ರೈಲ್ವೆ ಬಜೆಟ್ ನಲ್ಲಿ ಸುಳ್ಯಕ್ಕೆ ಶುಭಸುದ್ದಿ ಇದೆಯಂತೆ
ಮಂಗಳೂರು, ಜೂ. 30 : ಸುಳ್ಯಕ್ಕೆ ಈ ಬಾರಿಯ ರೈಲ್ವೆ ಬಜೆಟ್ ನಲ್ಲಿ ಶುಭ ಸುದ್ದಿ ನೀಡುತ್ತೇನೆ ಎಂದು ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಭಾನುವಾರು ತವರು ಜಿಲ್ಲೆಗೆ ಆಗಮಿಸಿದ್ದ ಅವರು ತಾಯಿಯ ಯೋಗಕ್ಷೇಮ ವಿಚಾರಿಸಿದರು.
ಭಾನುವಾರ ಸಂಜೆ 4.30ರ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಡಿ.ವಿ.ಸದಾನಂದ ಗೌಡ ದಂಪತಿ, 5.30ರ ಸುಮಾರಿಗೆ ಹುಟ್ಟೂರು ಮಂಡೆಕೋಲಿನ ದೇವರಗುಂಡಕ್ಕೆ ಆಗಮಿಸಿ ತಾಯಿ ಕಮಲಾ (90) ಅವರ ಯೋಗಕ್ಷೇಮ ವಿಚಾರಿಸಿದರು. ಸುಮಾರು ಒಂದು ಗಂಟೆ ತಾಯಿಯೊಂದಿಗೆ ಕಳೆದ ಅವರು, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಸುಳ್ಯಕ್ಕೆ ಶುಭಸುದ್ದಿ ಬರಲಿದೆ : ಮಾಧ್ಯಮಗಳೊಂದಿಗೆ ಮಾತನಾಡಿದ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡರು, ರೈಲ್ವೆ ಬಜೆಟ್ ನಲ್ಲಿ ರಾಜ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಜೊತೆಗೆ ಸುಳ್ಯಕ್ಕೆ ಶುಭ ಸುದ್ದಿ ಬರಲಿದೆ ಎಂದು ಹೇಳಿದರು. [ಹೈಸ್ಪೀಡ್ ರೈಲು ಮೋದಿ ಅವರ ಕನಸು: ಡಿವಿಎಸ್]
ಯಾವ ಬೇಡಿಕೆ ಈಡೇರಿಸುತ್ತೀರಿ? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಜೆಟ್ ಮಂಡಿಸುವ ಮೊದಲು ಯಾವುದನ್ನು ಬಹಿರಂಗಪಡಿಸುವ ಹಾಗಿಲ್ಲ. ಬಜೆಟ್ ಮಂಡನೆ ದಿನ ಟಿವಿ ನೋಡಿ. ಸುಳ್ಯಕ್ಕೆ ಶುಭ ಸುದ್ದಿ ಬರಲಿದೆ ಎಂದರು.
ಈ ಬಾರಿಯ ರೈಲ್ವೆ ಬಜೆಟ್ ನಲ್ಲಿ ಹೊಸತನವಿದೆ. ದೇಶದ ಮೂಲೆ ಮೂಲೆಗೆ ರೈಲ್ವೆ ಜಾಲ ವಿಸ್ತರಿಸಲಾಗುವುದು. ರಾಜ್ಯದ ರೈಲ್ವೆ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಬಜೆಟ್ ನಲ್ಲಿ ಹೊಸ ಹೊಸ ತಂತ್ರಜ್ಞಾನ ಆಳವಡಿಸಿಕೊಳ್ಳಲು ಆದ್ಯತೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು. [ಮಂಗಳೂರು ಕೊಂಕಣ ರೈಲ್ವೆಗೆ ಸೇರ್ಪಡೆಯಾಗುವುದೇ?]
ಕರ್ನಾಟಕದಲ್ಲಿ ಹಿಂದೆ ಘೋಷಿಸಿದ್ದ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುತ್ತದೆ. ರೈಲ್ವೆ ಅಭಿವೃದ್ಧಿಗೆ ಸಂಪನ್ಮೂಲ ಸಂಗ್ರಹಿಸಲು ಸಾರ್ವಜನಿಕ ವಲಯ ಮತ್ತು ವಿದೇಶಿ ಬಂಡವಾಳ ಹೂಡಿಕೆಯ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಜಿಲ್ಲಾ ಪಂಚಾಯತಿ ಸದಸ್ಯ ನವೀನ್ ಕುಮಾರ್ ಮೇನಾಲ, ಸುರೇಶ ಕಣಿಮರಡ್ಕ ಮೊದಲಾದವರು ಸದಾನಂದ ಗೌಡರ ಜೊತೆ ಆಗಮಿಸಿದ್ದರು.












Click it and Unblock the Notifications