ದಕ್ಷಿಣ ಕನ್ನಡ ಕಾಂಗ್ರೆಸ್ ಕಚೇರಿಯಲ್ಲಿ ಎಸ್.ಎಂ. ಕೃಷ್ಣ ಫೋಟೋನೇ ಟಾರ್ಗೆಟ್!
ಮಂಗಳೂರು, ಜುಲೈ 13: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರವರ ಭಾವಚಿತ್ರವನ್ನು ಹರಿದು ಹಾಕಿ ವಿವಾದ ಸೃಷ್ಟಿಸಿದ್ದ ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಈಗ ಮತ್ತೆ ಕಾಂಗ್ರೆಸ್ ಕಾರ್ಯಕರ್ತರು ಪುಂಡಾಟ ಮೆರೆದಿದ್ದಾರೆ.
ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿಗಳ ಫೋಟೋ ಗ್ಯಾಲರಿಯಲ್ಲಿ ಮಾಜಿ ಸಿಎಂ ಎಸ್. ಎಂ. ಕೃಷ್ಣರವರ ಫೋಟೋವನ್ನು ಹಾಕಲಾಗಿತ್ತು. ಆದರೆ, ಅವರು ಬಿಜೆಪಿ ಸೇರಿದ ಬಳಿಕ ಗ್ಯಾಲರಿಯಲ್ಲಿದ್ದ ಫೋಟೋವನ್ನು ಕಾಂಗ್ರೆಸ್ ಕಾರ್ಯಕರ್ತರು ಹರಿದು ಹಾಕಿದ್ದರು. ಇದು ದೊಡ್ಡ ವಿವಾದವನ್ನೇ ಸೃಷ್ಟಿ ಮಾಡಿತ್ತು.
ಇದಾದ ಬಳಿಕ ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಂಗಳೂರಿನ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತೆ ಎಸ್. ಎಂ. ಕೃಷ್ಣರವರ ಫೋಟೋವನ್ನು ಗ್ಯಾಲರಿಗೆ ಹಾಕಿದ್ದರು. ಡಿ.ಕೆ. ಶಿವಕುಮಾರ್ ಎದುರು ಕಚೇರಿಯ ಶಿಸ್ತಿನ ಬಗ್ಗೆ ಹೇಳಿಕೊಂಡಿದ್ದಾರೆ.

ಆದರೆ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಕಚೇರಿಯಿಂದ ಕೆಳಗಿಳಿಯುತ್ತಿದ್ದಂತೆ ಎಸ್. ಎಂ. ಕೃಷ್ಣರವರ ಫೋಟೋವನ್ನು ಮತ್ತೆ ಹರಿದು ಹಾಕಲಾಗಿದೆ. ಪಕ್ಷ ಬದಲು ಮಾಡಿದರೂ ಮಾಜಿ ಮುಖ್ಯಮಂತ್ರಿಗೆ ಮತ್ತೆ ಅವಮಾನ ಮಾಡಲಾಗಿದೆ. ಕಾರ್ಯಕರ್ತರ ಅಶಿಸ್ತಿನ ವರ್ತನೆ ಬಗ್ಗೆ ಕಾಂಗ್ರೆಸ್ ಮುಖಂಡರೇ ಒಳಗೊಳಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications