ಮಂಗಳೂರಿನಿಂದ ಕೇರಳಕ್ಕೆ ಅಕ್ರಮ ಮರಳು ಸಾಗಾಟ: 4 ಲಾರಿ ವಶ
ಮಂಗಳೂರು, ಫೆಬ್ರವರಿ 14:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಗೆ ಅಂಕುಶ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾರ್ಯಾಚರಣೆ ಮುಂದುವರೆಸಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಮಂಗಳೂರು ಪೊಲೀಸರು ಅಕ್ರಮವಾಗಿ ಕೇರಳಕ್ಕೆ ಮರಳು ಸಾಗಿಸುತ್ತಿದ್ದ 4 ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ವಾಹನ ತಪಾಸಣೆ ಮಾಡುತ್ತಿರುವ ಸಮಯ ಬಿ.ಸಿ. ರೋಡ್ ಕಡೆಯಿಂದ ಪಡೀಲ್ ಮಾರ್ಗವಾಗಿ ಕೇರಳ ಕಡೆಗೆ ಸಾಗುತ್ತಿದ್ದ 4 ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಸ್ಟಿನ್ ಮಿರಾಂದ, ಹಸನಬ್ಬ , ಅಬ್ದುಲ್ ರೆಹಮಾನ್ , ಹರೀಶ್ ಎಂಬವವರಿಗೆ ಸೇರಿದ ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಕಣ್ಣಿಗೆ ಮಣ್ಣೆರಚಿ ಮರಳು ಸಾಗಿಸುತ್ತಿದ್ದವರ ಬಂಧನ
ಈ ಲಾರಿಗಳಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳನ್ನು ಕೇರಳ ರಾಜ್ಯಕ್ಕೆ ಸಾಗಾಟ ಮಾಡುತ್ತಿತ್ತು ಎಂದು ಹೇಳಲಾಗಿದೆ. ವಶಪಡಿಸಿಕೊಳ್ಳಲಾದ ಲಾರಿಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಸ್ವಾಧೀನಪಡಿಸಿಕೊಂಡ ಮರಳು ಮತ್ತು ಲಾರಿಯ ಅಂದಾಜು ಮೌಲ್ಯ ಒಟ್ಟು ರೂ. 36.50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.