'ಇಂದು ಮುಕ್ತ ಮನಸ್ಸಿನಿಂದ ಸಂಶೋಧನೆ ಮಾಡುವುದು ಅಪರಾಧ'
ಧರ್ಮಸ್ಥಳ, ಡಿಸೆಂಬರ್ 12 : 'ಇಂದು ಯಾವುದೇ ಸಂಶೋಧನೆಯನ್ನು, ಹೊಸ ವಿಚಾರವನ್ನು ಮುಕ್ತ ಮನಸ್ಸಿನಿಂದ ಸಮಾಜದೊಟ್ಟಿಗೆ ಹಂಚಿಕೊಳ್ಳಲು ಭಯವಾಗುತ್ತಿದೆ. ನಿಜಾಂಶವನ್ನು ಅರಿತುಕೊಳ್ಳುವ ವ್ಯವಧಾನ ಕಡಿಮೆಯಾಗುತ್ತಿದೆ. ಏನನ್ನಾದರೂ ಹೇಳಿದರೆ ಹಲ್ಲೆಯಂತಹ ಪ್ರಕ್ರಿಯೆಗಳು ನಡೆಯುತ್ತಿರುವುದು ದುರದೃಷ್ಟಕರ' ಎಂದು ಖ್ಯಾತ ಸಾಹಿತಿ, ಸಂಶೋಧಕ ಷ. ಶೆಟ್ಟರ್ ವಿಷಾದಿಸಿದ್ದಾರೆ.
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ಅಮೃತವರ್ಷಿಣಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಾಹಿತ್ಯ ಸಮ್ಮೇಳನದ 83ನೇ ಅಧಿವೇಶನವನ್ನು ಉದ್ಘಾಟಿಸಿ ಷಟ್ಟರ ಅವರು ಮಾತನಾಡಿದರು. 'ಪ್ರಜಾಪ್ರಭುತ್ವ ರಾಷ್ಟ್ರದ ಗುರಿ ಸಹಿಷ್ಣತೆಯೇ ಹೊರತು ಅದನ್ನು ಅರಿಯದೇ ಹಾಳು ಮಾಡುವುದಲ್ಲ' ಎಂದು ಹೇಳಿದರು. [ಗ್ಯಾಲರಿ: ಕಾರ್ತೀಕ ದೀಪದ ಬೆಳಕಲ್ಲಿ ಮಿಂದೆದ್ದ ಧರ್ಮಸ್ಥಳ]
'ನಾನು ಈಗಲೂ ಬರೆಯುತ್ತಿದ್ದೇನೆ, ಸಂಶೋಧನೆಯನ್ನು ಕೈಗೊಳ್ಳುತ್ತಿದ್ದೇನೆ. ನನ್ನ ವರ್ಗದವರೇ ಅರ್ಥವರಿಯದೇ ಒಮ್ಮೊಮ್ಮೆ ನನ್ನನ್ನು ದ್ವೇಷಿಸಿದರೆ ನೋವಾಗುತ್ತದೆ. ನೋವು ಯಾಕೆ ಮಾಡುತ್ತೀರಿ? ಅಂತ ಕೇಳಿದರೆ ನಾನು ಬರೆಯುವುದನ್ನು ಬಿಡಬೇಕಾಗುತ್ತದೆ' ಎಂದು ಶೆಟ್ಟರ್ ಅವರು ಬೇಸರ ವ್ಯಕ್ತಪಡಿಸಿದರು. [ಸಾಮರಸ್ಯ, ಸಹಿಷ್ಣುತೆ ಭಾರತ ಸಂಸ್ಕೃತಿಯ ಹೆಗ್ಗುರುತು]
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಕುವೆಂಪು ಭಾಷಾ ಭಾರತಿ ವಿಶ್ರಾಂತ ಅಧ್ಯಕ್ಷ ಡಾ.ಪ್ರಧಾನ್ ಗುರುದತ್, ಹಾಸ್ಯ ಸಾಹಿತಿ ಎಂ.ಎಸ್. ನರಸಿಂಹಮೂರ್ತಿ, ಉದಯವಾಣಿ ಸಮೂಹ ಸಂಪಾದಕ ರವಿ ಹೆಗಡೆ, ಮುಂತಾದವರು ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಸಾಹಿತ್ಯ ಸಮ್ಮೇಳನ ಅಧಿವೇಶ ಉದ್ಘಾಟನೆ
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಹಿತ್ಯ ಸಮ್ಮೇಳನದ 83ನೇ ಅಧಿವೇಶನವನ್ನು ಖ್ಯಾತ ಸಂಶೋಧಕ ಡಾ. ಷ. ಶೆಟ್ಟರ್ ಉದ್ಘಾಟಿಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಡಾ. ಪ್ರಧಾನ್ ಗುರುದತ್, ಎಂ.ಎಸ್. ನರಸಿಂಹ ಮೂರ್ತಿ, ರವಿ ಹೆಗಡೆ ಮುಂತಾದವರು ಈ ಸಂರ್ಭದಲ್ಲಿ ಉಪಸ್ಥಿತರಿದ್ದರು.

'ಅಸಹಿಷ್ಣುತೆ ಎಲ್ಲಾ ಸಮಾಜದಲ್ಲಿಯೂ ಇದೆ'
'ನಮ್ಮತನವನ್ನು ಧರ್ಮ ಮತ್ತು ಸಾಹಿತ್ಯದ ಮೇಲೆ ಹೇರುವುದು ಸರಿಯಲ್ಲ. ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ ನಾವು ವಿಶಾಲ ಮನೋಭಾವವನ್ನು ಕಳೆದುಕೊಂಡು ಕುಬ್ಜರಾಗುತ್ತಿದ್ದೇವೆ. ಇಂದಿನ ವಿಚಿತ್ರವಾದ ಅಸಹಿಷ್ಣುತೆ ಎಲ್ಲಾ ಸಮಾಜದಲ್ಲಿಯೂ ಇದೆ. ಆದರೆ, ಅಲ್ಲಿ ಸಾಹಿತಿಗಳಿಲ್ಲ, ವಿಚಾರವಂತರಿದ್ದಾರೆ. ಧರ್ಮ ಗುರುಗಳಿಲ್ಲ, ರಾಜಕೀಯ ವ್ಯಕ್ತಿಗಳಿದ್ದಾರೆ' ಎಂದು ಡಾ. ಷ. ಶೆಟ್ಟರ್ ಹೇಳಿದರು.

'ಆತಂಕದಿಂದಲೇ ಬರೆಯುತ್ತಿದ್ದೇನೆ'
'ಪ್ರಬುದ್ಧ ಪ್ರಜಾಪ್ರಭುತ್ವದ ಮೂಲ ಗುಣ ಸಹಿಷ್ಣುತೆ ಆಗಿದೆ. ಈಗ ಯಾವುದೇ ವಿಚಾರ ಮಂಡನೆ ಮಾಡಬೇಕಾದರೂ ಅತೀವ ವೇದನೆಯಾಗುತ್ತಿದೆ. ತಾನು ಇನ್ನೂ ಬರೆಯುತ್ತಿದ್ದರೂ ಆತಂಕದಿಂದಲೇ ಬರೆಯುತ್ತಿದ್ದೇನೆ. ಆದರೆ, ಸಮಾಜದ ಜನರು ತನ್ನನ್ನು ನೋಯಿಸಿದರೆ ಬರೆಯುವುದನ್ನೇ ತಾನು ಬಿಡಬೇಕಾಗುತ್ತದೆ' ಎಂದು ಶೆಟ್ಟರ್ ಹೇಳಿದರು.

'ಮುಕ್ತ ವಿಚಾರ ಮಂಡನೆ ಪ್ರಬುದ್ಧ ಸಮಾಜದ ಲಕ್ಷಣ'
'ಮುಕ್ತ ವಿಚಾರ ಮಂಡನೆ ಪ್ರಬುದ್ಧ ಸಮಾಜದ ಲಕ್ಷಣವಾಗಿದೆ. ಕುಲ, ಜಾತಿ, ಮತವನ್ನು ವೇದಿಕೆಯಾಗಿ ಬಳಸಿ ನಮ್ಮ ಸಾಹಿತ್ಯ ಮತ್ತು ಸಂಸ್ಕೃತಿಯ ಅಧ್ಯಯನ ಮಾಡುವುದು ಸರಿಯಲ್ಲ. ನಮ್ಮ ಸಾಹಿತ್ಯವನ್ನು ನಾವು ಮಾತ್ರ ಓದದೆ ಇತರ ಭಾಷೆಯವರೂ ಓದಿದಾಗ ಸಾರ್ವತ್ರಿಕ ಸಾಹಿತ್ಯ ನಿರ್ಮಾಣವಾಗುತ್ತದೆ. ಅವರ ಟೀಕೆ, ಟಿಪ್ಪಣಿಯನ್ನು ನಾವು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು' ಎಂದು ಸಲಹೆ ನೀಡಿದರು.

'ಸಾಹಿತ್ಯ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ'
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಸ್ವಾಗತ ಭಾಷಣದಲ್ಲಿ '51ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಧರ್ಮಸ್ಥಳದಲ್ಲಿ ಯಶಸ್ವಿಯಾಗಿ ಏರ್ಪಡಿಸಿರುವುದನ್ನು ಸ್ಮರಿಸಿದರು. ಕ್ಷೇತ್ರದಲ್ಲಿ ಸಾಹಿತ್ಯ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದೆ. ಧರ್ಮಸ್ಥಳದಲ್ಲಿರುವ ಪುರಾತನ ಹಸ್ತಪ್ರತಿಗಳನ್ನು ಆಸಕ್ತರ ಬಳಕೆಗೆ ನೀಡಲಾಗುತ್ತಿದೆ' ಎಂದರು.

'ಮಾಧ್ಯಮ ಕೂಡಾ ಜ್ಞಾನಕ್ಕೆ ಮೂಲ'
'ಸಿಡಿ, ಡಿವಿಡಿ ಮೊದಲಾದ ಆಧುನಿಕ ತಂತ್ರಜ್ಞಾನ ಬಳಕೆಯ ಸಾಧನಗಳನ್ನು ಸಂಗೀತ, ಕಲೆ, ನೃತ್ಯ ಸಿನಿಮಾಗಳ ಸಾಹಿತ್ಯ ಪ್ರಕಾರಗಳಲ್ಲಿ ಬಳಸಿ ಜ್ಞಾನ ಪ್ರಸಾರ ಮಾಡಲಾಗುತ್ತಿದೆ. ಈಗ ಸಾಹಿತ್ಯ ಪ್ರಕಾರಗಳು ಹೆಚ್ಚಾಗಿವೆ. ಮಾಧ್ಯಮವನ್ನು ಕೂಡಾ ಜ್ಞಾನಕ್ಕೆ ಮೂಲವೆಂದು ತಿಳಿದು ಸಾಹಿತ್ಯ ಪ್ರಕಾರಗಳಲ್ಲಿ ಸೇರಿಸಬಹುದು' ಹೆಗ್ಗಡೆಯವರು ಸಲಹೆ ನೀಡಿದರು.

'ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ'
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಡಾ. ಪ್ರಧಾನ್ ಗುರುದತ್ ಅವರು, 'ಧರ್ಮ ಮತ್ತು ಸಾಹಿತ್ಯಕ್ಕೆ ನಿಕಟವಾದ ಸಂಬಂಧ ಇದೆ. ವಸ್ತುನಿಷ್ಟವಾಗಿ ನಾವು ಧರ್ಮವನ್ನು ಆಚರಣೆ ಮಾಡಬೇಕು. ಅಸಹಿಷ್ಣುತೆಗೆ ಪರಿಹಾರ ಮಾರ್ಗ ಧರ್ಮದಲ್ಲಿದೆ. ಧರ್ಮದ ಅನುಷ್ಠಾನದಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ' ಎಂದು ಅಭಿಪ್ರಾಯಪಟ್ಟರು.

ವಿವಿಧ ಉಪನ್ಯಾಸಗಳು
ಖ್ಯಾತ ಹಾಸ್ಯ ಸಾಹಿತಿ ಎಂ.ಎಸ್. ನರಸಿಂಹ ಮೂರ್ತಿ, ಉದಯವಾಣಿ ದೈನಿಕದ ಬೆಂಗಳೂರಿನ ಸಮೂಹ ಸಂಪಾದಕ ರವಿ ಹೆಗಡೆ ಮತ್ತು ಚಿತ್ರದುರ್ಗದ ಡಾ. ಲೋಕೇಶ್ ಅಗಸನ ಕಟ್ಟೆ ಸಾರ್ಥಕ ಬದುಕಿಗೆ ಸಾಹಿತ್ಯದ ಕೊಡುಗೆ ಬಗ್ಯೆ ಉಪನ್ಯಾಸ ನೀಡಿದರು.

ಚೆನ್ನೈ ಸಂತ್ರಸ್ತರಿಗೆ ಧರ್ಮಸ್ಥಳದಿಂದ ನೆರವು
ಚೆನ್ನೈನಲ್ಲಿ ಸುರಿದ ಮಳೆಯಿಂದಾಗಿ ಸಂಕಷ್ಟಕ್ಕೊಳಗಾದ ರೈತರಿಗೆ ಸಾಂತ್ವನ ನೀಡಿ, ತಕ್ಷಣದ ಪರಿಹಾರವಾಗಿ ಧರ್ಮಸ್ಥದ ವತಿಯಿಂದ 50 ಲಕ್ಷ ರೂ. ಮೊತ್ತದ ನೆರವು ನೀಡುವುದಾಗಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಘೋಷಿಸಿದರು.












Click it and Unblock the Notifications