ಭತ್ತ ಬೆಳೆವ ಬೆಳ್ತಂಗಡಿ ತಾಲೂಕಿನ ಈ ಕೃಷಿ ಕುಟುಂಬಗಳ ಸ್ಥಿತಿ ಕರುಣಾಜನಕ
ಮಂಗಳೂರು, ಜುಲೈ 13: ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನರು ದಿಕ್ಕು ತೋಚದಂತಾಗಿದ್ದಾರೆ. ಇನ್ನೊಂದೆಡೆ ಮಳೆಯ ಆರ್ಭಟದಿಂದ ದಕ್ಷಿಣ ಕನ್ನಡ ಜಿಲ್ಲೆಯ ಭತ್ತದ ಕೃಷಿಕರಿಗೆ ದೊಡ್ಡ ಹೊಡೆತವೇ ಬಿದ್ದಿದೆ. ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಪ್ರದೇಶದ ಭತ್ತದ ಕೃಷಿ ನಡೆಸುತ್ತಿರುವ 15 ಕುಟುಂಬಗಳಿಗೆ ಈ ಬಾರಿ ಕೃಷಿ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ.
ಆಗುಂಬೆಯಲ್ಲಿ ಮತ್ತೆ ಗುಡ್ಡ ಕುಸಿತ, ವಾಹನ ಸಂಚಾರಕ್ಕೆ ತೊಂದರೆ?
ಕಾಶಿಪಟ್ನದ ಈ ಕುಟುಂಬಗಳು ಸುಮಾರು 25 ಎಕರೆ ಪ್ರದೇಶದಲ್ಲಿ ಭತ್ತದ ಕೃಷಿ ಮಾಡುತ್ತಿವೆ. ಆದರೆ ಈ ಬಾರಿ ಸುರಿದ ಭಾರೀ ಮಳೆಯಿಂದಾಗಿ ಗದ್ದೆ ಪಕ್ಕದಲ್ಲಿ ಹರಿಯುವ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ಹಾಗೂ ಈ ಹೊಳೆಗೆ ಹೊಸದಾಗಿ ನಿರ್ಮಿಸಿದ ಕಿಂಡಿ ಅಣೆಕಟ್ಟಿನಿಂದಾಗಿ ಕೃಷಿಕರು ಈ ಸಂಕಷ್ಟ ಅನುಭವಿಸುವಂತಾಗಿದೆ.
ಈ ಹೊಳೆಗೆ ಸೇತುವೆಯನ್ನು ನಿರ್ಮಿಸಬೇಕೆಂದು ಸ್ಥಳೀಯರು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಈ ಹಿಂದೆ ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಹೊಳೆಗೆ ಸೇತುವೆಯ ಬದಲು ಕಿಂಡಿ ಅಣೆಕಟ್ಟನ್ನು ಕಟ್ಟಲಾಗಿತ್ತು. ಆದರೆ ಈ ಕಿಂಡಿ ಅಣೆಕಟ್ಟಿನಲ್ಲಿ ತುಂಬಿದ ಕಸ- ಕಡ್ಡಿಗಳಿಂದಾಗಿ ನೀರಿನ ಹರಿವು ಸಮರ್ಪಕವಾಗಿರದ ಕಾರಣ ನೆರೆ ನೀರು ಕೃಷಿ ಗದ್ದೆಗಳಿಗೆ ನುಗ್ಗುತ್ತಿದೆ.
ಅಲ್ಲದೆ ಭಾರೀ ಮಳೆಯಿಂದಾಗಿ ಹೊಳೆಯ ಕಟ್ಟೆಯೂ ಒಡೆದು, ಪ್ರವಾಹದ ನೀರು ಇದೀಗ ಭತ್ತದ ಗದ್ದೆಯನ್ನು ಸೇರುತ್ತಿದೆ. ನೆಡಲು ಸಿದ್ಧವಾದ ಭತ್ತದ ಪೈರುಗಳು ಅಂಗಳದಲ್ಲೇ ಕೊಳೆಯುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಪ್ರತಿ ವರ್ಷ ಎರಡರಿಂದ ಮೂರು ಬೆಳೆ ಮಾಡಿ, ಜೀವನ ಸಾಗಿಸುತ್ತಿದ್ದ ಈ ಕುಟುಂಬಗಳಿಗೆ ಈಗ ದಿಕ್ಕು ತೋಚದಂತಾಗಿದೆ.