"ಮೋದಿಗೆ ಅಡ್ವಾಣಿ ಮೇಲೆ ಇಲ್ಲದ ಮಮಕಾರ ದೇವೇಗೌಡರ ಮೇಲೆ ಏಕೆ?"
ಮಂಗಳೂರು, ಮೇ 02: ಪ್ರಧಾನಿ ನರೇಂದ್ರ ಮೋದಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರನ್ನು ಹಾಡಿ ಹೊಗಳಿರುವುದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಮೋದಿಯವರಿಗೆ ತಮ್ಮ ರಾಜಕೀಯ ಗುರು ಎಲ್.ಕೆ. ಅಡ್ವಾಣಿಯವರ ಮೇಲೆ ಇಲ್ಲದ ಮಮಕಾರ, ದೇವೇಗೌಡರ ಮೇಲೆ ಚುನಾವಣೆ ಸಂದರ್ಭದಲ್ಲಿ ಹೇಗೆ ಉಕ್ಕಿಬಂತು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಜೈವೀರ್ ಶೇರ್ಗಿಲ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಜೆಡಿಎಸ್, ಬಿಜೆಪಿಯ 'ಬಿ' ಟೀಂ ಎಂದು ಪ್ರಧಾನಿಯವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಮತ್ತು ಜೆಡಿಎಸ್ ಮತದಾರರನ್ನು ದಾರಿ ತಪ್ಪಿಸುತ್ತಿದೆ. ಒಂದು ಕಡೆಯಿಂದ ದೇವೇಗೌಡರು ಬಿಜೆಪಿಯೊಂದಿಗೆ ಕೈಜೋಡಿಸಿದರೆ ನನ್ನ ಮಗನನ್ನು ಮನೆಯಿಂದ ಹೊರಹಾಕುತ್ತೇನೆ ಎಂದು ಹೇಳುತ್ತಾರೆ. ಮತ್ತೊಂದೆಡೆ ಅವರ ಮಗ ಎಚ್.ಡಿ ಕುಮಾರಸ್ವಾಮಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೊತೆ ಸಭೆ ನಡೆಸುತ್ತಾರೆ. ಮತ್ತೊಂದೆಡೆಯಿಂದ ಮೋದಿಯವರು ನನ್ನ ಹೃದಯದ ಬಡಿತ ದೇವೇಗೌಡರು ಎಂದು ಹೇಳುತ್ತಾರೆ ಎಂದು ಕಿಡಿಕಾರಿದರು .

ಬಿಜೆಪಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ತಮ್ಮ ಪಕ್ಷದ ಹಿರಿಯರಾದ ಅಡ್ವಾಣಿಯವರಿಗೆ ಹೇಗೆ ಗೌರವ ನೀಡಬೇಕು ಎಂದು ತಿಳಿದಿಲ್ಲ. ಅಡ್ವಾಣಿಯವರ ಸ್ಥಿತಿಯನ್ನು ಗಮನಿಸಿದರೆ ಅವರನ್ಮು ಮೋದಿಯವರು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಇದನ್ನು ಕರ್ನಾಟಕದ ಜನತೆಗೆ ಗಮನಿಸಬೇಕು ಎಂದು ಹೇಳಿದರು.












Click it and Unblock the Notifications