ಅಹವಾಲು ಆಲಿಸುವ ಸೌಜನ್ಯ ತೋರದವರು ಜನಪ್ರತಿನಿಧಿಯಾಗಲು ಯೋಗ್ಯರಲ್ಲ:ಲೋಬೋ
ಮಂಗಳೂರು, ಅಕ್ಟೋಬರ್ 28: ಸುರತ್ಕಲ್ ಟೋಲ್ ಗೇಟ್ ಮುಚ್ಚುವಂತೆ ಆಗ್ರಹಿಸಿ ಜನರು ಹಗಲು ರಾತ್ರಿ ಧರಣಿ ನಡೆಸುತ್ತಿದ್ದರೂ, ಕನಿಷ್ಟ ಸ್ಥಳಕ್ಕೆ ತೆರಳಿ ಅಹವಾಲು ಆಲಿಸುವ ಸೌಜನ್ಯ ತೋರದವರು ಜನಪ್ರತಿನಿಧಿಯಾಗಲು ಯೋಗ್ಯರಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಮಾಜಿ ಶಾಸಕ ಜೆ ಆರ್ ಲೋಬೋ ವಾಗ್ದಾಳಿ ನಡೆಸಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ಮುಚ್ಚುವಂತೆ ವಿರೋಧಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ 6 ದಿನ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಧರಣಿ ನಿರತರನ್ನು ಭೇಟಿಯಾದ ಮಾಜಿ ಶಾಸಕ ಜೆ ಆರ್ ಲೋಬೋ ಸುರತ್ಕಲ್ ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹ ಆರಂಭವಾದದ್ದು ಬಿಜೆಪಿ ಆಡಳಿತದ ಅವಧಿಯಲ್ಲಿ.
ಈ ಟೋಲ್ ಗೇಟ್ ಮುಚ್ಚಲು ನಿರ್ಧರಿಸಲಾಗಿತ್ತು . ಆದರೆ ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹ ಮುಂದುವರಿಯಲು ಸಂಸದ ನಳಿನ್ ಕುಮಾರ್ ಕಟೀಲರೇ ನೇರ ಹೊಣೆ.

ತನ್ನ ವೈಫಲ್ಯವನ್ನು ಮುಚ್ಚಿಡಲು ಸಂಸದ ನಳಿನ್ ಕುಮಾರ್ ಕಟೀಲ್ ಟೋಲ್ ಗೇಟ್ ಆರಂಭವಾಗಿರುವುದು ಯುಪಿಎ ಕಾಲದಲ್ಲಿ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ಅಕ್ರಮ ಟೋಲ್ ಗೇಟ್ ಮುಚ್ಚಿಸಲಾಗದಿದ್ದರೆ ಸಂಸದ ಸ್ಥಾನಕ್ಕೆ ನಳಿನ್ ಈ ಕೂಡಲೇ ರಾಜಿನಾಮೆ ನೀಡಲಿ ಎಂದು ಲೋಬೋ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಸಂಸದ ನಳಿನ್ ಕುಮಾರ್ ಕಟೀಲ್ ಜನರನ್ನು ಮೂರ್ಖರೆಂದು ತಿಳಿದಿದ್ದಾರೆ. ಸುರತ್ಕಲ್ ಟೋಲ್ ಗೇಟ್ ಗುತ್ತಿಗೆ ನವೀಕರಿಸಲು ನಳಿನ್ ಕುಮಾರ್ ಕಟೀಲರು ನಡೆಸಿದ ಆಟಗಳನ್ನು ಕಂಡಿರುವ ಜನತೆ ಈ ಬಾರಿ ಸರಿಯಾದ ಪಾಠ ಕಲಿಸಲಿದ್ದಾರೆ.

ಅಕ್ಟೋಬರ್ 30 ಕ್ಕೆ ಟೋಲ್ ಸಂಗ್ರಹ ನಿಲ್ಲದಿದ್ದಲ್ಲಿ ಪ್ರತಿಭಟನೆ ನೇರ ಕಾರ್ಯಾಚರಣೆಯಾಗಿ ಬದಲಾಗಲಿದೆ ಎಂದು ಎಚ್ಚರಿಸಿದರು.











Click it and Unblock the Notifications