ಚೀನಿಕಾಯಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಭೂಪನ ಬಂಧನ
ಮಂಗಳೂರು, ಮೇ 19: ರಾಜ್ಯದಲ್ಲಿ ನೂತನ ಸರ್ಕಾರ ರಚನೆಗೆ ವಿಧಾನಸೌಧದಲ್ಲಿ ವಿಶ್ವಾಸಮತ ಯಾಚನೆಯ ಹೈಡ್ರಾಮ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಶಾಸಕರ ಅಕ್ರಮ, ಸಕ್ರಮ ಚಟುವಟಿಕೆಗಳ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ಈ ನಡುವೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೋರ್ವ ಚೀನಿಕಾಯಿಯೊಳಗೆ ಭಾರೀ ಪ್ರಮಾಣದಲ್ಲಿ ಗಾಂಜಾ ಅಡಗಿಸಿ ವಿದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದಾಗ ಭದ್ರತಾ ಸಿಬ್ಬಂದಿಗಳು ಬಂಧಿಸಿದ್ದಾರೆ.
ಕೊಲೆ ಯತ್ನ, ಗಾಂಜಾ ಮಾರಾಟ ಜಾಲದ ಪ್ರಮುಖ ಆರೋಪಿ ಸೆರೆ
ಬಂಧಿತ ವ್ಯಕ್ತಿ ತಸ್ಲೀಂ ಎಂದು ಗುರುತಿಸಲಾಗಿದ್ದು, ಈತನಿಂದ 10 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಅದರ ಮೌಲ್ಯ 1.50 ಲಕ್ಷ ರೂಪಾಯಿ. ಬಂಧಿತನನ್ನು ಬಂಟ್ವಾಳ ತಾಲೂಕಿನ ಕಲಾಯಿ ನಿವಾಸಿ ತಸ್ಲೀಂ ಎಂದು ಗುರುತಿಸಲಾಗಿದೆ.
ತಸ್ಲೀಂ ಮಂಗಳೂರಿನಿಂದ ದೋಹಾಕ್ಕೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಗಳು ತಸ್ಲೀಂ ಅವರ ಲಗೇಜ್ ಗಳನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಲಗೇಜ್ ನಲ್ಲಿ 4 ಚೀನಿಕಾಯಿಗಳು ಪತ್ತೆಯಾಗಿವೆ.
ಈ ಕುರಿತು ಅನುಮಾನ ವ್ಯಕ್ತಪಡಿಸಿದ ಭದ್ರತಾ ಸಿಬ್ಬಂದಿಗಳು ಚೀನಿಕಾಯಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಆಗ ಚೀನಿಕಾಯಿಗಳನ್ನು ಟೊಳ್ಳಾಗಿಸಿ ಅದರಲ್ಲಿ ಗಾಂಜಾ ತುಂಬಿರುವುದು ಪತ್ತೆಯಾಗಿದೆ.
ತಕ್ಷಣ ತಸ್ಲೀಂ ಅವರನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿಗಳು ನಂತರ ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ತಸ್ಲೀಂ ಅವರನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ದೋಹಾ ದಲ್ಲಿರುವ ಕೆಲವು ಗ್ರಾಹಕರಿಗಾಗಿ ಗಾಂಜಾ ಕೊಂಡೊಯ್ಯುತ್ತಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಾಗಿದೆ.