ಮಂಗಳೂರಿನಲ್ಲಿ ಧಾರಾಕಾರ ಮಳೆಗೆ ಅಪಾರ ನಷ್ಟ
ಮಂಗಳೂರು, ಸೆಪ್ಟೆಂಬರ್ 18: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ 2 ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಮಂಗಳೂರಿನಲ್ಲಿ ನಿರಂತರವಾಗಿ ಮಳೆಸುರಿಯುತ್ತಿರುವ ಹಿನ್ನೆಲೆಯಲ್ಲಿ ನಗರದ ಹಲವೆಡೆ ಮನೆ ಹಾಗೂ ತಡೆಗೋಡೆ ಕುಸಿದು ಭಾರೀ ನಷ್ಟಸಂಭವಿಸಿದೆ.
ಕಳೆದ ರಾತ್ರಿಯಿಂದ ಮಳೆಯಾಗುತ್ತಿರುವುದರಿಂದ ತಗ್ಗು ಪ್ರದೇಶದ ಮನೆ ಹಾಗೂ ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ವಾಹನ ಸಂಚಾರಕ್ಕೂ ಅಡ್ಡಿಯುಂಟಾಗಿ ಸಂಚಾರ ಅಸ್ತವ್ಯಸ್ಥವಾಗಿದೆ.

ತುಂಬಿ ಹರಿಯುತ್ತಿರುವ ನದಿಗಳು
ಜಿಲ್ಲೆಯ ವಿವಿಧೆಡೆ ನದಿಗಳು, ಸಣ್ಣ ಸಣ್ಣ ತೊರೆಗಳೂ ತುಂಬಿ ಹರಿಯುತ್ತಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳೂರಿನ ಯೆಯ್ಯಾಡಿ ಶಕ್ತಿ ನಗರ ರಸ್ತೆಯ ಕುಟುಂಲ್ಪಾಡಿಯಲ್ಲಿ ಜಗದೀಶ್ ರೈ ಎಂಬವರ ಮನೆಯ ಕಂಪೌಂಡ್ ಗೋಡೆ ಹಾಗು ಅಡುಗೆಮನೆ ಕುಸಿದು ಬಿದ್ದ ಪರಿಣಾಮ ಫ್ರಿಜ್, ವಾಷಿಂಗ್ ಮಷಿನ್ ಸೇರಿದಂತೆ ಇನ್ನಿತರ ವಸ್ತುಗಳು ಮಣ್ಣಿನಡಿಯಲ್ಲಿ ಹೂತು ಹೋಗಿವೆ . ಈ ಹಿನ್ನೆಲೆಯಲ್ಲಿ ಒಟ್ಟು 3 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ.

ಬಹುಮಹಡಿ ಕಟ್ಟಡದ ತಡೆಗೋಡೆ ಕುಸಿತ
ಮಂಗಳೂರಿನ ಬಾವುಟಗುಡ್ಡೆಯ ಬಳಿ ನಿರ್ಮಾಣ ಹಂತದಲ್ಲಿರುವ ಬಹು ಮಹಡಿ ಕಟ್ಟಡವೊಂದರ ತಡೆಗೋಡೆ ಕುಸಿದು ಬಿದ್ದ ಪರಿಣಾಮ ಪಕ್ಕದ ಅಪಾರ್ಟಮೆಂಟ್ ಒಂದರಲ್ಲಿ ಪಾರ್ಕ್ ಮಾಡಲಾಗಿದ್ದ ಕಾರು ಹಾಗೂ ಬೈಕ್ ಗಳಿಗೆ ಹಾನಿಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಮನೆಗಳಿಗೆ ನುಗ್ಗಿದ ನೀರು
ನಗರದ ಅತ್ತಾವರ, ಕದ್ರಿ ಪ್ರದೇಶದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ಕೊಟ್ಟಾರ ಪ್ರದೇಶದಲ್ಲಿ ರಸ್ತೆಯ ಮೇಲೆಯೇ ಚರಂಡಿ ನೀರು ಹರಿದ ಪರಿಣಾಮ ಪಕ್ಕದ ಅಂಗಡಿಗಳಿಗೂ ನೀರು ನುಗ್ಗಿದೆ. ಬಿ.ಸಿ ರೋಡ್, ಪಂಪ್ ವೆಲ್, ಕಂಕನಾಡಿ, ಜ್ಯೋತಿ ವೃತ, ಕೊಟ್ಟಾರ, ನಂತೂರು ಸೇರಿದಂತೆ ಹಲವೆಡೆ ಮಳೆಯಿಂದಾಗಿ ಸಂಚಾರ ಅಸ್ತವ್ಯಸ್ಥಗೊಂಡು ಜನ ಸಾಮಾನ್ಯರು ಸಾಕಷ್ಟು ಸಮಸ್ಯೆಗಳನ್ನೆದುರಿಸಿದರು.

ಇನ್ನೂ ನಾಲ್ಕು ದಿನ ಮಳೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ 4 ದಿನ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎಲ್ಲ ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಜೆ ಜಗದೀಶ್ ಸೂಚನೆ ನೀಡಿದ್ದಾರೆ .

ಸ್ಥಳೀಯ ಪರಿಸ್ಥಿತಿ ನೋಡಿಕೊಂಡು ಶಾಲಾ-ಕಾಲೇಜಿಗೆ ರಜೆ
ಭಾರೀ ಮಳೆಯಿಂದ ತೊಂದರೆಯಾದರೆ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಕುರಿತು ಸಂಬಂಧಿಸಿದ ತಹಸೀಲ್ದಾರರು ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಸಂಪರ್ಕಿಸಿ ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.












Click it and Unblock the Notifications