ಕರ್ನಾಟಕ ಕರಾವಳಿಯುದ್ದಕ್ಕೂ ಮಳೆಯ ಆರ್ಭಟ, ಕೆಲವೆಡೆ ಪ್ರವಾಹ
Recommended Video
ಮಂಗಳೂರು, ಜುಲೈ 07 : ಪುನರ್ವಸು ಮಳೆ ಆರಂಭವಾದಂದಿನಿಂದ ಕರ್ನಾಟಕ ಕರಾವಳಿಯುದ್ದಕ್ಕೂ ಮಳೆಯ ಹೊಡೆತ ಹೆಚ್ಚಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಎಲ್ಲೆಡೆ ಪ್ರವಾಹದ ವಾತಾವರಣ ಸೃಷ್ಟಿಯಾಗಿದೆ.
ಭರ್ಜರಿ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಭಾರೀ ವರ್ಷಧಾರೆಯಾಗುತ್ತಿದ್ದು ಸುಳ್ಯ, ಪುತ್ತೂರು, ಬೆಳ್ತಂಗಡಿ, ಮೂಡುಬಿದಿರೆ ಭಾಗದಲ್ಲಿ ಶಾಲೆ, ಕಾಲೇಜಿಗೆ ರಜಾ ನೀಡಲಾಗಿದೆ.
ಮಳೆ ಅಬ್ಬರ: ಪುತ್ತೂರಿನಲ್ಲಿ ಗೋಡೆ ಕುಸಿದು ಅಜ್ಜಿ, ಮೊಮ್ಮಗ ಸಾವು
ಇದೇ ವೇಳೆ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ತುಂಬಿ ಹರಿದಿದ್ದು ಸ್ನಾನಘಟ್ಟ ಮುಳುಗಡೆಯಾಗಿದೆ. ಉಪ್ಪಿನಂಗಡಿ - ಸುಬ್ರಹ್ಮಣ್ಯ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಹೊಸ್ಮಠ ಸೇತುವೆ ಮತ್ತೆ ಮುಳುಗಿದ್ದು, ಕುಕ್ಕೆಗೆ ಆಗಮಿಸುವ ಭಕ್ತರಿಗೆ ಸಂಕಷ್ಟ ಎದುರಾಗಿದೆ.
ಜಿಲ್ಲೆಯ ನೇತ್ರಾವತಿ ಮತ್ತು ಕುಮಾರಧಾರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ನದಿ ದಡಕ್ಕೆ ತೆರಳದಂತೆ ಪ್ರವಾಸಿಗರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ಜಿಲ್ಲೆಯ ಹಲವೆಡೆ ಗುಡ್ಡ ಕುಸಿದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಮೂಲರಪಟ್ನ ತೂಗುಸೇತುವೆ ಜಲಾವೃತ
ಜಿಲ್ಲೆಯ ಬಂಟ್ವಾಳದ ಮೂಲರಪಟ್ನ ನಿವಾಸಿಗಳ ಬದುಕು ಮತ್ತಷ್ಟು ಅತಂತ್ರಗೊಂಡಿದೆ. ಮೂಲರಪಟ್ನ ಸೇತುವೆ ಕುಸಿದಿರುವ ಪರಿಣಾಮ ಸಮೀಪದಲ್ಲೇ ಇರುವ ತೂಗು ಸೇತುವೆಯನ್ನು ಇಲ್ಲಿಯ ಜನ ಆಶ್ರಯಿಸಿದ್ದರು. ಆದರೆ ಭಾರೀ ಮಳೆಯ ಪರಣಾಮ ಈ ತೂಗುಸೇತುವೆ ಜಲಾವೃತಗೊಂಡಿದ್ದರಿಂದ ಸಂಪರ್ಕ ತಾತ್ಕಾಲಿಕವಾಗಿ ಕಡಿತಗೊಂಡಿದೆ. ಮಳೆಯ ಪ್ರಮಾಣ ಕಡಿಮೆಯಾಗದ ಹೊರತು ಗತ್ಯಂತರವಿಲ್ಲ. ಅಲ್ಲದೆ, ಮುಂದಿನ 48 ಗಂಟೆಗಳ ಕಾಲ ಮತ್ತೆ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ಕರಾವಳಿಯಲ್ಲಿ ಮುಂದುವರಿಯಲಿದೆ ವರುಣನ ಅಬ್ಬರ
ಮಂಗಳೂರು, ಬಂಟ್ವಾಳ ನಡುವಿನ ಸಂಪರ್ಕ ಕಡಿತ
ವಾರಗಳ ಹಿಂದೆ ಮಂಗಳೂರು ತಾಲೂಕು ಹಾಗೂ ಬಂಟ್ವಾಳ ತಾಲೂಕಿನ ಗಡಿಪ್ರದೇಶ ಮೂಲರಪಟ್ನದಲ್ಲಿರೋ ಸೇತುವೆ ಕುಸಿದು ಬಿದ್ದಿತ್ತು. ಹೀಗಾಗಿ ಮೂಲರಪಟ್ನ - ಮುತ್ತೂರು ಗ್ರಾಮಸ್ಥರ ಬದುಕು ಅತಂತ್ರವಾಗಿತ್ತು. ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಮಂಗಳೂರು, ಕುಪ್ಪೆಪದವು, ಬಂಟ್ವಾಳ ಹಾಗೂ ಬಿಸಿರೋಡ್ ಕಡೆಗೆ ರಸ್ತೆ ಮೂಲಕ ಹೋಗಲು ಬೇರೆ ಬೇರೆ ಮಾರ್ಗವನ್ನು ಬಳಸಬೇಕಾಗಿತ್ತು.
ಮೂಲರಪಟ್ನದಿಂದ ಮುತ್ತೂರು ಕಡೆಗೆ ನಡೆದುಕೊಂಡು ಹೋಗಲು ಮೂಲರಪಟ್ನ ತೂಗುಸೇತುವೆಯನ್ನ ಬಳಸುವಂತೆ ಸೂಚಿಸಲಾಗಿತ್ತು. ಆದರೆ ಈ ತೂಗುಸೇತುವೆಗೆ ಹೋಗುವ ತಾತ್ಕಾಲಿಕ ರಸ್ತೆ ಭಾರೀ ಮಳೆಯಿಂದ ಮುಳುಗಡೆಯಾಗಿದೆ. ಇದರಿಂದ ಮೂಲರಪಟ್ನ ನಿವಾಸಿಗಳ ಬದುಕು ಮತ್ತಷ್ಟು ಅತಂತ್ರಗೊಂಡಿದೆ.
ಪುನರ್ವಸು ಮಳೆ ಆರಂಭ: ಕರ್ನಾಟಕದಲ್ಲಿ ಮತ್ತೆ ವರುಣನ ಅಬ್ಬರ
ಶಿಬರೂರಿನಲ್ಲಿ ಕುಟುಂಬಗಳ ಸ್ಥಳಾಂತರ
ನಿನ್ನೆಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳೂರು ಹೊರವಲಯದ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ. ಶಿಬರೂರಿನಲ್ಲಿ ಹಲವು ಕುಟುಂಬಗಳ ಸ್ಥಳಾಂತರ ಗೊಳಿಸಲಾಗಿದೆ. ಕಿನ್ನಿಗೋಳಿ ಸಮೀಪದ ಪಟ್ಟೆ ಕ್ರಾಸ್ ರಸ್ತೆ ಮುಳುಗಡೆಯಾಗಿದೆ. ಕಟೀಲು, ಪಂಜ, ಕಿಲೆಂಜೂರು ಪ್ರದೇಶದ ತಗ್ಗು ಪ್ರದೇಶ ಜಾಲಾವ್ರತಗೊಂಡಿದ್ದು ಹಲವು ಮನೆಗಳ ಸಂಪರ್ಕ ಕಡಿತಗೊಂಡಿದೆ.
ರಾಜ್ಯದ ಇತರೆಡೆಗಳಲ್ಲಿ ಆಗಿರುವ ಮಳೆಯ ಪ್ರಮಾಣ
ಸುಳ್ಯ (24 ಸೆಂ.ಮೀ.), ಪುತ್ತೂರು, ಉಡುಪಿ (23), ಮುಲ್ಕಿ, ಬಂಟ್ವಾಳ, ಮಣಿ (22), ಕಾರ್ಕಳ (21), ಆಗುಂಬೆ (20), ಬೆಳ್ತಂಗಡಿ, ಸುಬ್ರಮಣ್ಯ (18), ಶಿರಾಲಿ (17), ಪಣಂಬೂರು, ಕೋಟ (16), ಧರ್ಮಸ್ಥಳ, ಭಾಗಮಂಡಲ, ಶೃಂಗೇರಿ (15), ಮಡಿಕೇರಿ (13), ಸಿದ್ದಾಪುರ, ಮಂಕಿ (12 ಸೆಂ.ಮೀ). ಕೊಲ್ಲೂರು, ಕುಂದಾಪುರ, ಗೇರುಸೊಪ್ಪ, ಕಳಸ (11 ಸೆಂ,ಮೀ), ತಾಳಗುಪ್ಪ, ಕಮ್ಮರಡಿ, ಹೊನ್ನಾವರ, ವಿರಾಜಪೇಟೆ, ಸೋಮವಾರಪೇಟೆ, ಲಿಂಗನಮಕ್ಕಿ (9). ಕ್ಯಾಸಲ್ ರಾಕ್, ಕೊಟ್ಟಿಗೆಹಾರ, ಪೊನ್ನಂಪೇಟ್ ಮುಂತಾದ ಪ್ರದೇಶಗಳಲ್ಲಿಯೂ ಭಾರೀ ಮಳೆಯಾಗಿದೆ.
24 ಗಂಟೆ ಭಾರೀ ಮಳೆಯ ಮುನ್ಸೂಚನೆ
ಮುಂದಿನ 24 ಗಂಟೆಗಳಲ್ಲಿ ಕರಾವಳಿ ಕರ್ನಾಟಕ, ದಕ್ಷಿಣ ಕರ್ನಾಟಕದ ಒಳನಾಡಿನಲ್ಲಿ, ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಕರ್ನಾಟಕದಲ್ಲಿ ಮುಂದಿನ 48 ಗಂಟೆಗಳ ಕಾಲ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಆದರೆ, ಉತ್ತರ ಕರ್ನಾಟಕದ ಹಲವೆಡೆಗಳಲ್ಲಿ, ಅದರಲ್ಲೂ ಬೆಳಗಾವಿ ಕಡೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ.