ಸಾಲ ತೀರಿಸಲು ನಕಲಿ 500 ರೂಪಾಯಿ ನೋಟ್ ಪ್ರಿಂಟ್: ಮಂಗಳೂರಿನಲ್ಲಿ ನಾಲ್ವರ ಬಂಧನ
ಮಂಗಳೂರು, ಆಗಸ್ಟ್ 20: ಮಾಡಿದ ಸಾಲ ತೀರಿಸಲಾಗದೇ ಸಾಲಗಾರರು ಏನೇನೋ ಮಾಡುತ್ತಾರೆ. ಕೆಲವರು ಕಷ್ಟಪಟ್ಟು ದುಡಿದು ಸಾಲ ತೀರಿಸಿದರೆ, ಇನ್ನೂ ಕೆಲವರು ಸಾಲ ತೀರಿಸಲಾಗದೇ ಸಾವಿಗೆ ಶರಣಾಗುತ್ತಾರೆ. ಆದರೆ ಇನ್ನೂ ಕೆಲವರು ಸಾಲ ತೀರಿಸಲು ಅನ್ಯಾಯದ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕಳ್ಳತನ, ದರೋಡೆ, ಸುಲಿಗೆ ಹೀಗೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ. ಆದರೆ ಇಲ್ಲೊಬ್ಬ ಆಸಾಮಿ ಮಾಡಿದ ಸಾಲ ತೀರಿಸಲು ನಕಲಿ ನೋಟುಗಳನ್ನೇ ಮುದ್ರಿಸಿದ್ದಾನೆ.
ಆಶ್ಚರ್ಯ ಎನಿಸಿದರೂ, ನಗು ಬಂದರೂ ಇದು ಸತ್ಯ. ಅದು ಕೂಡ ಹೊರ ರಾಜ್ಯದಲ್ಲಿ ನಡೆದಿರುವ ಘಟನೆಯಲ್ಲ. ನಮ್ಮ ಕರ್ನಾಟಕ ರಾಜ್ಯದ ಮಂಗಳೂರಿನಲ್ಲಿ ಈ ಘಟನೆ ನಡೆದಿದೆ. ನಕಲಿ ನೋಟು ಮುದ್ರಿಸುತ್ತಿದ್ದ ಆರೋಪದ ಮೇಲೆ ಮಂಗಳೂರಿನ ಹಂಪನಕಟ್ಟೆಯಲ್ಲಿ ಮಂಗಳೂರು ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೇರಳದ ಕಾಸರಗೋಡು ಮೂಲದ ವಿ. ಪ್ರಿಯೇಶ್ (38), ವಿನೋದ್ ಕುಮಾರ್ ಕೆ (33), ಅಬ್ದುಲ್ ಖಾದರ್ ಎಸ್.ಎಂ (58) ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಅಯೂಬ್ ಖಾನ್ (51) ನಕಲಿ ನೋಟು ಮುದ್ರಿಸಿ ಮಾರುಕಟ್ಟೆಯಲ್ಲಿ ವಿನಿಮಯ ಮಾಡುತ್ತಿದ್ದ ಆರೋಪಿಗಳು ಎಂದು ಗುರುತಿಸಲಾಗಿದೆ.
ಕಾಸರಗೋಡಿನಲ್ಲಿ ಪ್ರಿಂಟಿಂಗ್ ಪ್ರೆಸ್ ಹೊಂದಿದ್ದ ಆರೋಪಿ ಪ್ರಿಯೇಶ್ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲಾಗದೇ ಒದ್ದಾಡುತ್ತಿದ್ದ ಪ್ರಿಯೇಶ್ ಸಾಲ ಮರುಪಾವತಿಸಲು ನಕಲಿ ನೋಟು ಮುದ್ರಣ ಮಾಡಬೇಕೆಂದು ನಿರ್ಧರಿಸಿದ್ದಾನೆ. ಬಳಿಕ ಆನ್ಲೈನ್ನಲ್ಲಿ ಕಚ್ಚಾ ವಸ್ತುಗಳನ್ನು ಖರೀದಿಸಿ ಯೂಟ್ಯೂಬ್ ಮೂಲಕ ನಕಲಿ ನೋಟುಗಳನ್ನು ಮುದ್ರಸುವುದನ್ನು ಕಲಿತುಕೊಂಡಿದ್ದಾನೆ ಎನ್ನಲಾಗಿದೆ.

ಕಳೆದ ಮೂರು ತಿಂಗಳಿಂದ ಚೆರ್ಕಳದಲ್ಲಿರುವ ತನ್ನ ಪ್ರಿಂಟಿಂಗ್ ಪ್ರೆಸ್ನಲ್ಲಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಪ್ರಿಯೇಶ್, ಇತರ ಆರೋಪಿಗಳಾದ ವಿನೋದ್ ಕುಮಾರ್, ಅಬ್ದುಲ್ ಖಾದರ್, ಅಯೂಬ್ ಖಾನ್ ಸಹಾಯದ ಮೂಲಕ ನಕಲಿ ನೋಟುಗಳನ್ನು ಮಾರುಕಟ್ಟೆಯಲ್ಲಿ ಚಲಾವಣೆ ಮಾಡುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ನಕಲಿ ನೋಟುಗಳ ಚಲಾವಣೆಗಳ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಮಂಗಳೂರು ಪೊಲೀಸರು ಆರೋಪಿಗಳ ಚಲನವಲನಗಳಲ್ಲಿ ಗಮನ ಇರಿಸಿ ನಕಲಿ ನೋಟುಗಳ ಚಲಾವಣೆಗೆ ಬಂದ ಸಂದರ್ಭದಲ್ಲಿಯೇ ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಸದ್ಯ ನಾಲ್ವರನ್ನು ಬಂಧಿಸಲಾಗಿದ್ದು, 500 ರೂಪಾಯಿ ಮುಖಬೆಲೆಯ 2,13,500 ರೂಪಾಯಿ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.












Click it and Unblock the Notifications