ತನ್ವೀರ್ ಸೇಠ್ ರಾಜೀನಾಮೆಗೆ ಕುಮಾರಸ್ವಾಮಿ ಆಗ್ರಹ
ಸಾರ್ವಜನಿಕ ವೇದಿಕೆಯಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿರುವ ಆರೋಪವನ್ನು ಎದುರಿಸುತ್ತಿರುವ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ರಾಜೀನಾಮೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ
ಮಂಗಳೂರು, ನವೆಂಬರ್ 13 : ಸಾರ್ವಜನಿಕ ವೇದಿಕೆಯಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿರುವ ಆರೋಪವನ್ನು ಎದುರಿಸುತ್ತಿರುವ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ರಾಜೀನಾಮೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ರಾಜ್ಯ ವಿಧಾನಸಭಾ ಕಲಾಪದ ಸಂದರ್ಭದಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ್ದ ಮೂವರು ಸಚಿವರು ರಾಜೀನಾಮೆ ನೀಡಿದಂತೆ ತನ್ವೀರ್ ಸೇಠ್ ರಾಜೀನಾಮೆಯೂ ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಚಿವರ ರಾಜೀನಾಮೆ ಪಡೆಯಬೇಕೆಂದು ಕುಮಾರಸ್ವಾಮಿ ಹೇಳಿದರು.
ಶನಿವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶ್ಲೀಲ ಚಿತ್ರ ವೀಕ್ಷಣೆಯ ಆರೋಪ ಬಂದಾಗಲೇ ತನ್ವೀರ್ ಸೇಠ್ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುವಲ್ಲಿ ಎಡವಿದ್ದಾರೆ. ಆ ಬಳಿಕವೂ ಪದೇ ಪದೇ ಹೇಳಿಕೆಗಳನ್ನು ಬದಲಿಸುತ್ತಿದ್ದಾರೆ. ವಿಪಕ್ಷಗಳು ಸಚಿವರ ರಾಜಿನಾಮೆಗೆ ಆಗ್ರಹಿಸಿದಾಗ, ಮುಖ್ಯಮಂತ್ರಿಗಳು ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿದ್ದಾರೆ. ಈ ಪ್ರಕರಣದಲ್ಲಿ ವರದಿ ತರಿಸಲು ಎಷ್ಟು ದಿನ ಬೇಕು ಎಂದು ಪ್ರಶ್ನಿಸಿದರು.

ಅಶ್ಲೀಲ ಚಿತ್ರ ವೀಕ್ಷಣೆಯ ಪ್ರಸಾರ ಮಾಡಿದ ಮಾಧ್ಯಮದ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸುವುದಾಗಿ ಸಚಿವ ಸೇಠ್ ಹೇಳಿರುವುದು ವರದಿಯಾಗಿದೆ. ಯಾರೇ ಆಗಲಿ ತಮ್ಮ ವಿರುದ್ಧ ಆರೋಪ ಬಂದಾಗ, ಅದನ್ನು ನಿರಾಕರಿಸುವುದು ಅಥವಾ ಎದುರಿಸುವ ಕೆಲಸ ಮಾಡಬೇಕು. ಅದು ಬಿಟ್ಟು ಮಾಧ್ಯಮಗಳ ಮೇಲೆ ಮೊಕದ್ದಮೆ ದಾಖಲಿಸಲು ಮುಂದಾದರೆ ಅಂತಹವರೇ ಬೆಲೆ ತೆರಬೇಕಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
ಖೋಟಾ ನೋಟುಗಳ ನಿಯಂತ್ರಣಕ್ಕೆ ನೋಟುಗಳ ಬದಲಾವಣೆಗೆ ಪ್ರಧಾನ ಮಂತ್ರಿ ಕೈಗೊಂಡ ಕ್ರಮ ಸರಿಯಾಗಿಯೇ ಇದೆ. ಆದರೆ ಸಾಕಷ್ಟು ಪ್ರಮಾಣದಲ್ಲಿ ಹೊಸ ನೋಟುಗಳನ್ನು ದಾಸ್ತಾನು ಇರಿಸಿದ ಬಳಿಕವೇ ಹಳೆ ನೋಟುಗಳ ಚಲಾವಣೆಯನ್ನು ಸ್ಥಗಿತಗೊಳಿಸಬೇಕಿತ್ತು. ಈ ದಿಢೀರ್ ಕ್ರಮದಿಂದ ಸಾಮಾನ್ಯ ವರ್ಗ ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ ಎಂದರು.
ಟಿಪ್ಪು ಜಯಂತಿ ವಿಷಯದಲ್ಲಿ ರಾಷ್ಟ್ರೀಯ ಪಕ್ಷಗಳಾಗಿರುವ ಬಿಜೆಪಿ ಮತ್ತು ಆಡಳಿತ ಪಕ್ಷ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಾ ಕಾಲಹರಣ ಮಾಡುತ್ತಿದೆ. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸುವ ಬದಲು ಈ ಎರಡೂ ಪಕ್ಷಗಳು ಜಯಂತಿ ಆಚರಣೆ ಮತ್ತು ವಿರೋಧಗಳಲ್ಲಿ ಕಾಲಹರಣ ಮಾಡುತ್ತಿದೆ. ರಾಜ್ಯದ ಅಭಿವೃದ್ಧಿಯಲ್ಲಿ ಹೆಚ್ಚಿನ ಜವಾಬ್ದಾರಿ ಹೊಂದಿರಬೇಕಾಗಿರುವ ಈ ರಾಷ್ಟ್ರೀಯ ಪಕ್ಷಗಳು ತಮ್ಮ ಸ್ವಾರ್ಥ ಸಾಧನೆ ಮತ್ತು ಆಕಾಂಕ್ಷೆಗಳಿಗೆ ಪೈಪೋಟಿಗಳಿದಂತಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೊಲೆ, ಗಲಭೆ ಪ್ರಕರಣಗಳು ರಾಜಕೀಯ ಬಣ್ಣ ಪಡೆಯುತ್ತಿರುವುದು ದುರದೃಷ್ಟಕರ. ಕೊಲೆಗಾರನಿಗೆ ಯಾರೇ ಆಗಿದ್ದರೂ ಕಠಿಣ ಶಿಕ್ಷೆ ವಿಧಿಸುವಂತಾಗಬೇಕು. ಪಕ್ಷ, ಜಾತಿ, ಧರ್ಮದ ಆಧಾರದಲ್ಲಿ ಆತನನ್ನು ರಕ್ಷಿಸುವಂತಾಗಬಾರದು. ಜನಸಾಮಾನ್ಯನ ಕೊಲೆಯೂ ಕೋಮು ಬಣ್ಣ ಪಡೆಯುತ್ತಿದೆ. ಜನಮನಗಳಲ್ಲಿ ಉದ್ರೇಕಗಳನ್ನು ಸೃಷ್ಟಿಸಲಾಗುತ್ತಿದೆ. ಪ್ರಸ್ತುತ ಘಟನೆಗಳಿಂದ ರಾಜ್ಯದಲ್ಲಿ ಗೃಹ ಇಲಾಖೆ ಇದೆಯೋ, ಇಲ್ವೋ ಎಂಬ ಅನುಮಾನ ಮೂಡುತ್ತಿದೆ ಎಂದು ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ಅಮರನಾಥ ಶೆಟ್ಟಿ, ಜೆಡಿಎಸ್ ಮುಖಂಡ ಬಿ.ಎಂ.ಫಾರೂಕ್, ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ, ಕಾರ್ಯಾಧ್ಯಕ್ಷ ಎಸ್.ಪಿ.ಚೆಂಗಪ್ಪ, ನಗರಾಧ್ಯಕ್ಷ ಎ.ವಸಂತ ಪೂಜಾರಿ, ಅಜೀಝ್ ಕುದ್ರೋಳಿ, ರಮೀಝಾ ನಾಸೀರ್, ರತ್ನಾಕರ ಸುವರ್ಣ, ಮುನೀರ್ ಮುಕ್ಕಚ್ಚೇರಿ, ಅಕ್ಷಿತ್ ಸುವರ್ಣ, ನಾಸಿರ್ ಬಂದರ್, ಆರ್.ಧನರಾಜ್, ಇಕ್ಬಾಲ್ ಮುಲ್ಕಿ ಮೊದಲಾದವರು ಉಪಸ್ಥಿತರಿದ್ದರು.












Click it and Unblock the Notifications