ಛತ್ರಪತಿ ಶಿವಾಜಿ ಸ್ಟಿಕ್ಕರ್ ಹಾಕಿಸಿಕೊಂಡಿದ್ದನ್ನು ಆಕ್ಷೇಪಿಸಿ ಇರಿದ ದುಷ್ಕರ್ಮಿಗಳು!
ಬೆಂಗಳೂರು, ಫೆ. 08: ಛತ್ರಪತಿ ಶಿವಾಜಿ ಸ್ಟಿಕ್ಕರ್ನ್ನು ಬೈಕ್ ಮೇಲೆ ಹಾಕಿಸಿಕೊಂಡಿದ್ದನ್ನು ವಿರೋಧಿಸಿ ದುಷ್ಕರ್ಮಿಗಳು ಹಿಂದೂ ಕಾರ್ಯಕರ್ತನಿಗೆ ಚೂರಿ ಇರಿದ ಘಟನೆ ಮಂಗಳೂರಿನ ಲಾಲ್ಬಾಗ್ ಬಳಿ ನಿನ್ನೆ (ಫೆ.07) ರಾತ್ರಿ ನಡೆದಿದೆ. ಇರಿತದ ಘಟನೆಗಳು ಸಾಮಾನ್ಯ ಎಂಬಂತಾಗಿರುವ ಮಂಗಳೂರಿನಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತ ದೀಪಕ್ ಎಂಬವರಿಗೆ ದುಷ್ಕರ್ಮಿಗಳು ಚೂರಿ ಇರಿದಿದ್ದಾರೆ.
ಆರು ಜನ ಅಪರಿಚಿತರ ತಂಡದಿಂದ ಈ ಕೃತ್ಯ ಮಂಗಳೂರಿನ ಲಾಲ್ಬಾಗ್ ಬಳಿ ನಡೆದಿದೆ. ದೀಪಕ್ ತನ್ನ ಬೈಕ್ ಮುಂಭಾಗದಲ್ಲಿ ಛತ್ರಪತಿ ಶಿವಾಜಿ ಭಾವಚಿತ್ರ ಹಾಕಿಸಿಕೊಂಡಿದ್ದ. ಆದರೆ ಬೈಕ್ನಲ್ಲಿದ್ದ ಛತ್ರಪತಿ ಶಿವಾಜಿ ಸ್ಟಿಕ್ಕರ್ ತೆಗೆಯುವಂತೆ ಆಗ್ರಹಿಸಿದ್ದ ದುಷ್ಕರ್ಮಿಗಳು, ದೀಪಕ್ ಒಪ್ಪದಿದ್ದಾಗ ಎಡಗೈಗೆ ಇರಿದು ಗಾಯ ಮಾಡಿದ್ದಾರೆ. ದೀಪಕ್ ಸದ್ಯ ಮಂಗಳೂರಿನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾಲ್ ಭಾಗ್ ಬಳಿ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ಮೇಲೆ ದುಷ್ಕರ್ಮಿಗಳು ಚೂರಿಯಿಂದ ಇರಿದು ಗಾಯಗೊಳಿಸಿದ ವಿಚಾರ ತಿಳಿದು ತಕ್ಷಣ ಶಾಸಕ ವೇದವ್ಯಾಸ್ ಕಾಮತ್ ಅವರು ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿದರು. ತಕ್ಷಣವೇ ದಾಳಿಕೋರರನ್ನು ಬಂಧಿಸಿ ಕಠಿಣ ಕ್ರಮ ಜರಗಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮಂಗಳೂರಿನಲ್ಲಿ ಶಾಂತಿ ಕದಡಲು ಯತ್ನಿಸುವ ಇಂತಹ ಘಟನೆಯ ಹಿಂದೆ ಯಾರೇ ಇದ್ದರೂ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಕಾಮತ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.