ದಕ್ಷಿಣ ಕನ್ನಡ; ಗಾಳಿ, ಮಳೆ ಅಬ್ಬರ, ಅಪಾರ ನಷ್ಟ
ಮಂಗಳೂರು, ಏಪ್ರಿಲ್ 22; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ವರುಣ ಅಬ್ಬರಿಸಿದ್ದಾನೆ. ಸಂಜೆಯಾಗುತ್ತಿದ್ದಂತೆಯೇ ಇಡೀ ಜಿಲ್ಲೆಯಲ್ಲಿ ಮಳೆ ಸುರಿಯಲಾರಂಭಿಸಿದ್ದು ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ನಷ್ಟ ಸಂಭವಿಸಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ಮಳೆ ಸುರಿಯುತ್ತಿದೆ. ಅಡಿಕೆ ಕೃಷಿಗೆ ಅಪಾರ ಹಾನಿಯಾಗಿದೆ. ಇಡೀ ತಾಲೂಕಿನಲ್ಲಿ ಬೀಸಿದ ಭಾರೀ ಗಾಳಿಗೆ 500 ಕ್ಕೂ ಹೆಚ್ಚು ಅಡಿಕೆ ಮರಗಳು ಧರೆಗುಳಿದಿದೆ.
ಫಸಲು ಬರುವ ಸಮಯದಲ್ಲೇ ಗಾಳಿ ಎಲ್ಲವನ್ನೂ ಅಪೋಷನ ಮಾಡಿದ್ದು, ಕೃಷಿಕ ಮತ್ತೆ ನಷ್ಟದ ಸುಳಿಯಲ್ಲಿ ಸಿಲುಕುವಂತೆ ಆಗಿದೆ. ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಸಮೀಪ ಪ್ರವೀಣ್ ಎಂಬುವವ ಮನೆಗೆ ಹಾಕಲಾಗಿದ್ದ ಸಿಮೆಂಟ್ ಶೀಟ್ ಗಾಳಿಗೆ ಹಾರಿಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಧರ್ಮಸ್ಥಳ, ಗೇರುಕಟ್ಟೆ, ವೇಣೂರು, ಗುರುವಾಯನಕೆರೆ, ಉಜಿರೆ, ಮಡಂತ್ಯಾರು, ಮದ್ದಡ್ಕ ಪರಿಸರದಲ್ಲಿ ಭಾರೀ ಮಳೆ ಸುರಿದಿದೆ.
ಇನ್ನು ಪುತ್ತೂರು, ಬಂಟ್ವಾಳ, ಸುಳ್ಯ ತಾಲೂಕುಗಳಲ್ಲೂ ಭಾರೀ ಮಳೆ ಸುರಿದಿದೆ. ಸುಳ್ಯದ ಸುಬ್ರಹ್ಮಣ್ಯ, ಗುತ್ತಿಗಾರು, ಕಲ್ಮಕಾರು, ಗಾಳಿಬೀಡು ಪ್ರದೇಶದಲ್ಲಿ ಭಾರೀ ಮಳೆ ಸುರಿದಿದ್ದು, ವಿದ್ಯುತ್ ಕಂಬಗಳೆಲ್ಲಾ ಮುರಿದು ಬಿದ್ದಿದೆ.
ಹಲವಾರು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕೂಡಾ ಕಡಿತಗೊಂಡಿದ್ದು, ಜನ ಕತ್ತಲಲ್ಲಿ ಕಾಲಕಳೆಯುವಂತಾಗಿದೆ. ಭಾರೀ ಗುಡುಗು, ಮಿಂಚು ಸಹಿತ ಮಳೆಯಾಗಿದ್ದು, ಹಲವು ಮನೆಗಳ ವಿದ್ಯುತ್ ಉಪಕರಣಗಳು ಹಾನಿಯಾಗಿದೆ.

ಮಂಗಳೂರು ನಗರ ಭಾಗದಲ್ಲೂ ಭಾರೀ ಮಳೆಯಾಗಿದ್ದು, ಸಂಜೆ ವೇಳೆಗೆ ಜನ ಪರದಾಡುವಂತಾಗಿದೆ. ವಾಹನ ಸವಾರರು ಮಳೆಗೆ ಹೈರಾಣಾಗಿದ್ದಾರೆ. ಬಿಸಿಲಿನ ಬೇಗೆಗೆ ಬೆಂದು ಹೋಗಿದ್ದ ನಗರವಾಸಿಗಳಿಗೆ ಮಳೆ ತಂಪಿನ ಅನುಭವ ನೀಡಿದೆ.
ಮುಂಗಾರು ಪೂರ್ವ ಮಳೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ಅಬ್ಬರಿಸುವ ಸಾಧ್ಯತೆಗಳಿದ್ದು, ಜನ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.












Click it and Unblock the Notifications