ಉಳ್ಳಾಲ: ತೀವ್ರಗೊಂಡ ಕಡಲ್ಕೊರೆತಕ್ಕೆ ಮನೆ ಸಮುದ್ರಪಾಲು
ಮಂಗಳೂರು, ಜೂನ್ 6: ಉಳ್ಳಾಲದ ಕೈಕೋ ಎಂಬಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ಮಂಗಳವಾರ ಮುಂಜಾನೆ ಮನೆಯೊಂದು ನೀರುಪಾಲಾಗಿದೆ. ಸಮುದ್ರ ತಟದಲ್ಲಿ ಹಾಕಲಾಗಿದ್ದ ಕಲ್ಲಿನ ತಡೆಗೋಡೆಯನ್ನು ಭೇದಿಸಿ ಮುನ್ನುಗ್ಗಿದ ದೈತ್ಯಾಕಾರದ ಅಲೆಗಳು ಮನೆಯೊಂದನ್ನು ಆಹುತಿ ಪಡೆದಿದ್ದು, ಘಟನೆ ವೇಳೆ ಮನೆಯೊಳಗೆ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಕೈಕೋ ನಿವಾಸಿ ನೆಬೀಸಮ್ಮ ಅವರ ಮನೆ ಕಡಲ್ಕೊರೆತದ ರೌದ್ರನರ್ತನಕ್ಕೆ ಆಹುತಿಯಾಗಿದೆ. ನೆಬೀಸಮ್ಮ ಅವರ ಪತಿ ಲತೀಫ್ ಅವರು ಸಾವನ್ನಪ್ಪಿದ್ದು, ಈಕೆಯ ಪುತ್ರ ಶರೀಫ್ ಅವರು ವರುಷಗಳ ಹಿಂದೆ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟಿದ್ದರು. ನೆಬೀಸಮ್ಮ ಅವರು ತನ್ನ ಮೂರು ಹೆಣ್ಮಕ್ಕಳ ಜೊತೆ ಕೈಕೋ ಕಡಲತೀರದ ಮನೆಯಲ್ಲಿ ಸಂಕಷ್ಟದ ದಿನಗಳನ್ನು ಸಾಗಿಸುತ್ತಿದ್ದರು. ಇದೀಗ ಕಡಲ್ಕೊರೆತದಿಂದಾಗಿ ಇದ್ದ ಸೂರನ್ನೂ ಕಳಕೊಂಡ ನೆಬೀಸಮ್ಮರವರು ಅತಂತ್ರ ಸ್ಥಿತಿಯಲ್ಲಿದ್ದಾರೆ.[ಮಂಗಳೂರಿನಲ್ಲಿ ಮಳೆಯ ಅಬ್ಬರ, ವಾಹನ ಸವಾರರು ಹೈರಾಣಾ]
ಕಳೆದೆರಡು ವಾರಗಳ ಹಿಂದೆಯೇ ಕೈಕೋದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ಪ್ರದೇಶಕ್ಕೆ ಸ್ಥಳೀಯ ಶಾಸಕ ಸಚಿವ ಯು.ಟಿ ಖಾದರ್ ಮತ್ತು ಜಿಲ್ಲಾಧಿಕಾರಿ ಜಗದೀಶ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ತಡೆಗೋಡೆಯನ್ನು ಅತಿ ಶೀಘ್ರವೇ ಮತ್ತೆ ಬಲಪಡಿಸುವಂತೆ ಮನವಿ ಮಾಡಿದ್ದರು. ಆದರೂ "ಸಚಿವರು ಮನವಿಯನ್ನು ಅಲ್ಲಗಳೆದಿದ್ದುದರ ಪರಿಣಾಮ ಈ ಅನಾಹುತ ಸಂಭವಿಸಿದೆ," ಎಂದು ಸ್ಥಳೀಯ ಮುಖಂಡರಾದ ಬಶೀರ್ ಹುಸೇನ್ ಅವರು ಆರೋಪಿಸಿದ್ದಾರೆ.[ಮಂಗಳೂರು: ಇನ್ಶೂರೆನ್ಸ್ ಹಣಕ್ಕಾಗಿ ಬಾರ್ಜ್ ಮುಳುಗಿಸುವ ಸಂಚು?]
ಜಿಲ್ಲಾಡಳಿತವು ಅಪಾಯ ಸಂಭವಿಸಿದ ನಂತರ ಇದೀಗ ಎಚ್ಚೆತ್ತುಕೊಂಡಿದ್ದು ಸಮುದ್ರ ಬದಿಗೆ ಕಲ್ಲುಗಳನ್ನು ಹಾಕುವ ಕಾಯಕವನ್ನು ಶುರು ಮಾಡಿದೆ. ಸ್ಥಳೀಯ ನಗರಸಭೆ ಸದಸ್ಯೆ ಸೂರ್ಯಕಲಾ ಅವರು ಸಂತ್ರಸ್ತರನ್ನು ಸಮಾಧಾನ ಪಡಿಸಿದ್ದು, ನಗರಸಭಾ ಅಧಿಕಾರಿಗಳನ್ನು ಕರೆಸಿ ನಷ್ಟದ ಬಗ್ಗೆ ಅವಲೋಕನ ನಡೆಸಿದ್ದಾರೆ.