'ರೋಮ್ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು ಬಾರಿಸುತ್ತಿದ್ದ, ಮಣಿಪುರ ಉರಿಯುತ್ತಿದೆ ಮೋದಿ ಪ್ರಚಾರ ಮಾಡುತ್ತಿದ್ದಾರೆ'
ಮಂಗಳೂರು, ಮೇ. 05: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ರೋಮ್ನ ನೀರೋಗೆ ಹೋಲಿಸಿದ್ದಾರೆ. ರೋಮ್ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು ಬಾರಿಸಿದಂತೆ, ಮಣಿಪುರ ರಾಜ್ಯ ಹೊತ್ತಿ ಉರಿಯುತ್ತಿರುವಾಗ ಕರ್ನಾಟಕದಲ್ಲಿ ಮೋದಿ ಪ್ರಚಾರದಲ್ಲಿ ನಿರತರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಭಾರತದ ಇತಿಹಾಸದಲ್ಲಿ ಯಾವುದೇ ಪ್ರಧಾನಿ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಇಷ್ಟು ಸಮಯವನ್ನು ಕಳೆದಿಲ್ಲ. ಇದು ಚುನಾವಣಾ ಫಲಿತಾಂಶದ ಬಗ್ಗೆ ಪ್ರಧಾನಿ ಎಷ್ಟು ಚಿಂತಿತರಾಗಿದ್ದಾರೆಂದು ತೋರಿಸುತ್ತದೆ ಎಂದು ಹೇಳಿದ್ದಾರೆ.

"ತಮ್ಮ ಪಕ್ಷಕ್ಕೆ ಉತ್ತಮ ಫಲಿತಾಂಶ ಬರುತ್ತದೆ ಎಂಬ ಬಗ್ಗೆ ಖಚಿತತೇ ಇದ್ದಿದ್ದರೇ, ಅವರು ಅಷ್ಟು ಆಕ್ರಮಣಕಾರಿಯಾಗಿ ಪ್ರಚಾರ ಮಾಡುತ್ತಿರಲಿಲ್ಲ. ಮಣಿಪುರ ಹೊತ್ತಿ ಉರಿಯುತ್ತಿದ್ದು, ಇದನ್ನು ನಿಯಂತ್ರಿಸಲು ಬಾಕ್ಸರ್ ಮೇರಿ ಕೋಮ್ ಕೂಡ ನೆರವು ಕೋರಿದ್ದಾರೆ. ನೀರೋ ಆಳ್ವಿಕೆಯಲ್ಲಿ ರೋಮ್ನಲ್ಲಿದ್ದ ಪರಿಸ್ಥಿತಿಯೇ ಈಗ ದೇಶದಲ್ಲೂ ಇದೆ" ಎಂದು ವೀರಪ್ಪ ಮೊಯ್ಲಿ ವಾಗ್ದಾಳಿ ನಡೆಸಿದ್ದಾರೆ.
ಪ್ಯೂ ಸಂಶೋಧನಾ ವರದಿಯ ಇತ್ತೀಚಿನ ಸಮೀಕ್ಷೆಯನ್ನು ಉಲ್ಲೇಖಿಸಿ, ಶೇಕಡಾ 50 ಕ್ಕಿಂತ ಹೆಚ್ಚು ಭಾರತೀಯರು ಮಿಲಿಟರಿ ಆಡಳಿತವನ್ನು ಬಯಸುತ್ತಾರೆ ಮತ್ತು ಹೆಚ್ಚಿನ ನಾಗರಿಕರು ದೇಶವನ್ನು ತೊರೆಯಲು ಬಯಸುತ್ತಾರೆ ಎಂದು ವರದಿ ಹೇಳುತ್ತದೆ. ಇದು ದೇಶ ಮತ್ತು ಜನರಲ್ಲಿ ಸ್ಥಿರತೆ ಇಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಮೊಯ್ಲಿ ಹೇಳಿದದ್ದಾರೆ.

ಮೋದಿ-ಶಾ ಆಡಳಿತದಲ್ಲಿ ಇಷ್ಟೇಲ್ಲಾ ನಡೆಯುತ್ತಿದೆ. ಇಲ್ಲಿ ಶಾಂತಿಯಿಂದ ಬದುಕಲು ಸಾಧ್ಯವಿಲ್ಲ. ಅವರು ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಮಾತನಾಡುತ್ತಾರೆ. ಆದರೆ, ಒಂದು ಇಂಜಿನ್ (ಕರ್ನಾಟಕದ) ಕಾರ್ಯನಿರ್ವಹಿಸುವುದಿಲ್ಲ ಎಂದು ಮೋದಿಯವರ ಡಬಲ್ ಇಂಜಿನ್ ಸರ್ಕಾರದ ವಾಗ್ದಾನದ ಬಗ್ಗೆ ಟೀಕಿಸಿದ್ದಾರೆ. ಬಿಜೆಪಿಯು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳಿ ಮತ್ತು ಭರವಸೆಗಳ ಮೇಲೆ ಪ್ರಚಾರ ಮಾಡುತ್ತಿದೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ನಾಯಕ ಎಂದು ಬಿಂಬಿಸುವ ಮೂಲಕ ಬಿಜೆಪಿ ಚುನಾವಣೆಗೆ ಹೋಗುತ್ತಿದೆ ಎಂದು ಮಾಜಿ ಕೇಂದ್ರ ಸಚಿವರು ಟೀಕಿಸಿದರು. ''ಅವರು ಸಿಎಂ ಆಗಿದ್ದಾಗ ಅವರ ಸರಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರಕಾರ ಎಂದು ಹೇಳಲಾಗುತ್ತಿತ್ತು. ಈಗ ಅವರ ಮುಖವನ್ನಿಟ್ಟುಕೊಂಡು ಚುನಾವಣೆಗೆ ಹೋಗುತ್ತಿದ್ದಾರೆ. ಸಿಎಂ ಸಂಪೂರ್ಣ ದೂರ ಸರಿದಿದ್ದಾರೆ" ಎಂದು ಆರೋಪಿಸಿದ್ದಾರೆ.
ಕರಾವಳಿ ಕರ್ನಾಟಕದ ಹಲವು ಅಭ್ಯರ್ಥಿಗಳನ್ನು ಭ್ರಷ್ಟರು ಎಂಬ ಕಾರಣಕ್ಕೆ ಬಿಜೆಪಿ ಬದಲಾಯಿಸಿದೆ ಎಂದು ಆರೋಪಿಸಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ರಾಜ್ಯದಲ್ಲಿ ಗಲಭೆಯಾಗುತ್ತದೆ ಎಂಬ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇನ್ನು, ಬಜರಂಗದಳ ನಿಷೇಧ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅವರು, ಹಿಂದೆ ಗೋವಾದಲ್ಲಿ ಮನೋಹರ್ ಪರಿಕ್ಕರ್ ಸರ್ಕಾರ ಶ್ರೀರಾಮ ಸೇನೆಯನ್ನು ಬ್ಯಾನ್ ಮಾಡಿತ್ತು. ಹಾಗದರೇ ಇದು ರಾಮನ ವಿರೋಧವಲ್ಲವೇ ಎಂದು ವೀರಪ್ಪ ಮೊಯ್ಲಿ ಪ್ರಶ್ನಿಸಿದ್ದಾರೆ. ಬಿಜೆಪಿಯವರು ದೇಶದಲ್ಲಿ ಅತೀ ದೊಡ್ಡ ಪ್ರತಿಮೆ ಸ್ಥಾಪಿಸಿದ ವಲ್ಲಭಭಾಯ್ ಪಟೇಲ್ ಅವರೇ ಹಿಂದೆ ಆರ್ಎಸ್ಎಸ್ ಅನ್ನು ಬ್ಯಾನ್ ಮಾಡಿದ್ದರು. ಆದರೆ ಜವಾಹರಲಾಲ್ ನೆಹರೂ ಅವರು ಈ ನಿಷೇಧವನ್ನು ಹಿಂಪಡೆದಿದ್ದರು ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications