ಹಿಜಾಬ್ ವಿದ್ಯಾರ್ಥಿನಿಯರಿಗೆ ದೇವರು ಬುದ್ಧಿ ನೀಡಲಿ: ಯುಟಿ ಖಾದರ್
ಮಂಗಳೂರು, 31ಮೇ: ಮಂಗಳೂರು ವಿವಿ ಕಾಲೇಜಿನ ಹಿಜಾಬ್ ವಿದ್ಯಾರ್ಥಿನಿ ಗೌಸಿಯಾ ಮಾಡಿದ ಆರೋಪಕ್ಕೆ ಮಾಜಿ ಸಚಿವ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು. ಟಿ. ಖಾದರ್ ಪ್ರತಿಕ್ರಿಯೆ ನೀಡಿದರು.
ಮಂಗಳೂರು ನಗರದ ಹೊರವಲಯದ ತೊಕ್ಕೊಟ್ಟುವಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಸಮಸ್ಯೆ ಹೇಳಿದಾಗ ಖಾದರ್ ಕ್ರಿಕೆಟ್ ಆಟದಲ್ಲಿ ಬ್ಯುಸಿ ಇದ್ದರು" ಎಂಬ ಹಿಜಾಬ್ ವಿದ್ಯಾರ್ಥಿನಿಯ ಆರೋಪದ ಕುರಿತು ಮಾತನಾಡಿದರು.
"ಹಿಜಾಬ್ ವಿದ್ಯಾರ್ಥಿನಿಯರು ದುರುದ್ದೇಶ ಪೂರಿತವಾಗಿ ಹೇಳಿಕೆ ಕೊಟ್ಟಿದ್ದಾರಾ?, ರಾಜಕೀಯ ಪ್ರೇರಿತವಾಗಿ ಹೇಳಿಕೆ ಕೊಟ್ಟಿದ್ದಾರಾ? ಏನು ಅಂತಾ ವಿಚಾರ ಗೊತ್ತಿಲ್ಲ. ಅವರ ಹೇಳಿಕೆಯ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕಾಗುತ್ತದೆ. ನನಗೆ ಕಾಲ್ ಬಂದಾಗ ನನ್ನಿಂದಾದ ನೆರವು ನೀಡಿದ್ದೇನೆ, ಜಿಲ್ಲಾಧಿಕಾರಿ ಜೊತೆ ಮಾತುಕತೆಗೆ ಸಹಾಯ ಮಾಡಿದ್ದೇನೆ" ಎಂದರು.
"ವಿದ್ಯಾರ್ಥಿನಿಯರಿಗೆ ಕಾನೂನನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ. ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಅವಕಾಶ ಇಲ್ಲ ಅಂತಾ ಹೇಳಿದ್ದೇನೆ. ಕಾನೂನು ಪ್ರಕಾರ ಹೋರಾಟ ಮಾಡಲು ಸೂಚಿಸಿದ್ದೇನೆ. ಆ ಬಳಿಕ ವಿದ್ಯಾರ್ಥಿನಿಯರು ಒಂದು ವಾರ ನನ್ನನ್ನು ಸಂಪರ್ಕ ಮಾಡಿಲ್ಲ" ಎಂದು ಸ್ಪಷ್ಟಪಡಿಸಿದರು.

ವಿದ್ಯಾರ್ಥಿನಿಯರ ವ್ಯಕ್ತಿತ್ವ ಹಾಳಾಗುತ್ತದೆ
"ಪೋನ್ ಮಾಡಿ ಮಾತನಾಡಿದ್ದೇನೆ. ವಿದ್ಯಾರ್ಥಿನಿಯರಿಗೆ ಕಚೇರಿಯಿಂದ ಪೋನ್ ಮಾಡಿಸಿದ್ದೇನೆ. ನಾನೇ ಖುದ್ದು ಫೋನ್ ಮಾಡಿದ್ದೇನೆ. ಆದರೆ ವಿದ್ಯಾರ್ಥಿನಿಯರು ಕರೆ ಸ್ವೀಕಾರ ಮಾಡಿಲ್ಲ. ರಾಂಗ್ ನಂಬರ್ ಅಂತಾ ಹೇಳಿ ಕರೆ ಕಟ್ ಮಾಡಿಲ್ಲ.
ವಿದ್ಯಾರ್ಥಿನಿಯರು ಉದ್ದೇಶ ಪೂರ್ವಕವಾಗಿ ಹೇಳಿಕೆ ನೀಡಿದ್ದಾ?, ಹೇಳಿಸಿದ್ದಾ ಗೊತ್ತಿಲ್ಲ. ವಿದ್ಯಾರ್ಥಿನಿಯರು ಸುಳ್ಳು ಹೇಳಬಾರದು. ಸುಳ್ಳು ಹೇಳಿ ಅವರ ಗೌರವ, ಧರ್ಮದ ಗೌರವ ತೆಗೆಯಬಾರದು. ಒಬ್ಬರು ಸುಳ್ಳು ಹೇಳಿದರೆ ಎಲ್ಲರ ಗೌರವ ಹಾಳಾಗುತ್ತದೆ. ವಿದ್ಯಾರ್ಥಿನಿಯರ ವ್ಯಕ್ತಿತ್ವ ಹಾಳಾಗುತ್ತದೆ" ಎಂದು ಯು. ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.

ಕಾನೂನು ವಿರುದ್ಧವಾಗಿ ನಾನು ಸಹಾಯ ಮಾಡಲ್ಲ: ಖಾದರ್
"ವಿದ್ಯಾರ್ಥಿನಿಯರ ಪರ ಹೆತ್ತವರು ಕಾಳಜಿ ವಹಿಸಬೇಕು. ಮಕ್ಕಳ ಜೊತೆ ಹೆತ್ತವರು ಮಾತನಾಡಿ ಸಮಸ್ಯೆ ಬಗೆಹರಿಸಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸುವುದು ಹೆತ್ತವರು. ಅವರ ಶಾಲೆಯ ಫೀಸ್ ಕಟ್ಟೋದು ಹೆತ್ತವರು, ಅವರಿಗೆ ಡ್ರೆಸ್ ಕೊಡೋದು ಹೆತ್ತವರು, ಅವರಿಗೆ ಪುಸ್ತಕ ನೀಡುವುದು ಕೂಡಾ ಹೆತ್ತವರು. ಈ ಸಮಸ್ಯೆ ಬಂದಾಗ ಹೆತ್ತವರು ಮುಂದೆ ಬಂದು ಸಮಸ್ಯೆ ಹರಿಸಲಿ. ಕಾನೂನು ವಿರುದ್ಧವಾಗಿ ನಾನು ಸಹಾಯ ಮಾಡುವುದಿಲ್ಲ" ಎಂದು ಮಂಗಳೂರಿನಲ್ಲಿ ಯ. ಟಿ. ಖಾದರ್ ಹೇಳಿಕೆ ನೀಡಿದ್ದಾರೆ.

ಡಿಸಿಯವರ ಮಾತಿನಲ್ಲಿ ಅಸಹಾಯಕತೆ ಗೊತ್ತಾಗುತ್ತಿದೆ: ವಿದ್ಯಾರ್ಥಿನಿ
ಡಿಸಿ ಸಭೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಗೌಸಿಯ ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿ, "ಡಿಸಿಯವರ ಬಳಿ ಹೋಗಿ ಮಾತನಾಡಿದ್ದೇವೆ. ಡಿಸಿಯವರ ಮಾತಿನಲ್ಲಿ ಅಸಹಾಯಕತೆ ಗೊತ್ತಾಗುತ್ತಿದೆ. ಬಂದಿರುವ ಆದೇಶ ಸಿಂಡಿಕೇಟ್ನಿಂದ ಬಂದಿದೆ. ಜಿಲ್ಲಾಧಿಕಾರಿಯಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಗೊತ್ತಾಯಿತು. ದಾಖಲೆ ಇರುವುದರಿಂದ ಕಾನೂನಾತ್ಮಕ ಹೋರಾಟ ಮಾಡಿ ಎಂಬ ಅಭಿಪ್ರಾಯ ನೀಡಿದ್ದಾರೆ. ಕರ್ನಾಟಕದ ಹಿಜಾಬ್ ವಿವಾದಕ್ಕೂ ನಮ್ಮ ಕಾಲೇಜಿನ ಹಿಜಾಬ್ ವಿವಾದಕ್ಕೂ ಸಂಬಂಧ ಇಲ್ಲ. ಎಬಿವಿಪಿ ಒತ್ತಡದಿಂದ ನಮ್ಮ ಸಿಂಡಿಕೇಟ್ ಹಿಜಾಬ್ ನಿಷೇಧದ ಆದೇಶ ಮಾಡಿದೆ. ಈ ಹಿಂದೆ ಹಿಜಾಬ್ ಮುಖ್ಯವೋ ಶಿಕ್ಷಣ ಮುಖ್ಯವೋ ಎಂದು ಪ್ರಶ್ನಿಸುತ್ತಿದ್ದರು. ಆದರೆ ಇವತ್ತು ಎಬಿವಿಪಿಯ ಒತ್ತಡ ಮುಖ್ಯವೊ ನಮ್ಮ ಶಿಕ್ಷಣ ಮುಖ್ಯವೊ ಎಂದು ಪ್ರಶ್ನಿಸುತ್ತೇವೆ. ಇದು ಹೈಕೋರ್ಟ್ವರೆಗೂ ಹೋಗಿ ಮುಗಿಸಬೇಕಾದಿಲ್ಲ. ವಿಶ್ವವಿದ್ಯಾಲಯದ ಮಟ್ಟದಲ್ಲೇ ಸಮಸ್ಯೆ ಬಗೆಹರಿಸಬಹುದು" ಎಂದರು.

ಕಾಲೇಜಿಗೆ ನಮ್ಮನ್ನು ಸೇರಿಸಿಕೊಳ್ಳುವುದಿಲ್ಲ: ವಿದ್ಯಾರ್ಥಿನಿ
"ನಾವು ಶಾಸಕ ಯು. ಟಿ. ಖಾದರ್ ಅನ್ನು ಭೇಟಿ ಮಾಡಿದ್ದೇವೆ. ಅವರಿಂದ ಸರಿಯಾಗಿ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಅವರು ಅಡ್ಯಾರ್ಗೆ ಹೋಗಿ ಕ್ರಿಕೆಟ್ ಆಡುತ್ತಿದ್ದಾರೆ. ಧಾರ್ಮಿಕ ಪಂಡಿತರು, ವಿದ್ಯಾರ್ಥಿ ಸಂಘಟನೆ, ಸ್ತ್ರೀಪರವಾಗಿರುವವರಿಗೆ ಬಹಿರಂಗ ಆಹ್ವಾನ ನೀಡುತ್ತಿದ್ದೇವೆ. ಈ ಸಮಸ್ಯೆಗೆ ಪರಿಹಾರ ತೆಗೆದುಕೊಡುವಾದರೆ ಅವರ ಜೊತೆ ನಾವು ಸೇರುತ್ತೇವೆ. ಕಾನೂನಾತ್ಮಕವಾಗಿ ಹೋದರೆ ತುಂಬಾ ಸಮಯ ಹೋಗುತ್ತದೆ. ಈಗಾಗಲೇ ಸಾಕಷ್ಟು ಹಾಜರಾತಿ ಹೋಗಿದೆ. ಹಾಜರಾತಿ ಇಲ್ಲದಿದ್ದರೆ ಪರೀಕ್ಷೆ ಬರೆಯುವುದಕ್ಕೂ ಆಗುವುದಿಲ್ಲ. ಕಾಲೇಜಿಗೆ ಹೋಗಬೇಕೆಂದು ಇದೆ. ಆದರೆ ಕಾಲೇಜಿಗೆ ನಮ್ಮನ್ನು ಸೇರಿಸಿಕೊಳ್ಳುವುದಿಲ್ಲ. ಮುಂದೆನಾಗುತ್ತೆ ಎಂದು ನೋಡುತ್ತೇವೆ" ಎಂದು ಮಂಗಳೂರಿನಲ್ಲಿ ಹಿಜಾಬ್ಗಾಗಿ ಪಟ್ಟು ಹಿಡಿದ ವಿದ್ಯಾರ್ಥಿನಿ ಗೌಸಿಯಾ ಹೇಳಿದ್ದರು.

ವಿದ್ಯಾರ್ಥಿನಿಯರಿಗೆ ಡಿಸಿ ಖಡಕ್ಕಾಗಿ ಕಾನೂನಿನ ಪಾಠ
ವಿದ್ಯಾರ್ಥಿಗಳು ಹಿಜಾಬ್ ನಮ್ಮ ಹಕ್ಕು ಹಿಜಾಬ್ ಇಲ್ಲದೇ ನಾವು ತರಗತಿಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದ ಹಿನ್ನೆಲೆ ಸಭೆಯಲ್ಲಿ ಯಾವುದೇ ಒಮ್ಮತದ ತೀರ್ಮಾನ ಆಗಿಲ್ಲ. ಸಭೆಯಲ್ಲಿ ಮೊನ್ನೆ ನಡೆದ ಸಿಂಡಿಕೇಟ್ ಸಭೆಯ ತೀರ್ಮಾನದ ಕಡತಗಳನ್ನು ವಿದ್ಯಾರ್ಥಿನಿಯರು ಕೇಳಿದ್ದಾರೆ. ಡಿಗ್ರಿ ಕಾಲೇಜಿಗೆ ಯೂನಿಫಾರ್ಮ್ ಇಲ್ವಲ್ಲ ಎಂದು ಕೇಳಿದ ವಿದ್ಯಾರ್ಥಿನಿಯರಿಗೆ ಜಿಲ್ಲಾಧಿಕಾರಿ ಖಡಕ್ಕಾಗಿ ಕಾನೂನಿನ ಪಾಠ ಮಾಡಿದರು.
ಕಾಲೇಜು ಕ್ಯಾಂಪಸ್ ಒಳಗೆ ಸಮಸ್ಯೆಯಾಗದಂತೆ ವರ್ತಿಸಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಪದವಿ ಕಾಲೇಜುಗಳಿಗೆ ಕೋರ್ಟ್ ಆದೇಶ ಅನ್ವಯವಾಗುವ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು ನಿಯಮ ರೂಪಿಸುತ್ತವೆ. ಅದರಲ್ಲಿ ಜಿಲ್ಲಾಡಳಿತ ಯಾವುದೇ ರೀತಿ ಮಧ್ಯಪ್ರವೇಶ ಮಾಡುವುದಿಲ್ಲ. ಕಾಲೇಜಿನ ವಿಶ್ರಾಂತಿ ಕೊಠಡಿಯಲ್ಲಿ ಹಿಜಾಬ್ ತೆಗೆಯಲು ಅವಕಾಶ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications