ಕರಾವಳಿ ಭಾಗದಲ್ಲಿ ಭಾರೀ ಮಳೆ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ, ಕುಮಾರಾಧಾರಾ
ಮಂಗಳೂರು, ಜುಲೈ, 23: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ 48 ಗಂಟೆಗಳಿಂದ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಮತ್ತು ಕುಮಾರಾಧಾರಾ ನದಿ ಮೈತುಂಬಿ ಹರಿಯುತ್ತಿದೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಬಂಟ್ವಾಳದಲ್ಲಿ ಕೇವಲ ಎರಡು ಮೀಟರ್ ಎತ್ತರದಲ್ಲಿ ಹರಿಯುತ್ತಿದ ನದಿ ಇಂದು ಏಳು ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದು,ಇನ್ನೂ ಒಂದೂವರೆ ಮೀಟರ್ ನೀರು ಹರಿದಲ್ಲಿ ನೇತ್ರಾವತಿ ಅಪಾಯದ ಮಟ್ಟ ಮೀರಲಿದೆ. ಇನ್ನು ಕುಮಾರಾಧಾರಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಕುಕ್ಕೆ ಸುಬ್ರಹ್ಮಣ್ಯದ ಕುಮಾರಾಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ.

ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಅಪಾರ ಪ್ರಮಾಣದ ನೀರು ಕುಮಾರಾಧಾರೆಯಲ್ಲಿ ಹರಿಯುತ್ತಿದೆ. ಈ ಹಿನ್ನಲೆಯಲ್ಲಿ ನದಿ ಪಾತ್ರಕ್ಕೆ ಭಕ್ತರು ತೆರಳದಂತೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೂಚನೆ ನೀಡಲಾಗಿದೆ. ಕುಮಾರಾಧಾರಾ ಸ್ನಾನ ಘಟ್ಟ ಬಳಿ ಗೃಹರಕ್ಷಕ ಮತ್ತು ಎಸ್ಡಿಆರ್ಎಫ್ ತಂಡ ನಿಯೋಜನೆ ಮಾಡಲಾಗಿದೆ. ಇನ್ನು ಕುಮಾರಾಧಾರಾ ನದಿಯಲ್ಲಿ ಪ್ರವಾಹ ಪರಿಸ್ಥಿತಿಯ ವಾತವರಣ ಇರುವುದರಿಂದ ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿ ಸಂಪರ್ಕ ಕಡಿತವಾಗಿದೆ.
ಭಾರೀ ಗಾಳಿ ಮಳೆಗೆ ಜಿಲ್ಲೆಯಾದ್ಯಂತ ಇನ್ನೂರಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದೆ. ಮಂಗಳೂರು ನಗರದ ನಾರಾಯಣ ಗುರು ವೃತ್ತದ ಬಳಿ ನೂರು ವರ್ಷದ ಹಳೆಯ ಆಲದ ಮರ ಧರಾಶಾಹಿಯಾಗಿದೆ. ಮರ ಉರುಳಿಬಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ಜನ ಸಂಚಾರ ಕಡಿಮೆ ಇದ್ದೂದ್ದರಿಂದ ಅಪಾಯ ತಪ್ಪಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ, ಮೂಡಬಿದಿರೆಯಲ್ಲಿ ಭಾರೀ ಗಾಳಿ ಮಳೆ ಹಿನ್ನೆಲೆ ಹೊಳೆ ತೊರೆಗಳೆಲ್ಲಾ ತುಂಬಿ ಹರಿಯುತ್ತಿದೆ. ಮತ್ತೊಂದೆಡೆ ತಗ್ಗು ಪ್ರದೇಶದ ಅಡಿಕೆ ತೋಟಗಳು ಜಲಾವೃತವಾಗಿದೆ.
ಪಶ್ಚಿಮ ಘಟ್ಟ ಪ್ರದೇಶಗಳಲ್ಲೂ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ನೇತ್ರಾವತಿ ನದಿಯೂ ಭೋರ್ಗರೆದು ಹರಿಯುತ್ತಿದೆ. ಈ ಹಿನ್ನೆಲೆ ನದಿಗೆ ಇಳಿಯದಂತೆ ಭಕ್ತರಿಗೆ ಎಚ್ಚರಿಕೆ ನೀಡಲಾಗಿದೆ. ಆದರೂ ಎಚ್ಚರಿಕೆಯನ್ನೂ ಲೆಕ್ಕಿಸದೆ ಯಾತ್ರಾರ್ಥಿಗಳು ನದಿಗೆ ಇಳಿಯುತ್ತಿದ್ದು, ಮೈಕ್ ಮೂಲಕ ಜನರನ್ನು ಎಚ್ಚರಿಸುವ ಕಾರ್ಯ ಮಾಡಲಾಗಿದೆ. ನದಿ ನೀರಿನ ಮಟ್ಟ ಏರಿಕೆ ಹಿನ್ನಲೆ ಮುಳುಗಡೆಯ ಭೀತಿಯಲ್ಲಿ ನೇತ್ರಾವತಿ ಸ್ನಾನಘಟ್ಟ ತಲುಪಿದೆ.
ಜಿಲ್ಲೆಯ ಪಲ್ಗುಣಿ ನದಿಯಲ್ಲೂ ನೀರಿನ ಹರಿವು ಹೆಚ್ಚಳವಾಗಿದೆ. ಮಂಗಳೂರು ನಗರ ಹೊರವಲಯದ ಅದ್ಯಪಾಡಿಯ ಮುಗೇರ ಕುದ್ರು ಪ್ರದೇಶ ಜಲಾವೃತವಾಗಿದೆ. ಮುಗೇರ ಕುದ್ರು ಪ್ರದೇಶವನ್ನು ಪಲ್ಗುಣಿ ನದಿ ನೆರೆ ನೀರು ಆವರಿಸಿದೆ. ಧಾರಾಕಾರ ಮಳೆಯಿಂದಾಗಿ ಫಲ್ಗುಣಿ ನದಿ ನೀರಿನ ಪ್ರಮಾಣ ಹೆಚ್ಚಳದಿಂದ ನೆರೆ ನೀರು ಮುಗೇರುಕುದ್ರು ಪ್ರದೇಶಕ್ಕೆ ನುಗ್ಗಿದೆ. ಪಲ್ಗುಣಿ ನದಿಗೆ ಅವೈಜ್ಞಾನಿಕ ಡ್ಯಾಮ್ ನಿರ್ಮಾಣದಿಂದ ನೀರು ಸರಾಗವಾಗಿ ಹರಿದು ಹೋಗದೆ ಮುಗೇರು ಕುದ್ರು ಪ್ರದೇಶಕ್ಕೆ ನೀರು ನುಗ್ಗುತ್ತಿದೆ. ಇಲ್ಲಿನ ಜನರು ಕಳೆದ ಹತ್ತು ವರ್ಷಗಳಿಂದ ಇದೇ ಎದುರಿಸುತ್ತಿದ್ದು, ಮತ್ತೊಂದೆಡೆ ಪ್ರತಿ ಮಳೆಗಾಲದಲ್ಲೂ ಮುಗೇರು ಕುದ್ರು ಪ್ರದೇಶ ಜಲಾವೃತವಾಗುತ್ತಿದೆ.











Click it and Unblock the Notifications