ಬರಿಗಾಲಿನಲ್ಲೇ ಬಂದು 'ಪದ್ಮಶ್ರೀ' ಸ್ವೀಕರಿಸಿದ ಅಕ್ಷರಸಂತ ಹರೇಕಳ ಹಾಜಬ್ಬ
ನವದೆಹಲಿ, ನವೆಂಬರ್ 8: ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಅಕ್ಷರಸಂತ ಹರೇಕಳ ಹಾಜಬ್ಬ ಇಂದು (ಸೋಮವಾರ) ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು.
ಪ್ರಶಸ್ತಿ ಪ್ರದಾನ ಸಭಾಂಗಣ ದರ್ಬಾರ್ ಹಾಲ್ನಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ಹರೇಕಳ ಹಾಜಬ್ಬ ಹೆಸರು ಕರೆಯುತ್ತಿದ್ದಂತೆ ಬರಿಗಾಲಿನಲ್ಲಿ ಆಗಮಿಸಿದರು. ರಾಷ್ಟ್ರಪತಿ ಬಳಿ ಹೋಗುವಾಗ, ಅವರ ಮುಂದೆ ನಿಂತು ಪ್ರಶಸ್ತಿ ಸ್ವೀಕರಿಸುವ ವೇಳೆ ಹಾಗೂ ಮರಳಿ ಸ್ವಸ್ಥಾನಕ್ಕೆ ಬರುವಾಗಲೂ ಕೈ ಮುಗಿದೇ ಇದ್ದರು. ಇದು ಅವರ ಮುಗ್ಧತೆಯನ್ನು ಪ್ರದರ್ಶಿಸುತ್ತಿತ್ತು.
2020ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿತ್ತು. ಮಾರ್ಚ್ ತಿಂಗಳಿನಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಬೇಕಾಗಿತ್ತು, ಆದರೆ ಕೊರೊನಾ ಲಾಕ್ಡೌನ್ ಕಾರಣದಿಂದ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು.
ಗ್ರಾಮೀಣ ಮಕ್ಕಳಿಗೆ ಉಚಿತ ಶಿಕ್ಷಣ ಹರೇಕಳ ಹಾಜಬ್ಬರು ಕಳೆದ 21 ವರ್ಷಗಳಿಂದ ತನ್ನೂರು ಹರೇಕಳದ ನ್ಯೂ ಪಡ್ಪು ಗ್ರಾಮದಲ್ಲಿ ಗ್ರಾಮೀಣ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಇದಕ್ಕಾಗಿ ಯಾರ ಮುಂದೆಯೂ ಕಾಡಿ ಬೇಡದೇ ಮಂಗಳೂರು ನಗರದಲ್ಲಿ ಕಿತ್ತಳೆ ಹಣ್ಣನ್ನು ಮಾರಿ, ಶಾಲೆಯ ಖರ್ಚುನ್ನು ನೋಡಿಕೊಳ್ಳುತ್ತಿದ್ದಾರೆ. ಸಾಮಾನ್ಯರಲ್ಲಿ ಅತೀ ಸಾಮಾನ್ಯರಂತೆ ಇರುವ ಹರೇಕಳ ಹಾಜಬ್ಬರ ವ್ಯಕ್ತಿತ್ವಕ್ಕೆ ಎಲ್ಲರೂ ಮಾರುಹೋಗಿದ್ದಾರೆ. 2004ರಲ್ಲಿ ಹರೇಕಳ ಹಾಜಬ್ಬರ ಶಿಕ್ಷಣ ಪ್ರೀತಿಯನ್ನು ಮೊದಲ ಬಾರಿಗೆ ಗುರುತಿಸಲಾಯಿತು. ಆ ಬಳಿಕ ರಾಷ್ಟ್ರದ ವಿವಿಧ ಮಾಧ್ಯಮಗಳು ಹರೇಕಳ ಹಾಜಬ್ಬರನ್ನು ಗುರುತಿಸಿ ಗೌರವಿಸಿದೆ.
2020ರ ಗಣರಾಜ್ಯೋತ್ಸವದಂದು ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಬಗ್ಗೆ ದೆಹಲಿಯಿಂದ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ಹಿಂದಿಯಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಬಗ್ಗೆ ಮಾಹಿತಿ ಹೇಳಿದ್ದರು. ಆದರೆ ಹಿಂದಿ ಅರ್ಥವಾಗದ ಹಾಜಬ್ಬರಿಗೆ ಸಂಜೆಯವರೆಗೂ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ವಿಚಾರವೇ ಗೊತ್ತಾಗಿಲ್ಲ. ಆ ಬಳಿಕ ಮಾಧ್ಯಮದ ಪ್ರತಿನಿಧಿಗಳು ಹಾಜಬ್ಬರಿಗೆ ಶುಭಾಶಯ ಸಲ್ಲಿಸಿದಾಗ ಹಾಜಬ್ಬರಿಗೆ ತನಗೆ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ತಿಳಿದುಬಂದಿತ್ತು.
ಕಿತ್ತಳೆ ಹಣ್ಣು ಮಾರಾಟ ಮಾಡುವ ಕಾಯಕ
ಕಿತ್ತಳೆ ಹಣ್ಣು ಮಾರಾಟ ಮಾಡುವ ಕಾಯಕ 2004ರಲ್ಲಿ ಕನ್ನಡ ಪತ್ರಿಕೆಯೊಂದು ಹಾಜಬ್ಬರನ್ನು ವರ್ಷದ ವ್ಯಕ್ತಿ ಎಂದು ಪ್ರಶಸ್ತಿ ನೀಡಿ ಗುರುತಿಸುವ ಮೂಲಕ ಹಾಜಬ್ಬ ಬೆಳಕಿಗೆ ಬಂದಿದ್ದರು. ಬಳಿಕ ದೆಹಲಿಯ ಸಿಎನ್ಎನ್- ಐಬಿಎನ್ ರಿಯಲ್ ಹೀರೋ ಪ್ರಶಸ್ತಿ ನೀಡಿ ಗೌರವಿಸಿತ್ತು. ಮಂಗಳೂರು ವಿಶ್ವವಿದ್ಯಾನಿಲಯ ಇರುವ ಕೊಣಾಜೆ ಸಮೀಪದ ಹರೇಕಳದಲ್ಲಿ ಗ್ರಾಮೀಣ ಮಕ್ಕಳಲ್ಲಿ ಶಾಲೆಯ ಸೌಲಭ್ಯ ಇರಲಿಲ್ಲ.
ಮಂಗಳೂರಿನ ಕೇಂದ್ರ ಪ್ರದೇಶ ಸ್ಟೇಟ್ ಬ್ಯಾಂಕ್ ಸರ್ಕಲ್ನಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡುವ ಕಾಯಕ ಮಾಡುತ್ತಿದ್ದ ಹಾಜಬ್ಬ ತಾವೇ ಶಾಲೆಯೊಂದನ್ನು ತನ್ನೂರಿನಲ್ಲಿ ನಿರ್ಮಿಸಿದ್ದರು. ಕಿತ್ತಳೆ ಮಾರಾಟ ಮಾಡುತ್ತಿದ್ದಾಗ ವಿದೇಶಿ ಮಹಿಳೆಯ ಆಂಗ್ಲ ಭಾಷೆಯ ಪ್ರಶ್ನೆಗೆ ಉತ್ತರ ನೀಡಲಾಗದ ಹಾಜಬ್ಬರಿಗೆ ಶಿಕ್ಷಣದ ಮಹತ್ವ ಅರಿವಾಗಿತ್ತು. ಅಂದೇ ಶಾಲೆ ಕಟ್ಟುವ ನಿರ್ಣಯ ಮಾಡಿದರು ಹಾಜಬ್ಬ. ನಿಸ್ವಾರ್ಥ ಸಮಾಜ ಸೇವಕ, ಶಿಕ್ಷಣ ಪ್ರೇಮಿ, ಅಕ್ಷರಸಂತ ಹರೇಕಳ ಹಾಜಬ್ಬರ ಮಡಿಲಿಗೆ ಕೊನೆಗೂ ಪದ್ಮಶ್ರೀ ಪ್ರಶಸ್ತಿ ಸೇರಿದೆ.
Recommended Video
ಎಷ್ಟೇ ಸಮ್ಮಾನ, ಪ್ರಶಸ್ತಿ, ಗೌರವಗಳು ಅರಸಿಕೊಂಡು ಬಂದರೂ ಕಿಂಚಿತ್ತೂ ಬದಲಾವಣೆ ಕಾಣದ ಹರೇಕಳ ಹಾಜಬ್ಬರ ವ್ಯಕ್ತಿತ್ವಕ್ಕೆ ಪರಮ ಗೌರವ ಲಭಿಸಲಿದೆ. ಎರಡು ಬಟನ್ ತೆಗೆದ, ಅರ್ಧ ಕೈ ಮಡಚಿದ ಬಿಳಿ ಅಂಗಿ, ಬಿಳಿ ಪಂಚೆ, ಕಾಲಿಗೊಂದು ಹವಾಯಿ ಚಪ್ಪಲಿ, ಹಳೆಯ ಚಿಕ್ಕ ಮೊಬೈಲ್ ಇದನ್ನಷ್ಟೇ ತನ್ನ ಆಸ್ತಿಯನ್ನಾಗಿಸಿರುವ ಹಾಜಬ್ಬರಿಗೆ ಮತ್ತಷ್ಟು ಪ್ರಶಸ್ತಿ ಅರಸಿ ಬರಲಿ. ಹಾಜಬ್ಬರಿಂದ ಮತ್ತಷ್ಟು ಬಡ ವಿದ್ಯಾರ್ಥಿಗಳ ಬಾಳು ಬೆಳಗಲಿ ಅನ್ನುವುದು ನಮ್ಮ ಆಶಯ.