ಸ್ವಚ್ಛತಾ ಆಭಿಯಾನದೊಂದಿಗೆ ಚುನಾವಣಾ ಪ್ರಚಾರ ಆರಂಭಿಸಿದ ಮದನ್
ಮಂಗಳೂರು, ಫೆಬ್ರವರಿ 6: ಕೋಮು ಸಂಘರ್ಷ, ರಾಜಕೀಯ ದೊಂಬರಾಟಕ್ಕೆ ಸಾಕ್ಷಿಯಾಗುತ್ತಿರುವ ಕಡಲ ತಡಿಯ ನಗರ ಮಂಗಳೂರಿನಲ್ಲಿ ಬದಲಾವಣೆ ತರುವ ದೃಷ್ಠಿಯಿಂದ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ರಾಜಕೀಯಕ್ಕೆ ದಾಪುಗಾಲಿಟ್ಟಿದ್ದಾರೆ.
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಇದೀಗ ಮದನ್ ವಿಶಿಷ್ಟ ರೀತಿಯ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಅವರು ಜನರೊಂದಿಗೆ ಬೆರೆತುಕೊಳ್ಳಲು ಜನಪರ ಕಾರ್ಯಕ್ರಮಗಳನ್ನು ಕೂಡಾ ಹಮ್ಮಿಕೊಳ್ಳುತ್ತಿದ್ದಾರೆ.
ಖಾಕಿ ಕಳಚಿಟ್ಟು ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ಮದನ್
ಮಂಗಳೂರು ನಗರದ ಬಂದರು ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿ ಬಜ್ಪೆ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದ ಮದನ್ ಇತ್ತೀಚೆಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶದ ಇಂಗಿತ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಸೇರಿ ಚುನಾವಣಾ ಕಣಕ್ಕೆ ಇಳಿಯಲು ಪ್ರಯತ್ನ ನಡೆಸಿದ್ದರು. ಆದರೆ ಆ ಪ್ರಯತ್ನ ಫಲಕಾಣದ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ.
ವಿವೇಕಾನಂದರೇ ಪ್ರೇರಣೆ
ಮೂಲತಃ ಕೊಡಗು ಜಿಲ್ಲೆಯವರಾಗಿರುವ ಮದನ್ ರಾಜಕೀಯಕ್ಕೆ ಕಾಲಿಡಲು ಪ್ರೇರಣೆ ಸ್ವಾಮಿ ವಿವೇಕಾನಂದರಂತೆ. ಪೊಲೀಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಒಮ್ಮೆಗೆ ಮಾಯವಾಗಿದ್ದ ಮದನ್ ಈಗ ಮತ್ತೆ ಒಂದಷ್ಟು ಯುವಕರ ಜತೆ ಕಾಣಿಸಿಕೊಂಡಿದ್ದಾರೆ.
ರಾಜಕೀಯ ಕೆಸರು ಸ್ವಚ್ಛಗೊಳಿಸುವ ಕಾಯಕ
ಈಗಾಗಲೇ ತಮ್ಮ ಚುನಾವಣಾ ಪ್ರಚಾರ ಆರಂಭಿಸಿರುವ ಮದನ್ ತಳಮಟ್ಟದಿಂದ ಕೆಲಸ ಮಾಡಿಕೊಂಡು ಜನರನ್ನು ತಲುಪುವ ಉದ್ದೇಶದಿಂದ ಹಾರೆ, ಪಿಕ್ಕಾಸು ಹಿಡಿದುಕೊಂಡು ರಾಜಕೀಯದಲ್ಲಿ ಮೆತ್ತಿಕೊಂಡಿರುವ ಕೆಸರನ್ನು ಸ್ವಚ್ಛಗೊಳಿಸುವ ಕಾಯಕದಲ್ಲೂ ತೊಡಗಿಸಿಕೊಂಡಿದ್ದಾರೆ.
ಹಿರಿಯರ ಮಾರ್ಗದರ್ಶನ ಯುವಕರ ತಂಡ
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಮಂಗಳೂರು ಮಹಾನಗರ ಪಾಲಿಕೆಯ 38 ವಾರ್ಡ್ ಗಳ ಜನರನ್ನು ತಲುಪಲು ಪ್ರತೀ ವಾರ್ಡ್ ನ ಆಯ್ದ ಜಾಗಗಳಲ್ಲಿ ಸ್ವಚ್ಛತಾ ಕಾರ್ಯ ಮತ್ತು ಎರಡು ದಿನಗಳ ಕಾಲ ಪ್ರಚಾರ ಕಾರ್ಯ ಕೈಗೊಳ್ಳಲು ಪ್ರಾರಂಭಿಸಿದ್ದಾರೆ. ಈ ಕಾರ್ಯಕ್ಕಾಗಿ ಹಿರಿಯರ ಮಾರ್ಗದರ್ಶನದೊಂದಿಗೆ ಯುವಕರ ಪಡೆಯನ್ನೂ ಕಟ್ಟಿಕೊಂಡಿದ್ದಾರೆ.
'ಐ ಸಪೋರ್ಟ್ ಮದನ್'
ರಾಜಕೀಯ ಪಕ್ಷಗಳು ಪ್ರಚಾರ ಆರಂಭಿಸುವ ಮೊದಲೇ ಮದನ್ ತಳಮಟ್ಟದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. 'ಐ ಸಪೋರ್ಟ್ ಮದನ್' ಎಂದು ಸೋಶಿಯಲ್ ಮೀಡಿಯಾದಲ್ಲೂ ಬಹಳಷ್ಟು ಜನ ಬೆಂಬಲ ವ್ಯಕ್ತಪಡಿಸಿದ್ದಾರೆ. ಮದನ್ ಅವರನ್ನು ಹಿಂಬಾಲಿಸುತ್ತಿರುವಂತಹ ಸ್ವಯಂ ಸೇವಕರು ಕೂಡಾ ಮಂಗಳೂರಿನ ಸ್ವಚ್ಛತೆಗೆ ಮದನ್ ಜತೆ ಕೈಜೋಡಿಸಿದ್ದಾರೆ.
ಮೂಡಿಸಿದ ಹೊಸ ಆಶಾಭಾವನೆ
ಒಟ್ಟಿನಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ರಾಜಕೀಯ ಕಚ್ಚಾಟದ ನಡುವೆ, ಸ್ವಚ್ಛ ಪರಿಸರದೊಂದಿಗೆ ಸ್ವಚ್ಛ ರಾಜಕಾರಣ ನೀಡುವ ಉದ್ದೇಶದಿಂದ ಮಾಜಿ ಯುವ ಪೊಲೀಸ್ ಅಧಿಕಾರಿ ಮುನ್ನಡಿಯಿಟ್ಟಿದ್ದು, ಜನರಲ್ಲೂ ಹೊಸ ಆಶಾಭಾವನೆ ಮೂಡಿಸುತ್ತಿದೆ.