ಪತ್ರಕರ್ತರ ಕಲ್ಯಾಣ ಕಾರ್ಯಕ್ರಮಗಳಿಗೆ ಸರ್ಕಾರದಿಂದ ನೆರವು: ಕುಮಾರಸ್ವಾಮಿ
ಮಂಗಳೂರು, ಅಕ್ಟೋಬರ್ 15: ಪತ್ರಕರ್ತರ ಕಲ್ಯಾಣಕ್ಕೆ ನೆರವಾಗುವ ಎಲ್ಲಾ ಯೋಜನೆಗಳಿಗೆ ರಾಜ್ಯ ಸರಕಾರ ಸಕಲ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಭಾನುವಾರ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ "ಬ್ರಾಂಡ್ ಮಂಗಳೂರು" ಯೋಜನೆ ಹಾಗೂ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.
ಪತ್ರಕರ್ತರಿಗೆ ನಿವೇಶನ, ಬಸ್ ಪಾಸ್, ಅಧ್ಯಯನ ಪ್ರವಾಸ, ಕುಟುಂಬ ಪ್ರವಾಸ , ಅರೋಗ್ಯ ವಿಮೆ, ಪಿಂಚಣಿ ಒದಗಿಸುವುದು ಸರಕಾರಕ್ಕೆ ದೊಡ್ಡ ವಿಷಯವಲ್ಲ. ಈ ಬಗ್ಗೆ ಪತ್ರಕರ್ತರ ಸಂಘ ಸಲ್ಲಿಸಿರುವ ಮನವಿ ಪರಿಗಣಿಸಿ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಸಾಲಮನ್ನಾ ಹಾಗೂ ರಾಜ್ಯದ ಅಭಿವೃದ್ಧಿಗೆ ಸಂಬಂಧವಿಲ್ಲ
ರಾಜ್ಯ ಸರಕಾರ ರೈತರಲ್ಲಿ ನೆಮ್ಮದಿ ತರಲು ಸಾಲಮನ್ನಾ ಯೋಜನೆ ಜಾರಿಗೆ ತಂದಿದ್ದು, ಇದರಿಂದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಯಾವುದೇ ತೊಂದರೆಯಾಗಿಲ್ಲ. ಸರಕಾರದ ಬೊಕ್ಕಸದಲ್ಲಿ ಸಾಕಷ್ಟು ಹಣವಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಸಾಲ ಮನ್ನಾದಿಂದ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕೊರತೆಯಾಗಿದೆ ಎಂಬುದು ಕೇವಲ ಮಿಥ್ಯ. ರಾಜ್ಯ ಸರಕಾರದ ಚಾಲ್ತಿ ಖಾತೆಯಲ್ಲಿ 10 ಸಾವಿರ ಕೋಟಿ ರೂ.ಗಳಿಗೂ ಮಿಕ್ಕಿ ಮೊತ್ತವಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಬ್ಯಾಂಕ್ಗಳಿಂದ ರೈತರಿಗೆ ನೋಟಿಸ್ ಬಂದರೆ ಕ್ರಮ
ಬ್ಯಾಂಕ್ ಗಳು ರೈತರ ಸಾಲ ವಸೂಲಾತಿ ನೆಪದಲ್ಲಿ ಅವರಿಗೆ ನೋಟೀಸ್ ಜಾರಿ ಮಾಡಿ ಭಯ ಹುಟ್ಟಿಸಿದರೆ ಸಹಿಸಲಾಗುವುದಿಲ್ಲ. ಮಂಗಳೂರು ಅಭಿವೃದ್ದಿಗೆ ರಾಜ್ಯ ಸರ್ಕಾರ ಎಲ್ಲ ನೆರವು ನೀಡಲಿದೆ. ಆದರೆ, ಕೈಗಾರಿಕೆ ಹೆಸರಿನಲ್ಲಿ ಪ್ರಕೃತಿಯ ಮೇಲೆ ಹಾನಿಯಾಗುವ ಯೋಜನೆ ಜಾರಿಗೆ ತರುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿಸೋಜ, ಬಿ.ಎಂ. ಫಾರೂಖ್, ಮಾಜಿ ಸಚಿವ ರಮಾನಾಥ ರೈ, ಮೇಯರ್ ಭಾಸ್ಕರ್, ಮಾಜಿ ಶಾಸಕರಾದ ಮೊಹಿದೀನ್ ಬಾವಾ, ಜೆ.ಆರ್. ಲೋಬೋ, ಶಕುಂತಳಾ ಶೆಟ್ಟಿ, ಯೋಗೀಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ ಪಂಚಾಯ್ತಿ ನನ್ನ ಮನೆ ಕೆಡವಿದೆ
ಬಂಟ್ವಾಳ ತಾಲೂಕಿನ ಮೇರೆಮಜಲು ಗ್ರಾಮದ ವಿಜಯಾ ಎಂಬ ಮಹಿಳೆಯು, ತನ್ನ ವಾಸದ ಮನೆಯನ್ನು ಸ್ಥಳೀಯ ಗ್ರಾಮ ಪಂಚಾಯತ್ ಕೆಡವಿ ಹಾಕಿದ್ದು, ತನಗೆ ಯಾವುದೇ ನಿವೇಶನ ನೀಡದೆ ಬೀದಿಗೆ ಬಿದ್ದಿರುವುದಾಗಿ ಮುಖ್ಯಮಂತ್ರಿಗಳಿಗೆ ಮೊರೆ ಇಟ್ಟರು. ಈ ಬಗ್ಗೆ ತಕ್ಷಣವೇ ಕ್ರಮಕೈಗೊಳ್ಳಲು ಸಿಎಂ ಅಧಿಕಾರಿಗಳಿಗೆ ನಿರ್ದೇಶಿಸಿದರು.
ನಿವೃತ್ತ ಶಿಕ್ಷಕರೊಬ್ಬರು ತನ್ನ ಮಗನಿಗೆ ಸೂಕ್ತ ಉದ್ಯೋಗ ಒದಗಿಸಲು ಮನವಿ ಮಾಡಿದರು.
ಕದ್ರಿ ಶಿವಭಾಗ್ ನಲ್ಲಿ ನಡೆದ ಶಾಸಕ ಭೋಜೇಗೌಡ ಅವರ ಕಚೇರಿ ಉದ್ಘಾಟನೆ ಬಳಿಕ ಮುಖ್ಯಮಂತ್ರಿಗಳು ನೇರವಾಗಿ ಸಾರ್ವಜನಿಕರನ್ನು ಭೇಟಿಯಾಗಿ, ಸಾವಧಾನದಿಂದಲೇ ಅಹವಾಲು ಆಲಿಸಿದರು.

ಅಶಕ್ತರ ನೋವಿಗೆ ಸ್ಪಂಧಿಸಿದ ಎಚ್ಡಿಕೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಂದು ಆಗಮಿಸಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲೆಯ ಹಲವು ನಾಗರೀಕರ ಅಹವಾಲನ್ನು ಆಲಿಸಿ, ಅವರ ನೋವುಗಳಿಗೆ ಪರಿಹಾರ ಒದಗಿಸಿದರು.
ಮುಖ್ಯಮಂತ್ರಿಗಳು ಇಂದು ತಾವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಹೊರಹೋಗುವಾಗ ತನಗಾಗಿ ಅರ್ಜಿ ಹಿಡಿದು ಕಾದು ಕುಳಿತಿದ್ದ ಹಿರಿಯ ನಾಗರೀಕರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಹಲವು ನಾಗರೀಕರಿಂದ ನೇರವಾಗಿ ಅಹವಾಲು ಆಲಿಸಿದರು. ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಬಹುದಾದ ಹಲವು ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇನ್ನೂ ಕೆಲವು ನಾಗರೀಕರಿಗೆ ಅವರ ಸಮಸ್ಯೆಗಳಿಗೆ ಬೆಂಗಳೂರಿಗೆ ಬಂದು ತನ್ನನ್ನು ಭೇಟಿಯಾಗುವಂತೆ ಸೂಚಿಸಿದರು.
ಪ್ರಸ್ತುತ ಮಂಗಳೂರು ಆಕಾಶಭವನದಲ್ಲಿ ನೆಲೆಸಿರುವ ಕೊಪ್ಪಳ ಜಿಲ್ಲೆಯ ಮೂಲದ ಪುಷ್ಪಾ ಎಂಬವರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ನ ಮಗಳು ಸುಷ್ಮಿತಾಳ ಚಿಕಿತ್ಸೆಗೆ ಸಾಕಷ್ಟು ವೆಚ್ಚವಿದ್ದು, ನೆರವು ನೀಡಲು ಸಿಎಂಗೆ ಮನವಿ ಸಲ್ಲಿಸಿದರು. ಪ್ರಸಕ್ತ ಬೆಸೆಂಟ್ ಕಾಲೇಜ್ನಲ್ಲಿ ಪಿಯುಸಿ ಕಲಿಯುತ್ತಿರುವ ಸುಷ್ಮಿತಾ ಕ್ರೀಡೆಯಲ್ಲಿ ಸಾಕಷ್ಟು ಬಹುಮಾನ ಪಡೆದಿದ್ದು, ಅದರ ಸರ್ಟಿಫಿಕೇಟ್ ಗಳನ್ನು ತಾಯಿ ಸಿಎಂಗೆ ತೋರಿಸಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಕೂಡಲೇ ಸುಷ್ಮಿತಾಳ ಚಿಕಿತ್ಸೆ ವೆಚ್ಚದ ಅಂದಾಜು ಪಟ್ಟಿ ಪಡೆದು ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.












Click it and Unblock the Notifications