ಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದ ರಮಾನಾಥ್ ರೈಗೆ ಶುರುವಾಯ್ತು ಹೊಸ ಮಂಡೆಬಿಸಿ
ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳ ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ವಿರುದ್ದ ಹೀನಾಯವಾಗಿ ಸೋತಿದ್ದ ಹಿರಿಯ ಕಾಂಗ್ರೆಸ್ ನಾಯಕ ರಮಾನಾಥ್ ರೈಗೆ ತಮ್ಮ ಸೋಲನ್ನು ಜೀರ್ಣಿಸಿಕೊಳ್ಳಲು ಬಹಳ ದಿನಗಳೇ ಬೇಕಾಯಿತು. ದೇವಸ್ಥಾನ, ದೈವಸ್ಥಾನಕ್ಕೆ ಹೋಗಿ, ನಾನೇನು ತಪ್ಪು ಮಾಡಿಲ್ಲ, ಎಲ್ಲಾ ಬಿಜೆಪಿಯವರ ಅಪಪ್ರಚಾರ ಎಂದು ದೇವರ ಮೊರೆಹೋಗಿದ್ದರು.
ಅಲ್ಪಸಂಖ್ಯಾತರ ಮತದಿಂದಲೇ ಜಯಗಳಿಸಿದ್ದು ಎಂದು ಹಿಂದೊಮ್ಮೆ ಹೇಳಿದ್ದ ರಮಾನಾಥ ರೈಗೆ, ಬಂಟ್ವಾಳದ ಜನತೆ ಅಸೆಂಬ್ಲಿ ಚುನಾವಣೆಯಲ್ಲಿ ಸರಿಯಾದ ಪಾಠವನ್ನೇ ಕಲಿಸಿದರು ಎನ್ನುವುದು ಅಲ್ಲಿನ ಜನತಯೇ ಮಾತನಾಡಿಕೊಳ್ಳುವ ವಿಚಾರ ಎನ್ನುವುದು ಈಗ ಎಲ್ಲರಿಗೂ ಗೊತ್ತಿರುವ ವಿಚಾರ.
ಈಗ, ಮುಂಬರುವ ಲೋಕಸಭಾ ಚುನಾವಣೆಗೆ ರಮಾನಾಥ್ ರೈ, ದಕ್ಷಿಣಕನ್ನಡ ಜಿಲ್ಲೆಯ ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಹೆಚ್ಚುಕಮ್ಮಿ ಅವರ ಹೆಸರೇ ಫೈನಲ್ ಆಗಿರುವ ಹೊತ್ತಿನಲ್ಲಿ, ಜಿಲ್ಲೆಯ ಇನ್ನೊಬ್ಬ ಹಿರಿಯ ಮುಖಂಡರು, ನಾನೂ ಟಿಕೆಟ್ ಆಕಾಂಕ್ಷಿಯೆಂದಿರುವುದು ರೈ ಸಾಹೇಬ್ರಿಗೆ ಹೊಸ ಮಂಡೆಬಿಸಿ ತಂದು ಹಾಕಿದೆ.
ಕೇಸರಿ ಮತ್ತು ಮೋದಿ ಹವಾ ಜಾಸ್ತಿ ಇರುವ ಕ್ಷೇತ್ರಗಳಲ್ಲಿ ನಿಸ್ಸಂದೇಹವಾಗಿ ದಕ್ಷಿಣಕನ್ನಡ ಕೂಡಾ ಒಂದು. ಇಲ್ಲಿ ಸಂಸದರಿಂದ ಕ್ಷೇತ್ರದ ಅಭಿವೃದ್ದಿ ಎಷ್ಟಾಯಿತು ಎನ್ನುವುದಕ್ಕಿಂತ, ಜಾತಿ ಮತ್ತು ಕೋಮು ಲೆಕ್ಕಾಚಾರವೇ ಹೆಚ್ಚು ವರ್ಕೌಟ್ ಆಗುವುದು. ಕಳೆದ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ ತಮ್ಮ ಕ್ಷೇತ್ರವನ್ನು ಉಳಿಸಿಕೊಂಡಿದ್ದು ಮೋದಿಯವರ ಹವಾದಿಂದಲೇ ಎನ್ನುವುದು ಒತ್ತಿ ಹೇಳುವ ಅವಶ್ಯಕತೆಯಿಲ್ಲ.
ಬಿಜೆಪಿಗೆ ಸರಿಸಾಟಿಯಾಗಿ ಪೈಪೋಟಿ ನೀಡಬಲ್ಲ ಅಭ್ಯರ್ಥಿ ಈ ಕ್ಷೇತ್ರದಿಂದ ಯಾರು ಎಂದು ಕಾಂಗ್ರೆಸ್ ತೀವ್ರ ಹುಡುಕಾಟದಲ್ಲಿದ್ದಾಗ, ಪಕ್ಷಕ್ಕೆ ಸಿಕ್ಕ ಹೆಸರು ರಮಾನಾಥ್ ರೈ. ಖುದ್ದು, ರೈಗಳೇ ಇದಕ್ಕೆ ಒಪ್ಪಿಗೆ ಸೂಚಿಸಿದ್ದರಿಂದ, ಕಾಂಗ್ರೆಸ್ಸಿಗಿದ್ದ ದೊಡ್ಡ ತಲೆನೋವು ಕಮ್ಮಿಯಾದಂಗಾಗಿತ್ತು. ಆದರೆ, ಟಿಕೆಟ್ ಕೊಟ್ಟರೆ ನಾನೂ ಕಣಕ್ಕಿಳಿಯಲು ಸಿದ್ದ ಎಂದು ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಹಿರಿಯ ಮುಖಂಡರೊಬ್ಬರು ಹೇಳಿರುವುದು, ಪಕ್ಷದ ಲೆಕ್ಕಾಚಾರವನ್ನು ಇನ್ನೊಂದು ಪುಟಕ್ಕೆ ತಿರುಗಿಸಿದೆ...

ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗಿದ್ದು ಮಂಗಳೂರು ಕ್ಷೇತ್ರವನ್ನು ಮಾತ್ರ
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ, ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗಿದ್ದು ಮಂಗಳೂರು (ಉಳ್ಳಾಲ) ಕ್ಷೇತ್ರವನ್ನು ಮಾತ್ರ. ಅದು ಕೂಡಾ ಸಚಿವ ಯು ಟಿ ಖಾದರ್ ಅವರ ವೈಯಕ್ತಿಕ ವರ್ಚಸ್ಸಿನಿಂದ. ರಮಾನಾಥ ರೈ, ವಸಂತ ಬಂಗೇರ, ಶಕುಂತಲಾ ಶೆಟ್ಟಿ ಸೇರಿದಂತೆ ಎಲ್ಲಾ ಏಳು ಕಡೆ ಕಾಂಗ್ರೆಸ್ ಮುಖಭಂಗ ಅನುಭವಿಸಿತ್ತು. ಅದಕ್ಕೆ ಹಿಂದೂ ಕಾರ್ಯಕರ್ತರ ಕೊಲೆ, ಹಿಂದೂ ವಿರೋಧಿ ನೀತಿ.. ಇತ್ಯಾದಿ ಎಂದು ವ್ಯಾಖ್ಯಾನಿಸಲಾಗಿತ್ತು.

ಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನು ಉಳಿಸಿಕೊಂಡಿರುವ ಜನಾರ್ಧನ ಪೂಜಾರಿ
ಈಗ, ಹಲವು ಬಾರಿ ದಕ್ಷಿಣಕನ್ನಡ (ಮಂಗಳೂರು) ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದ, ಈಗಲೂ ಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನು ಉಳಿಸಿಕೊಂಡಿರುವ ಜನಾರ್ಧನ ಪೂಜಾರಿ, ಹೈಕಮಾಂಡ್ ಮತ್ತೆ ನನಗೆ ಟಿಕೆಟ್ ಕೊಟ್ಟರೆ ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿರುವುದು, ರಮಾನಾಥ ರೈಗಳಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಯಾಕೆಂದರೆ, ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಯಸಿದ್ದ ರೈಗಳಿಗೆ, ಪೂಜಾರಿ ಬೆಂಬಲಿಗರಿಂದ ಯಾವ ರೀತಿಯ ಬೆಂಬಲ ಸಿಗಲಿದೆ ಎನ್ನುವುದು ಪ್ರಶ್ನೆಯಾಗಿ ಉಳಿಯಲಿದೆ.

ಮುಂಬರುವ ಸಾರ್ವತ್ರಿಕ ಚುನಾವಣೆಗೆ ಪೂಜಾರಿ ನಿಲ್ಲಬಹುದು
ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಪೂಜಾರಿ, ಮುಂಬರುವ ಸಾರ್ವತ್ರಿಕ ಚುನಾವಣೆಗೆ ಪೂಜಾರಿ ನಿಲ್ಲಬಹುದು ಅಥವಾ ನಿಲ್ಲದೆಯೂ ಇರಬಹುದು. ಹೈಕಮಾಂಡ್ ಟಿಕೆಟ್ ಕೊಟ್ಟರೆ, ಈ ನಿಮ್ಮ ಪೂಜಾರಿ ಮತ್ತೆ ಸ್ಪರ್ಧಿಸಲಿದ್ದಾನೆ. ಸ್ಪರ್ಧೆ ಮಾಡಲಿಕ್ಕೆ ನನಗೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ. ಆದರೆ, ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ (2014) ಪೂಜಾರಿಯವರ ಆರೋಗ್ಯ ಹಿಂದಿನಂತಿಲ್ಲ. ಹೈಕಮಾಂಡ್ ಮನವೊಲಿಸಿದರೆ, ಪೂಜಾರಿಯವರನ್ನು ಕಣದಿಂದ ಹಿಂದಕ್ಕೆ ಸರಿಯುವಂತೆ ಮಾಡುವುದು ದೊಡ್ಡ ಕೆಲಸವಲ್ಲ.

ರಮಾನಾಥ ರೈ ಮತ್ತು ಪೂಜಾರಿ ನಡುವಿನ ಸಂಬಂಧ ತೀರಾ ಹದೆಗೆಟ್ಟಿತ್ತು
ಅರಣ್ಯ ಸಚಿವರಾಗಿದ್ದಾಗ ರಮಾನಾಥ ರೈ ಮತ್ತು ಪೂಜಾರಿ ನಡುವಿನ ಸಂಬಂಧ ತೀರಾ ಹದೆಗೆಟ್ಟಿತ್ತು, ನನ್ನ ತಾಯಿಯನ್ನು ಅವಮಾನಿಸಿದರು ಎಂದು ಬಿಲ್ಲವ ಸಮುದಾಯದ ಸಭೆಯ ವೇದಿಕೆಯಲ್ಲಿ ಅಕ್ಷರಸಃ ಪೂಜಾರಿ ಕಣ್ಣೀರಿಟ್ಟಿದ್ದರು. ಯಾವ ಪಕ್ಷದವರೇ ಇರಲಿ, ತಪ್ಪನ್ನು ತಪ್ಪು, ಸರಿಯನ್ನು ಸರಿ ಎಂದು ನೇರನುಡಿಯ ರಾಜಕಾರಣೆ ಎಂದೇ ಹೆಸರಾಗಿರುವ ಪೂಜಾರಿಯವರನ್ನು ಅವಮಾನಿಸಿದ್ದಕ್ಕೆ, ಸಮುದಾಯದಲ್ಲಿ ರೈ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ರೈ ಸೋಲಿಗೆ ಪೂಜಾರಿಯವರನ್ನು ಅವಮಾನಿಸಿದ್ದೂ ಒಂದು ಕಾರಣವಾಗಿತ್ತು
ಕಳೆದ ಚುನಾವಣೆಯಲ್ಲಿ ರೈ ಸೋಲಿಗೆ ಪೂಜಾರಿಯವರನ್ನು ಅವಮಾನಿಸಿದ್ದೂ ಒಂದು ಕಾರಣವಾಗಿತ್ತು. ಇದಾದ ನಂತರ ಪೂಜಾರಿಯವರ ಕ್ಷಮೆಯನ್ನು ರೈ ಕೋರಿದ್ದರೂ, ಬಿಲ್ಲವ ಸಮುದಾಯದ ಸೋಲು, ಗೆಲುವಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಚುನಾವಣೆ ಕಾವು ಏರುತ್ತಿದ್ದಂತೇ, ತಾನೂ ಸ್ಪರ್ಧಿಸಲು ಸಿದ್ದ ಎನ್ನುವ ಪೂಜಾರಿಯವರ ನಿಲುವಿನಲ್ಲಿ ಬದಲಾದರೂ ಆಗಬಹುದು. ಆರೋಗ್ಯ ಮತ್ತು ವಯಸ್ಸಿನ ದೃಷ್ಟಿಯಿಂದ ರೈಗೆ ಟಿಕೆಟ್ ಒಲಿದರೂ ಒಲಿಯಬಹುದು. ಆದರೆ, ಪೂಜಾರಿಯವರ ಬೆಂಬಲ ರೈಗಳಿಗೆ ಬೇಕೇಬೇಕು.












Click it and Unblock the Notifications