ನೀರಿನ ಅಭಾವ: ವಿದ್ಯಾರ್ಥಿಗಳಿಗೆ ಷರತ್ತು ವಿಧಿಸಿದ ಹಾಸ್ಟೆಲ್ ಮಾಲೀಕರು
ಮಂಗಳೂರು, ಮೇ 19: ಕರಾವಳಿ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೂ ನೀರಿನ ಬಿಸಿ ತಟ್ಟಿದ್ದು, ವಿದ್ಯಾರ್ಥಿಗಳು ಉಳಿದುಕೊಳ್ಳುವ ಪಿಜಿ, ಹಾಸ್ಟೆಲ್ಗಳಲ್ಲಿ ನೀರಿಲ್ಲದೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ವಿವಿಧ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ವೃತ್ತಿಪರ ಕೋರ್ಸ್ ಸಹಿತ ಇನ್ನಿತರ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಉದ್ಯೋಗ ನಿಮಿತ್ತ ಹೊರ ಭಾಗಗಳಿಂದ ಬಂದ ಜನರು ನಗರದ ವಿವಿಧ ಭಾಗಗಳ ಹಾಸ್ಟೆಲ್, ಪಿಜಿಗಳಲ್ಲಿ ವಾಸ್ತವ್ಯ ಹೂಡಿದ್ದು, ಇದೀಗ ನೀರಿನ ಸಮಸ್ಯೆಯಿಂದಾಗಿ ಅವರೆಲ್ಲ ಕಂಗಲಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಪಿಜಿಗಳಲ್ಲಿ ನೆಲೆಸಿರುವ ಮಂದಿಗೆ ನೀರಿನ ಬಳಕೆಗೆ ಸಂಬಂಧಿಸಿದಂತೆ ಮಾಲೀಕರು ಕೆಲವೊಂದು ಷರತ್ತುಗಳನ್ನು ಹಾಕುತ್ತಿದ್ದಾರೆ. ನಗರದಲ್ಲಿ ರೇಷನಿಂಗ್ನಂತೆ ಯಾವ ದಿನ ನೀರು ಬರುವುದಿಲ್ಲವೋ ಆ ದಿನಗಳಲ್ಲಿ ಬಟ್ಟೆ ತೊಳೆಯದಂತೆ ಸೂಚನೆ ನೀಡಲಾಗಿದೆ. ಕುಡಿಯಲು, ಸ್ನಾನಕ್ಕಾಗಿ ನೀರನ್ನು ಮಿತವಾಗಿ ಬಳಸಬೇಕು.ಇಲ್ಲವಾದರೆ ಪಿಜಿ ಬದಲಾಯಿಸಿಕೊಳ್ಳಿ ಎನ್ನುವ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಲಾಗಿದೆ.

ಒಂದೆಡೆ ನೀರು ಬರುತ್ತಿಲ್ಲ ಎಂದು ಪಿಜಿ-ಹಾಸ್ಟೆಲ್ನಲ್ಲಿ ನೆಲೆಸಿರುವವರು ಚಿಂತೆಯಲ್ಲಿದ್ದರೆ, ಅತ್ತ ಅದರ ಮಾಲೀಕರು ಕೂಡ ಟ್ಯಾಂಕರ್ಗಳಲ್ಲಿ ನೀರು ಸರಬರಾಜು ಮಾಡಿ ಸುಸ್ತಾಗುತ್ತಿದ್ದಾರೆ. ಇನ್ನು ಕೆಲವೆಡೆ, ಟ್ಯಾಂಕರ್ ನೀರಿಗೂ ಬೇಡಿಕೆ ಜಾಸ್ತಿಯಾಗಿದ್ದು, ಅಗತ್ಯಕ್ಕೆ ತಕ್ಕಂತೆ ಲಭಿಸದ ಪರಿಸ್ಥಿತಿಯಲ್ಲಿ ಪಿಜಿ ಮಾಲೀಕರಿದ್ದಾರೆ.
ನೀರಿನ ಬರ ನಗರದ ವ್ಯಾಪಾರದ ಮೇಲೂ ಪರಿಣಾಮ ಬೀರಿದೆ. ಕೈಗಾರಿಕೆಗಳು, ಹೋಟೆಲ್ಗಳೂ ನೀರಿನ ಬವಣೆ ಎದುರಿಸುತ್ತಿವೆ. ನಗರದಲ್ಲಿ ಹೋಟೆಲ್ಗಳಲ್ಲಿ ಕೆಲವು ಬೋರ್ವೆಲ್, ಬಾವಿಗಳು ನೀರನ್ನು ಆಶ್ರಯಿಸಿದ್ದರೆ ಕೆಲವು ಚಿಕ್ಕ ಹೋಟೆಲ್ ಗಳು ಪಾಲಿಕೆ ನೀರು, ಟ್ಯಾಂಕರ್ ನೀರಿಗಾಗಿ ಕಾಯುವ ಸ್ಥಿತಿ ಎದುರಾಗಿದೆ.











Click it and Unblock the Notifications