಸಿಕೆಯಾಗಿದೆ.
ಅದೂ ಕೈಕೊಟ್ಟರೆ, ಅಂತಿಮವಾಗಿ ಕಳೆದ ಬಾರಿಯಂತೆ ಜನಾರ್ದನ ಪೂಜಾರಿ ಈ ಬಾರಿಯೂ ಚುನಾವಣೆಯಲ್ಲಿ ಸೋಲುವಂತೆ 'ನೋಡಿಕೊಳ್ಳುವುದು' ಮೊಯ್ಲಿಯ ಗೇಮ್ ಪ್ಲಾನ್ ಆಗಿದೆ ಎಂದು ಜಿಲ್ಲಾ ಕಾಂಗ್ರೆಸ್ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ. (ಕಾಂಗ್ರೆಸ್ ಚುನಾವಣಾ ರಾಜಕೀಯಕ್ಕೆ ಮೊದಲ ಬಲಿ! )
ಅಂದಹಾಗೆ, ರೊಸಾರಿಯೋದಲ್ಲಿ ನಾಳೆ ಭಾನುವಾರ (ಮಾರ್ಚ್ 9) ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಅಮೆರಿಕ ಮಾದರಿಯಲ್ಲಿ ಅಭ್ಯರ್ಥಿ ಆಯ್ಕೆಗಾಗಿ ಆಂತರಿಕ ಚುನಾವಣೆ ನಡೆಯಲಿದೆ. ಫಲಿತಾಂಶ ನಾಳೆ ಸಾಯಂಕಾಲ ಹೊರಬೀಳಲಿದೆ. ತನ್ಮೂಲಕ ಕರ್ನಾಟಕದಲ್ಲಿ ಮೊದಲ ಕಾಂಗ್ರೆಸ್ ಅಭ್ಯರ್ಥಿಯ ಹೆಸರೂ ಬಹಿರಂಗವಾಗಲಿದೆ.