ಮಂಗಳೂರಿನಲ್ಲಿ ಗೋವುಗಳ ರಕ್ಷಣೆಗೆ ನಿರಾಕರಿಸಿದ ಹಿಂದೂ ಸಂಘಟನೆಗಳು!
ಮಂಗಳೂರು, ಡಿಸೆಂಬರ್ 19: ಅಕ್ರಮ ಗೋವುಗಳ ಸಾಗಾಟದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಹೇಳಿಕೊಂಡು ಬಂದ ಹಿಂದೂ ಸಂಘಟನೆಗಳು ಗೋವುಗಳ ರಕ್ಷಣೆಗೆ ನಿರಾಕರಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಇತ್ತೀಚೆಗೆ ಕಂಟೇನರ್ ಲಾರಿ ಒಂದರಲ್ಲಿ 24 ಹೋರಿಗಳು ಹಾಗೂ 7 ಎಮ್ಮೆಗಳನ್ನು ತುಂಬಿಸಿ ಮಂಗಳೂರಿಗೆ ತರುತ್ತಿದ್ದಾಗ ಕಂಕನಾಡಿ ನಗರ ಠಾಣೆ ಪೊಲೀಸರು ದಾಖಲಾತಿ ಇಲ್ಲದ ಕಾರಣಕ್ಕೆ ಅವುಗಳನ್ನು ವಶಕ್ಕೆ ಪಡೆದಿದ್ದರು. ಗೋವುಗಳಿಗೆ ತಾತ್ಕಾಲಿಕವಾಗಿ ನೀರು, ಮೇವು ನೀಡುವುದಕ್ಕಾಗಿ ಪೊಲೀಸರು ಮಂಗಳೂರಿನ ಗೋಶಾಲೆಗಳನ್ನು ಸಂಪರ್ಕಿಸಿದ್ದರು. ಆದರೆ,ಮಂಗಳೂರಿನಲ್ಲಿ ಬಜರಂಗದಳ, ವಿಶ್ವ ಹಿಂದು ಪರಿಷತ್ತಿಗೆ ಸೇರಿದ ಸೇರಿದ ಗೋಶಾಲೆಗಳು ತಮಗೆ ಫಂಡ್ ಬಂದಿಲ್ಲವೆಂದು ಗೋವುಗಳನ್ನು ಸ್ವೀಕರಿಸಲು ನಿರಾಕರಿಸಿವೆ ಎಂದು ಹೇಳಲಾಗಿದೆ.
ಇದರಿಂದ ಕಂಗೆಟ್ಟ ಪೊಲೀಸರು ಕೊನೆಗೆ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಶೆಟ್ಟಿಯವರನ್ನು ಸಂಪರ್ಕಿಸಿ, ಅನಾಥ ಗೋವುಗಳಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ. ಗೋ ಹತ್ಯೆ ವಿಚಾರದಲ್ಲಿ ಗಲಾಟೆ, ಬೀದಿ ರಂಪಾಟ ಮಾಡುವ ಹಿಂದು ಸಂಘಟನೆಗಳು ಪೊಲೀಸರು ಹಿಡಿದುಕೊಟ್ಟ ಗೋವುಗಳನ್ನು ರಕ್ಷಿಸಲು ನಿರಾಕರಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಮಂಗಳೂರಿನ ಕಸಾಯಿಖಾನೆಗೆ ಸಚಿವ ಯು.ಟಿ.ಖಾದರ್ 15 ಕೋಟಿ ನೀಡಿದ್ದ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಗೋಶಾಲೆಗೆ ಅನುದಾನ ನೀಡದ ಸರಕಾರ ಗೋವು ಕಡಿಯುವ ಕಸಾಯಿಖಾನೆಗೆ ಅನುದಾನ ನೀಡುವುದಾಗಿ ಹಿಂದು ಸಂಘಟನೆಗಳು ಆರೋಪಿಸಿದ್ದವು. ಆ ಬಳಿಕ ಉಸ್ತುವಾರಿ ಸಚಿವ ಯು.ಟಿ.ಖಾದರ್, ವಿಶ್ವ ಹಿಂದು ಪರಿಷತ್ತಿಗೆ ಸೇರಿದ ಪಜೀರು ಗೋಶಾಲೆಗೆ 12 ಲಕ್ಷ ಸೇರಿದಂತೆ ಮಂಗಳೂರಿನ ವಿವಿಧ ಗೋಶಾಲೆಗಳಿಗೆ 25 ಲಕ್ಷ ರೂಪಾಯಿ ಅನುದಾನ ನೀಡಿದ್ದರು.

ಹೀಗಿದ್ದರೂ, ಪೊಲೀಸರು ಈಗ ಕಸಾಯಿಖಾನೆಗೆ ಒಯ್ಯುತ್ತಿದ್ದ ಗೋವುಗಳನ್ನು ತಡೆದು ರಕ್ಷಿಸಿದ್ದ ಗೋವುಗಳನ್ನು ಗೋಶಾಲೆಯಲ್ಲಿ ಸಲಹಲು ನಿರಾಕರಿಸಿದ್ದು ಸಂಘಟನೆಗಳ ದ್ವಂದ್ವ ನೀತಿಯನ್ನು ತೋರಿಸುತ್ತಿವೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಮಂಗಳೂರು ಹೊರವಲಯದ ಪಜೀರು ಗೋಶಾಲೆ ಸರಕಾರದಿಂದ ಹತ್ತು ಎಕರೆ ಗೋಮಾಳ ಭೂಮಿಯನ್ನು ಪಡೆದು ನಿರ್ಮಿಸಲ್ಪಟ್ಟ ಗೋಶಾಲೆಯಾಗಿದ್ದು ಗೋವುಗಳ ಪಾಲನೆ ಉದ್ದೇಶದಿಂದಲೇ ಸ್ಥಾಪನೆಯಾಗಿತ್ತು ಅನ್ನುವುದು ವಿಶೇಷ.












Click it and Unblock the Notifications